ಸವಣೂರು:ಕಾನೂನು ಬಾಹಿರವಾಗಿ ಸ್ಥಳೀಯ ಪುರಸಭೆ ವಾಣಿಜ್ಯ ಮಳಿಗೆಯನ್ನು ಬಾಡಿಗೆ ನೀಡಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಾರ್ವಜನಿಕರು ಮಂಗಳವಾರ ಉಪವಿಭಾಗಾಧಿಕಾರಿ ಎಂ.ರೋಷನ್ ಅವರಿಗೆ ಹಾಗೂ ಪುರಸಭೆ ಮುಖ್ಯಾಧಿಕಾರಿ ಎಚ್.ಎ. ಕುಮಾರ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಪಟ್ಟಣದ ಜೋಳದ ಮಾರುಕಟ್ಟೆಯಲ್ಲಿರುವ ಪುರಸಭೆಯ ವಾಣಿಜ್ಯ ಸಂಕೀರ್ಣದ ಮೊದಲನೇ ಮಹಡಿಯಲ್ಲಿರುವ ಮಳಿಗೆಯನ್ನು ಪುರಸಭೆ ನಿಯಮ ಉಲ್ಲಂಘಿಸಿ, ಲಿಲಾವು ಕರಿಯದೇ, ಲೋಕೋಪಯೋಗಿ ಬಾಡಿಗೆ ರಕಂನ್ನು ಗಣನೆಗೆ ತೆಗೆದುಕೊಳ್ಳದೇ ಖಾಸಗಿ ವ್ಯಕ್ತಿಯೊಬ್ಬರಿಗೆ ಬಾಡಿಗೆಗೆ ನೀಡಿದೆ. ಆದ್ದರಿಂದ, ಕೂಡಲೇ ಕಾನೂನು ಚೌಕಟ್ಟಿನಲ್ಲಿ ಕಟ್ಟಡದ ಹರಾಜು ಪ್ರಕ್ರಿಯೆಯನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಈ ಕುರಿತು ಸಾರ್ವಜನಿಕರು ಕಾನೂನು ಮೊರೆ ಹೋಗಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಶೋಯಬ್ ಪಠಾಣ, ಖಾಲೀದ ಜವಳಿ, ಗನಿ ಕಿಲ್ಲೇದಾರ, ಸರ್ಫರಾಜ್ ಗೌಡಗೇರಿ, ಆಸೀಪ್ ಸಿಪಿತಲಾಬ್, ಸಮೀರ ಮಿರ್ಜಾ, ಜೀಶಾನ್ ನಗಾಡ ಹಾಗೂ ಇತರರು ಇದ್ದರು.