ಆ್ಯಪ್ನಗರ

ಗಣೇಶ ಮೂರ್ತಿಗಳಿಗೆ ಅಂತಿಮ ರೂಪ

ಅಕ್ಕಿಆಲೂರು: ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸರಕಾರಿ ದ್ಯಾಮನಕೊಪ್ಪದ ನೆಗಳೂರ ಕುಟುಂಬ ತಯಾರಿಸಿರುವ ನೂರಾರು ಗಣೇಶ ಮೂರ್ತಿಗಳಿಗೆ ಕಲಾವಿದರು ಹಗಲಿರುಳೆನ್ನದೆ ಅಂತಿಮ ರೂಪ ನೀಡುತ್ತಿದ್ದಾರೆ.

Vijaya Karnataka 2 Sep 2019, 5:00 am
ಅಕ್ಕಿಆಲೂರು: ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸರಕಾರಿ ದ್ಯಾಮನಕೊಪ್ಪದ ನೆಗಳೂರ ಕುಟುಂಬ ತಯಾರಿಸಿರುವ ನೂರಾರು ಗಣೇಶ ಮೂರ್ತಿಗಳಿಗೆ ಕಲಾವಿದರು ಹಗಲಿರುಳೆನ್ನದೆ ಅಂತಿಮ ರೂಪ ನೀಡುತ್ತಿದ್ದಾರೆ.
Vijaya Karnataka Web HVR-1AKR1-A


ಸಾಂಪ್ರದಾಯಿಕ ಮಣ್ಣಿನ ಗಣೇಶನ ಮೂರ್ತಿಗಳ ತಯಾರಿಕೆಯಲ್ಲಿ ಸಿದ್ಧಹಸ್ತರಾಗಿರುವ ನೆಗಳೂರ ಕುಟುಂಬದ ಯಜಮಾನ ಪಂಚಾಕ್ಷ ರಪ್ಪ ತಮ್ಮ ಕುಟುಂಬದ ಸದಸ್ಯರೊಡನೆ ಸೇರಿ ಪ್ರತಿವರ್ಷ ಸುಮಾರು 500 ಕ್ಕೂ ಹೆಚ್ಚು ಗಣೇಶ ಮೂರ್ತಿ ತಯಾರಿಸುತ್ತಾರೆ. ಗೌರಿ ಗಣೇಶ ಹಬ್ಬಕ್ಕೆ ಮೂರ್ನಾಲ್ಕು ತಿಂಗಳು ಮೊದಲೇ ತಯಾರಿಕೆಯಲ್ಲಿ ತೊಡಗುವ ಈ ಕುಟುಂಬ ಅರ್ಧ ಅಡಿಯಿಂದ ಹಿಡಿದು ಆರೇಳು ಅಡಿವರೆಗಿನ ಎತ್ತರದ ಮೂರ್ತಿ ತಯಾರಿಸುವಲ್ಲಿ ಖ್ಯಾತಿ ಹೊಂದಿದೆ.

ಅರ್ಜುನ ವೇಷಧಾರಿ ಗಣೇಶ ಯುದ್ಧಕ್ಕೆ ತೆರಳಲು ರಥದಲ್ಲಿ ಸನ್ನದ್ಧನಾಗಿರುವುದು ಈ ವರ್ಷ ಈ ಕುಟುಂಬದ ಸದಸ್ಯರ ಕೈಚಳಕದಿಂದ ಅಂದವಾಗಿ ಮೂಡಿಬಂದಿದ್ದು, ರಾಕ್ಷ ಸ ಸಂಹಾರಿ, ಅರ್ಜುನ, ಕೃಷ್ಣ, ಕನಕದಾಸ, ಇಡಗುಂಜಿ ಗಣಪತಿ, ವಿದ್ಯಾ ಗಣಪತಿ ಸೇರಿದಂತೆ ಇತಿಹಾಸ ಪ್ರಚುರ ಪಡಿಸುವ ವಿವಿಧ ಭಂಗಿಗಳಲ್ಲಿ ಮೂಡಿಬಂದಿರುವ ನೂರಾರು ಮೂರ್ತಿಗಳು ಮನ ಸೆಳೆಯುತ್ತಿವೆ. ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ವೇಷಧಾರಿ ಗಣೇಶ ವಿಶೇಷವಾಗಿ ಮನ ಸೆಳೆಯುತ್ತಿದೆ. ಶಿವಲಿಂಗ ಹೊತ್ತಿರುವ ಗಣೇಶ ಬಾಹುಬಲಿ ಸಿನೆಮಾ ನೆನಪಿಸುವಂತಿದೆ. ವಿವಿಧ ವೇಷಧಾರಿ ಗಣೇಶ ಮೂರ್ತಿಗಳು ಕಲಾವಿದರ ಸಾಮಾಜಿಕ ಕಳಕಳಿ ಪ್ರಚುರಪಡಿಸುವಂತಿವೆ.

ಸಂಕಷ್ಟ ಎದುರಾದರೂ ಸಂಪ್ರದಾಯ ಪಾಲನೆ:
ಕಳೆದ ಐದಾರು ದಶಕಗಳಿಂದ ಗಣೇಶನ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಈ ಕುಟುಂಬ ಪ್ರತಿಬಾರಿಯೂ ಅನೇಕ ಹೊಸ ಹೊಸ ಸಮಸ್ಯೆ ಎದುರಿಸುತ್ತಿದ್ದರೂ ಸಂಪ್ರದಾಯ ಮಾತ್ರ ಕೈಬಿಟ್ಟಿಲ್ಲ. ಸಂಕಷ್ಟಗಳಿಂದ ಧೃತಿಗೆಡದೇ ಮೂಲ ಕಸುಬು ಮುಂದುವರೆಸಿಕೊಂಡು ಬಂದಿರುವ ನೆಗಳೂರ ಕುಟುಂಬ ತಯಾರಿಸುವ ಮೂರ್ತಿಗಳಿಗೆ ದೂರದ ಶಿವಮೊಗ್ಗ, ಹುಬ್ಬಳ್ಳಿ, ಸೊರಬ, ಸವಣೂರ, ಹಾವೇರಿ, ಶಿರಸಿ, ಅಕ್ಕಿಆಲೂರು, ಹಾನಗಲ್‌ ಸೇರಿದಂತೆ ಮತ್ತಿತರೆಡೆ ಸಾಕಷ್ಟು ಬೇಡಿಕೆ ಇದೆ.

ಆರ್ಥಿಕ ಸಂಕಷ್ಟ: ದಿನ ಕಳೆದಂತೆ ಗಣೇಶನ ಮೂರ್ತಿ ತಯಾರಿಕೆಗೆ ಅಗತ್ಯವಾಗಿರುವ ಕಚ್ಚಾ ವಸ್ತುಗಳ ಬೆಲೆ ಗಗನಕ್ಕೇರಿದೆ. ತಯಾರಿಕೆಗೆ ತಗಲುತ್ತಿದ್ದ ವೆಚ್ಚದಲ್ಲಿ ಗಣನೀಯ ಹೆಚ್ಚಳವಾಗಿದೆ. ಇಡೀ ಮೂರ್ತಿ ತಯಾರಿಕೆ ಪ್ರಕ್ರಿಯೆ ಕೈಯಿಂದಲೇ ಮಾಡುತ್ತಿರುವ ನೆಗಳೂರ ಕುಟುಂಬ ಈ ಕೆಲಸಕ್ಕಾಗಿ ಯಾವುದೇ ಯಂತ್ರಗಳ ಮೊರೆ ಹೋಗಿಲ್ಲ. ಪರಿಣಾಮವಾಗಿ ಅಪ್ಪಟ ಸಾಂಪ್ರದಾಯಿಕ ಶೈಲಿಯಲ್ಲಿಯೇ ತಯಾರಾಗುವ ಗಣೇಶ ಮೂರ್ತಿಗಳ ನಿರ್ಮಾಣ ವೆಚ್ಚ ಹೆಚ್ಚಿದೆ. ಇದನ್ನರಿಯದ ಸಾರ್ವಜನಿಕರು ಬೆಲೆ ಹೆಚ್ಚಳ ಲೆಕ್ಕಿಸದೇ ಬಾಯಿಗೆ ಬಂದಂತೆ ಕಡಿಮೆ ಬೆಲೆಗೆ ಕೇಳುತ್ತಾರೆ ಎಂಬ ಕೊರಗು ಈ ಕುಟುಂಬದಲ್ಲಿದೆ.

ಸದ್ಯಕ್ಕೆ ಕುಂಬಾರಿಕೆಯನ್ನೇ ಜೀವನ ನಿರ್ವಹಣೆಗೆ ಆಯ್ದು ಕೊಂಡಿರುವ ಪಂಚಾಕ್ಷ ರಪ್ಪನವರಿಗೆ ಈ ಕಾಯಕದಲ್ಲಿ ಹೆಚ್ಚಿನ ಲಾಭವಿಲ್ಲದಿದ್ದರೂ ಸಂತೃಪ್ತಿ ಇದೆ. ಸಂಕಷ್ಟದ ನಡುವೆಯೂ ತಮ್ಮ ಕಾಯಕ ಮುಂದುವರೆಸಿರುವ ಈ ಕುಟುಂಬಕ್ಕೆ ಸರಕಾರ ನೆರವಿನ ಹಸ್ತ ಚಾಚುವ ಅವಶ್ಯಕತೆ ಇದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ