ಆ್ಯಪ್ನಗರ

ಆಂಧ್ರ ಪ್ರದೇಶ ತ್ರಿವಳಿ ರಾಜಧಾನಿ ಯೋಜನೆಗೆ ರಾಜ್ಯಪಾಲರ ಸಹಿ, ಶೀಘ್ರ ಜಾರಿ

ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ಕಚೇರಿ ವಿಶಾಖಪಟ್ಟಣದಲ್ಲಿ ಇರಲಿದೆ. ರಾಜ್ಯದ ಶಾಸನಸಭೆಯ ಅಧಿವೇಶನ ಅಮರಾವತಿಯಲ್ಲಿ ನಡೆಯಲಿದ್ದರೆ, ಹೈಕೋರ್ಟ್‌ ಕರ್ನೂಲ್‌ನಲ್ಲಿ ಸ್ಥಾಪನೆಯಾಗಲಿದೆ.

Agencies 1 Aug 2020, 5:52 pm

ಹೈದರಾಬಾದ್: ಆಂಧ್ರ ಪ್ರದೇಶ ರಾಜ್ಯದಲ್ಲಿ ಮೂರು ರಾಜಧಾನಿಗಳನ್ನು ಸ್ಥಾಪಿಸುವ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಕನಸಿನ ಯೋಜನೆಗೆ ರಾಜ್ಯಪಾಲರು ಶುಕ್ರವಾರ ಅಂಕಿತ ಹಾಕಿದ್ದಾರೆ.
Vijaya Karnataka Web YS Jagan Mohan Reddy


2014ರಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯವಾದ ನಂತರ ಹೈದರಾಬಾದ್‌ ಆಂಧ್ರ ಪ್ರದೇಶದ ಕೈತಪ್ಪಿತ್ತು. ಹೀಗಾಗಿ ರಾಜ್ಯಕ್ಕೆ ರಾಜಧಾನಿ ಇಲ್ಲವಾಗಿತ್ತು. ನಂತರ ಅಧಿಕಾರಕ್ಕೆ ಬಂದ ಚಂದ್ರಬಾಬು ನಾಯ್ಡು ಸರಕಾರ ಅಮರಾವತಿಯಲ್ಲಿ ರಾಜಧಾನಿ ಸ್ಥಾಪನೆಗೆ ಮುಂದಾಗಿತ್ತು.

ಆದರೆ 2019ರಲ್ಲಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಅಧಿಕಾರಕ್ಕೆ ಬರುತ್ತಿದ್ದಂತೆ ಮೂರು ರಾಜಧಾನಿ ಸ್ಥಾಪನೆಗೆ ಮುಂದಾಗಿದ್ದರು. ಇದಕ್ಕೆ ಹಲವು ಅಡೆತಡೆಗಳು ಸೃಷ್ಟಿಯಾಗಿತ್ತು. ಮುಖ್ಯವಾಗಿ ಅಮರಾವತಿಯಿಂದ ರಾಜಧಾನಿ ಸ್ಥಳಾಂತರ ವಿರೋಧಿಸಿ ಅಲ್ಲಿನ ರೈತರು ತೀವ್ರ ಪ್ರತಿಭಟನೆಗೆ ಇಳಿದಿದ್ದರು. ಈ ಸಂಬಂಧ ಹೈಕೋರ್ಟ್‌ಗೂ ದೂರು ಸಲ್ಲಿಸಿದ್ದರು.

ಇದೀಗ ರಾಜ್ಯಪಾಲ ಬಿಶ್ವ ಭೂಷಣ್‌ ಹರಿಚಂದನ್‌ ರಾಜಧಾನಿ ಸ್ಥಾಪನೆಗೆ ಸಂಬಂಧಿಸಿದ ಎರಡು ಮಸೂದೆಗಳಿಗೆ ಶುಕ್ರವಾರ ಅಂಕಿತ ಹಾಕಿದ್ದಾರೆ.
ಈ ಯೋಜನೆಯಂತೆ ವಿಶಾಖಪಟ್ಟಣದಲ್ಲಿ ಕಾರ್ಯಾಂಗ, ಅಮರಾವತಿಯಲ್ಲಿ ಶಾಸಕಾಂಗ ಮತ್ತು ಕರ್ನೂಲ್‌ನಲ್ಲಿ ನ್ಯಾಯಾಂಗ ಕಾರ್ಯಾಚರಣೆ ನಡೆಸಲಿವೆ.

ನಿಜಾಮರ ಕಾಲದಲ್ಲಿ ನಿರ್ಮಾಣಗೊಂಡ ತೆಲಂಗಾಣದ ಪುರಾತನ ಸಚಿವಾಲಯ ನೆಲಸಮ!

ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ಕಚೇರಿ ವಿಶಾಖಪಟ್ಟಣದಲ್ಲಿ ಇರಲಿದೆ. ರಾಜ್ಯದ ಶಾಸನಸಭೆಯ ಅಧಿವೇಶನ ಅಮರಾವತಿಯಲ್ಲಿ ನಡೆಯಲಿದೆ. ಹೈಕೋರ್ಟ್‌ ಕರ್ನೂಲ್‌ನಲ್ಲಿ ಸ್ಥಾಪನೆಯಾಗಲಿದೆ.

ಟಿಡಿಪಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಎನ್‌ ಚಂದ್ರಬಾಬು ನಾಯ್ಡು, ಮೂರು ರಾಜಧಾನಿ ಸ್ಥಾಪನೆಗೆ ಸಹಿ ಹಾಕಿರುವ ರಾಜ್ಯಪಾಲರ ನಿರ್ಧಾರವನ್ನು ಐತಿಹಾಸಿಕ ಪ್ರಮಾದ ಎಂದು ಕರೆದಿದ್ದಾರೆ. ಜೊತೆಗೆ ಇದು 'ಎಪಿ ರಿಆರ್ಗನೈಸೇಷನ್‌ ಆಕ್ಟ್‌ 2014'ರ ಉಲ್ಲಂಘನೆ ಎಂದು ಕಿಡಿಕಾರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ