ಆ್ಯಪ್ನಗರ

ಪೀಡಕ ಪತಿ ನದಿಗೆ ತಳ್ಳಿದರೂ ಅದೃಷ್ಟವಶಾತ್ ಬದುಕಿದ ಪತ್ನಿ

ಸದ್ಯಕ್ಕೆ ಮಕ್ಕಳು ಬೇಡವೆಂದು ಕ್ಯಾತೆ ತೆಗೆದು ತುಂಬು ಗರ್ಭಿಣಿ ಪತ್ನಿಯನ್ನು ಗುರುವಾರ ರಾತ್ರಿ ನದಿಗೆ ಎಸೆದು ಪರಾರಿಯಾಗಿದ್ದ ಪತಿ ಮಹಾಶಯನನ್ನು ರಟ್ಟೀಹಳ್ಳಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

Vijaya Karnataka 24 Jun 2018, 9:22 am
ಹಿರೇಕೆರೂರು (ಹಾವೇರಿ): ಸದ್ಯಕ್ಕೆ ಮಕ್ಕಳು ಬೇಡವೆಂದು ಕ್ಯಾತೆ ತೆಗೆದು ತುಂಬು ಗರ್ಭಿಣಿ ಪತ್ನಿಯನ್ನು ಗುರುವಾರ ರಾತ್ರಿ ನದಿಗೆ ಎಸೆದು ಪರಾರಿಯಾಗಿದ್ದ ಪತಿ ಮಹಾಶಯನನ್ನು ರಟ್ಟೀಹಳ್ಳಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
Vijaya Karnataka Web arrested


ರಟ್ಟೀಹಳ್ಳಿ ತಾಲೂಕಿನ ಚಿಕ್ಕಕಬ್ಬಾರ ಗ್ರಾಮದ ರೂಪೇಶಗೌಡ ಅಲಿಯಾಸ ರವೀಂದ್ರಗೌಡ ಶಂಕರಗೌಡ ಪಾಟೀಲ್‌ ಎಂಬುವನೇ ಆರೋಪಿ. ಈತ ಎರಡು ವರ್ಷದ ಹಿಂದೆ ಗಲಗಿನಕಟ್ಟಿ ಗ್ರಾಮದ ಅರುಣಾ ಎಂಬುವರನ್ನು ಹೊನ್ನಾಳಿಯ ದೇವಸ್ಥಾನವೊಂದರಲ್ಲಿ ಗಲಗಿನಕಟ್ಟಿ ಗ್ರಾಮಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದ.

ಅರುಣಾ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ತ್ಯಾಗದಕಟ್ಟಿ ಸರಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ನರ್ಸ್‌ ಆಗಿ ಸೇವೆ ಸಲ್ಲಿಸುತ್ತ ವಸತಿ ಗೃಹದಲ್ಲಿ ವಾಸವಾಗಿದ್ದಳು. ತನ್ನ ಮನೆಯವರಿಗೆ ಹೇಳದೇ ಮದುವೆಯಾಗಿದ್ದ ರೂಪೇಶಗೌಡ ಸದ್ಯಕ್ಕೆ ಮಕ್ಕಳು ಬೇಡ ಅಬಾರ್ಷನ್‌ ಮಾಡಿಸಿಕೊಳ್ಳುವಂತೆ 5 ತಿಂಗಳ ಗರ್ಭಿಣಿ ಪತ್ನಿಗೆ ಪೀಡಿಸುತ್ತಿದ್ದನು. ಇದಕ್ಕೆ ಪತ್ನಿ ನಿರಾಕರಿಸಿದ್ದರಿಂದ ಕುಪಿತಗೊಂಡಿದ್ದ ರೂಪೇಶಗೌಡ ಪತ್ನಿಯನ್ನು ಕೊಲೆ ಮಾಡುವ ಉದ್ದೇಶದಿಂದ ಹರಿಹರ ತಾಲೂಕಿನ ನಂದಿಗುಡಿ ಹತ್ತಿರದ ತುಂಗಭದ್ರ ನದಿ ಸೇತುವೆ ಬಳಿ ಕಾರಿನಲ್ಲಿ ಕರೆದುಕೊಂಡು ಬಂದು ಸೇತುವೆ ಮೇಲಿಂದ ನದಿಗೆ ತಳ್ಳಿ ಪರಾರಿಯಾಗಿದ್ದನು.

ಬದುಕುಳಿದ ಪತ್ನಿ:

ನದಿಯಲ್ಲಿ ಸ್ವಲ್ಪ ದೂರ ತೇಲಿಹೋದ ಅರುಣಾ ನದಿಯಲ್ಲಿದ್ದ ಗಿಡವನ್ನು ಹಿಡಿದುಕೊಂಡು ರಾತ್ರಿ ಕಳೆದಿದ್ದಾಳೆ. ಬೆಳಗ್ಗೆ ಇವಳ ಕಿರುಚಾಟ ಕೇಳಿ ಯಾರೋ ರಕ್ಷ ಣೆ ಮಾಡಿದ್ದಾರೆ.

ಈ ಹಿಂದೆ ಅರುಣಾಗೆ ಮನೆಯವರು ಬೇರೆ ಯುವಕನ ಜೊತೆ ಮದುವೆ ನಿಶ್ಚಯ ಮಾಡಿದ್ದರು. ಆದರೆ ಮದುವೆಗೆ ಎರಡು ದಿನ ಮುಂಚೆ ಹೊನ್ನಾಳಿಗೆ ಹೋಗಿ ಬರುತ್ತೇನೆ ಎಂದು ಹೋಗಿದ್ದ ಈಕೆ ನಾಪತ್ತೆಯಾಗಿದ್ದಳು. ಈಕೆ ಪೋಷಕರು ಹೊನ್ನಾಳಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಮನೆಯ ಹಿರಿಯರು ನೋಡಿದ್ದ ವರನ ಕೈಹಿಡಿಯುವ ಬದಲು ಈಕೆ ರೂಪೇಶಗೌಡನನ್ನು ವರಿಸಿದ್ದಳು.

ರಟ್ಟೀಹಳ್ಳಿ ಪೊಲೀಸ್‌ ಠಾಣೆಗೆ ಶನಿವಾರ ಪಾಲಕರೊಂದಿಗೆ ಆಗಮಿಸಿದ ಅರುಣಾ ತನ್ನ ಪತಿ ರೂಪೇಶಗೌಡ ವಿರುದ್ಧ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕೊಲೆಗೆ ಪ್ಲಾನ್‌

ಹೊರಗೆ ಊಟ ಮಾಡಿಕೊಂಡು ಬರೋಣವೆಂದು ಹೇಳಿ ರೂಪೇಶಗೌಡ ಪತ್ನಿಯನ್ನು ಗುರುವಾರ ರಾತ್ರಿ 8.30ಕ್ಕೆ ತ್ಯಾಗದಕಟ್ಟಿಯಿಂದ ಕಾರಿನಲ್ಲಿ ಉಪಾಯದಿಂದ ಕರೆತಂದಿದ್ದನು. ರಾತ್ರಿ 11.30ರ ಸುಮಾರು ನಂದಿಗುಡಿ ಗ್ರಾಮದ ಬಳಿಯ ತುಂಗಭದ್ರ ನದಿ ಸೇತುವೆಗೆ ಕರೆದುಕೊಂಡು ಬಂದು ಬಲವಂತವಾಗಿ ಕಾರಿನಿಂದ ಕೆಳಗೆ ಇಳಿಸಿ ಕೊಲೆ ಮಾಡುವ ಉದ್ದೇಶದಿಂದ ತುಂಗಭದ್ರ ನದಿಗೆ ತಳ್ಳಿದ್ದನು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ