ಅಕ್ಕಿಆಲೂರು: ಆಡಳಿತ ವಿಕೇಂದ್ರೀಕರಣದ ದೃಷ್ಟಿಯಿಂದ ರಾಜ್ಯದಲ್ಲಿ ಹಿರಿದಾಗಿರುವ ಹಾನಗಲ್ಲ ತಾಲೂಕು ವಿಭಜಿಸಿ ಅಕ್ಕಿಆಲೂರನ್ನು ಪ್ರತ್ಯೇಕ ತಾಲೂಕು ಕೇಂದ್ರವಾಗಿ ರಚಿಸಬೇಕು ಎಂದು ಒತ್ತಾಯಿಸಿ ವಿವಿಧ ಮಠಾಧೀಶರು, ತಾಲೂಕು ನಿರ್ಮಾಣ ಹೋರಾಟ ಸಮಿತಿ ಪದಾಧಿಕಾರಿಗಳು, ಸುತ್ತಲಿನ ಗ್ರಾಮಸ್ಥರು ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಅಕ್ಕಿಆಲೂರಿಗೆ ನೂತನ ತಾಲೂಕು ಕೇಂದ್ರವಾಗುವ ಎಲ್ಲ ಅರ್ಹತೆಗಳಿವೆ. ಸುಲಭ ಆಡಳಿತದ ದೃಷ್ಟಿಯಿಂದ ಹಾನಗಲ್ಲ ತಾಲೂಕು ವಿಭಜಿಸಬೇಕಿದೆ. ಈ ನಿಟ್ಟಿನಲ್ಲಿ ಕಳೆದ ಹಲವು ದಶಕಗಳಿಂದ ಈ ಭಾಗದಲ್ಲಿ ಹೋರಾಟ ನಡೆಯುತ್ತಲೇ ಬರಲಾಗಿದೆ. ರಾಜ್ಯದಲ್ಲಿ ಈಗಾಗಲೇ 50 ಹೊಸ ತಾಲೂಕು ರಚನೆ ಮಾಡಲಾಗಿದೆ. ಅಕ್ಕಿಆಲೂರನ್ನು ಸಹ ತಾಲೂಕಾಗಿ ಘೋಷಣೆ ಮಾಡಬೇಕು. ಇದರಿಂದ ಸುತ್ತಲಿನ 80 ಕ್ಕೂ ಹೆಚ್ಚು ಗ್ರಾಮಗಳಿಗೆ ಅನುಕೂಲವಾಗಲಿದೆ. ತಾಲೂಕು ಕೇಂದ್ರವಾಗಲು ಎಲ್ಲ ಸೌಲಭ್ಯಗಳೂ ಇದ್ದು, ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಲಾಯಿತು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿದ್ದರಾಮಯ್ಯ ಅವರು, ಅಧಿಕಾರಿಗಳಿಂದ ವರದಿ ಪಡೆದು ಅಕ್ಕಿಆಲೂರನ್ನು ತಾಲೂಕು ಕೇಂದ್ರವಾಗಿ ಘೋಷಿಸಲು ಅಗತ್ಯ ಕ್ರಮದ ಭರವಸೆ ನೀಡಿದರು.
ವಿರಕ್ತಮಠದ ಶಿವಬಸವ ಸ್ವಾಮೀಜಿ, ಮುತ್ತಿನಕಂತಿಮಠದ ಚಂದ್ರಶೇಖರ ದೇವರು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಜಿಪಂ ಸದಸ್ಯ ಟಾಕನಗೌಡ ಪಾಟೀಲ, ಮಾಜಿ ಸದಸ್ಯ ಕೃಷ್ಣ ಈಳಿಗೇರ, ಹೋರಾಟ ಸಮಿತಿ ಅಧ್ಯಕ್ಷ ಸದಾಶಿವ ಬೆಲ್ಲದ, ಮುಖಂಡರಾದ ಲಕ್ಷ ್ಮಣ ಹೊನ್ನಣ್ಣನವರ, ವೆಂಕಟೇಶ ಬೊಂಗಾಳೆ, ಶಿವಕುಮಾರ ಹಿರೇಮಠ, ಮಲ್ಲನಗೌಡ ಪಾಟೀಲ, ಆನಂದ ಹವಳಣ್ಣನವರ ಇದ್ದರು.