ಹಾವೇರಿ: ಪ್ರಧಾನಿ ಮೋದಿ ಪೆಟ್ರೊಲ್, ಡಿಸೆಲ್ ಹಾಗೂ ಅಡುಗೆ ಅನಿಲ ದರ ಹೆಚ್ಚಿಸುವ ಮೂಲಕ ಭಾರತದ ಸಮಸ್ತ ಪ್ರಜೆಗಳಿಗೆ ಅಚ್ಛೇ ದಿನ್ ಆಯೇಗಾ ಎನ್ನುವ ಕನಸು ಬಿತ್ತುತ್ತಿದ್ದಾರೆ. ಆದರೆ ಇಲ್ಲಿ ಬಡವರು ಅವರಿಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ ಅಧ್ಯಕ್ಷ ನಾಸೀರ ಖಾನ ಪಠಾಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿ ವಿರುದ್ಧ ಜಿಲ್ಲಾ ಯುವ ಕಾಂಗ್ರೆಸ್ ನಗರದ ಬಸ್ ನಿಲ್ದಾಣದ ಬಳಿ ಗುರುವಾರ ಹೆದ್ದಾರಿಯಲ್ಲೇ ಕಟ್ಟಿಗೆ ಇಟ್ಟು ಒಲೆ ಹೊತ್ತಿಸಿ ಚಹ ತಯಾರಿಸುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದರು. ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಎಲ್ಪಿಜಿ ಸಿಲಿಂಡರ್ ದರ ಕೇವಲ 420 ರೂ.ಇತ್ತು. ಈಗ 770 ರೂಗೆ ಹೆಚ್ಚಳಗೊಂಡಿದೆ. ವಾಣಿಜ್ಯ ಸಿಲಿಂಡರ್ ದರ 890 ರೂ.ಗಳಿಂದ 1,390 ಕ್ಕೆ ಹೆಚ್ಚಳವಾಗಿದೆ.
ಯುಪಿಎ ಅವಧಿಯಲ್ಲಿ (2014) ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ 124 ಇತ್ತು ಪೆಟ್ರೋಲ್ 68 ಹಾಗೂ ಡಿಸೆಲ್ 55 ಇತ್ತು. ಈಗ ಕಚ್ಚಾ ತೈಲ ಬೆಲೆ ಬ್ಯಾರಲ್ಗೆ 55 ಕಡಿಮೆ ಆಗಿದೆ. ಪೆಟ್ರೊಲ್ 76.25 ಹಾಗೂ ಡಿಸೆಲ್ 63.10 ಆಗಿದೆ. ಈ ಎಲ್ಲ ಅಂಕಿ-ಅಂಶಗಳು ಈ ಅಚ್ಛೇ ದಿನ್ ತುಪ್ಪ ಸವರುವ ಬಿಜೆಪಿ ಸರಕಾರದ್ದು ಎಂದು ಟೀಕಿಸಿದರು.
ನೋಟ್ ಅಮಾನ್ಯ ಮೂಲಕ ಬಡವರ ತುತ್ತು ಕಸಿದುಕೊಂಡಿರುವ ಪ್ರಧಾನಿ ಮೋದಿ ಈಗ ಪೆಟ್ರೊಲ್, ಡಿಸೆಲ್ ಹಾಗೂ ಸಿಲಿಂಡರ್ ದರ ಏರಿಸುವ ಮೂಲಕ ಬಡವರ ಹೊಟ್ಟೆಗೆ ಬರೆ ಎಳೆದಿದ್ದಾರೆ.
ಈಗಲೂ ಕಾಲ ಮಿಂಚಿಲ್ಲ. ಕೂಡಲೇ ದರ ಏರಿಕೆ ಕೈಬಿಡಬೇಕು. ಶ್ರೀಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ದರ ನಿಗದಿಪಡಿಸುವಂತೆ ಆಗ್ರಹಿಸಿದರು. ಇದಕ್ಕೆ ಸ್ಪಂದಿಸದಿದ್ದಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸಂಜೀವಗಾಂಧಿ, ಸಂಜೀವಣ್ಣನವರ, ಮಲ್ಲೇಶಪ್ಪ ಸಾವುಕಾರ, ಪೀರಸಾಬ ತಿಮ್ಮೇನಹಳ್ಳಿ, ಮಲ್ಲಿಕಸಾಬ ಬಾಣಿ, ರವಿ ಉಕ್ಕುಂದ, ಬಸವರಾಜ ನಿಂಗದಳ್ಳಿ, ಜಾಫರಲಿ ಅಗಡಿ, ನಾಗರಾಜ ಬಡಮ್ಮನವರ, ಸಂತೋಷ ಕೋಪರ್ಡೆ, ಅಬ್ದುಲ್ ಲಕ್ಕೊಳ್ಳಿ, ಮೂರ್ತಿ ಕರ್ಜಗಿ, ಹಜರತಲಿ ಕಾಗಿನೆಲ್ಲಿ, ನಿಸಾರ ಪಟೇಲ್, ರವಿ ಕಿಲ್ಲೇದಾರ ಹಾಗೂ ದಾದಾ ಖಲಂದರ ಅಬ್ಬುಸಾಬನವರ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.