ಆ್ಯಪ್ನಗರ

ತಾಪಮಾನ ಏರಿಕೆ: ಬಸವಳಿದ ಜನತೆ

ಹಾನಗಲ್ಲ: ಬಿಸಿಲ ಪ್ರಕೋಪದ ಪರಿಣಾಮ ಬೀಸುವ ಗಾಳಿಯೂ ಬಿಸಿ ಅನುಭವ ನೀಡುತ್ತಿದ್ದು, ಮಲೆನಾಡು ಭಾಗವಾದ ಹಾನಗಲ್ಲ ಈಗ ಬಿಸಿಲನಾಡು ಎಂಬಂತೆ ಭಾಸವಾಗುತ್ತಿದೆ.

Vijaya Karnataka 18 May 2019, 5:00 am
ಹಾನಗಲ್ಲ: ಬಿಸಿಲ ಪ್ರಕೋಪದ ಪರಿಣಾಮ ಬೀಸುವ ಗಾಳಿಯೂ ಬಿಸಿ ಅನುಭವ ನೀಡುತ್ತಿದ್ದು, ಮಲೆನಾಡು ಭಾಗವಾದ ಹಾನಗಲ್ಲ ಈಗ ಬಿಸಿಲನಾಡು ಎಂಬಂತೆ ಭಾಸವಾಗುತ್ತಿದೆ.
Vijaya Karnataka Web HVR-17HGL3


ಬೆಳಗಾಗುತ್ತಲೇ ಆವರಿಸಿಕೊಳ್ಳುವ ಬಿಸಿಲ ಧಗೆಯು ಮಧ್ಯಾಹ್ನದ ಹೊತ್ತಿಗೆಲ್ಲ ತನ್ನ ಪ್ರಖರತೆ ಹೆಚ್ಚಿಸಿಕೊಳ್ಳುತ್ತಿದೆ. ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಅಧಿಕ ಮಳೆ ಮತ್ತು ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಹಾನಗಲ್ಲ ತಾಲೂಕು ಈ ಮಟ್ಟದ ಬಿಸಿಲು ಕಂಡಿಲ್ಲ. ಈ ಬಾರಿಯ ಬೇಸಿಗೆ ಕಳೆಯುವುದು ಇಲ್ಲಿನ ಜನರಿಗೆ ನರಕಯಾತನೆ ಆಗುತ್ತಿದೆ.

ನಿರಂತರ ಮಳೆ ಕೊರತೆ ಬರ ಆವರಿಸಲು ಕಾರಣವಾಗಿದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಅಷ್ಟಿಷ್ಟು ನೀರು ಸಂಗ್ರಹಿಕೊಳ್ಳುತ್ತಿದ್ದ ಸಣ್ಣಪುಟ್ಟ ಕೆರೆ, ಕಟ್ಟೆಗಳಲ್ಲಿ ಹನಿ ನೀರು ಇಲ್ಲ. ಈ ಕಾರಣಕ್ಕೆ ಬಿಸಿಲಿನ ಜೊತೆಯಲ್ಲಿ ಹವಾಮಾನವೂ ಬಿಸಿಯಾಗುತ್ತಿದೆ.

ವಾಯುಗುಣ ಸಹಜ ಸ್ಥಿತಿಯಲ್ಲಿಡಲು ಸಹಕಾರಿ ಆಗುತ್ತಿದ್ದ ಗಿಡ-ಮರಗಳು ಅಭಿವೃದ್ಧಿ ನೆಪದಲ್ಲಿ ತೆರವುಗೊಂಡಿರುವುದು, ನೀರು ಸಂಗ್ರಹಣೆಯ ಕೆರೆ-ಕಟ್ಟೆಗಳು ಅತಿಕ್ರಮಣಗೊಂಡು, ಜನವಸತಿ ಪ್ರದೇಶಗಳಾಗಿ ಮಾರ್ಪಟ್ಟಿರುವ ಪರಿಣಾಮ, ವಾತಾವರಣದಲ್ಲಿ ಈಗ ಏರುಪೇರು. ವಿಪರೀತ ಧಗೆ..!

ಮಳೆ ಬಂದರೆ, ವಾತಾವರಣದಲ್ಲಿ ತಂಪು ತದೀತು.. ಎಂದು ಆಶಿಸುತ್ತಿರುವ ಜನರಿಗೆ ಮಳೆರಾಯ ಕೃಪೆ ತೋರುತ್ತಿಲ್ಲ. ಬೇಸಿಗೆ ಸಾಗ ಹಾಕಲು ಜನರು ಕಸರತ್ತು ನಡೆಸುವಂತಾಗಿದೆ. ಬಿಸಿಲ ಹಬೆಗೆ ಮೈಯಲ್ಲಿ ನಿತ್ರಾಣದ ಅನುಭವ. ಹೊರಗೆ ಆಟ ಆಡಲು ಆಗದೇ, ಮನೆಯಲ್ಲಿ ಕುಳಿತುಕೊಳ್ಳಲೂ ಆಗದ ಚಟಪಡಿಕೆಯಲ್ಲಿದ್ದಾರೆ ಚಿಣ್ಣರು..!!

ಬಿಸಿಲಿನಿಂದ ಬಸವಳಿಯುವ ಜನರು ಯತ್ತೇಚ್ಛವಾಗಿ ಹಣ್ಣು, ತಂಪು ಪಾನೀಯ ಸೇವಿಸುತ್ತಿದ್ದಾರೆ. ಎಳನೀರು, ವಿವಿಧ ಬ್ರಾಂಡ್‌ಗಳ ಕೂಲ್‌ಡ್ರಿಂಕ್ಸ್‌, ಜೂಸ್‌, ಲಸ್ಸಿ, ಐಸ್‌ಕ್ರಿಮ್‌, ತಳ್ಳುಗಾಡಿಯಲ್ಲಿ ಬರುವ ಗೋಲಿಸೋಡಾ, ತರಾವರಿ ಸೋಡಾವನ್ನು ಕ್ಷ ಣದಲ್ಲಿ ತಯಾರಿಸಿ ಕೊಡುವ ಮಷಿನ್‌ ಸೋಡಾ ವಾಟರ್‌ಗಳತ್ತ ಈಗ ಜನರ ಚಿತ್ತ.

ನಿಂಬೆ, ಆರೇಂಜ್‌, ಪುದಿನಾ, ಜೀರಾ.. ಹೀಗೆ ವಿವಿಧ ಬಗೆಯ ಸೋಡಾವಾಟರ್‌ ತಯಾರಿಸುವ ಇಲ್ಲಿನ ಎಪಿಎಂಸಿ ಮುಂಭಾಗದ ಸಂತೋಷ ಮೆಹರವಾಡೆ, ಗ್ರಾಹಕರನ್ನು ಸಂಭಾಳಿಸಲು ಆಗುತ್ತಿಲ್ಲ, ಪ್ರತಿ ಬೇಸಿಗೆಗಿಂತ ಈ ಸಾರಿ ಹೆಚ್ಚು ವ್ಯಾಪಾರವಿದೆ. ಬಿಸಲಿ ತಾಪ ಹೆಚ್ಚು ಇದೆ ಎಂದು ಹೇಳುತ್ತಾರೆ.

ಗಾಳಿಯೂ ಬಿಸಿ: ಪ್ಯಾನ್‌ ಗಾಳಿಯೂ ಬಿಸಿ... ಹೀಗಾಗಿ ಕೂಲರ್‌, ಎ.ಸಿ ಖರೀದಿಗೆ ಜನರು ಮುಂದಾಗುತ್ತಿದ್ದಾರೆ. ಎ.ಸಿ ಇಲ್ಲದ ಕಾರು ಪ್ರಯಾಣ ದುಸ್ತರ ಎನ್ನಿಸುತ್ತಿದೆ. 39 ಡಿಗ್ರಿ ಸೆಲ್ಸಿಯಸ್‌ ತಲುಪುತ್ತಿರುವ ಉಷ್ಣಾಂಶವು ಮಳೆ ಮೋಡಗಳನ್ನು ಹೊತ್ತು ತರುವುದೆಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ