ಆ್ಯಪ್ನಗರ

ಮುಳುಗಿದ ಆಂಧ್ರ, ತೆಲಂಗಾಣ; ಭಾರಿ ಮಳೆಗೆ 20ಕ್ಕೂ ಹೆಚ್ಚು ಮಂದಿ ಸಾವು

ಮಳೆಯ ಅಬ್ಬರಕ್ಕೆ ಮುತ್ತಿನ ನಗರಿ ಸಂಪೂರ್ಣ ಜಲಾವೃತವಾಗಿದೆ. ನೆರೆಗೆ ರಸ್ತೆಗಳು ಕೊಚ್ಚಿಹೋಗಿದ್ದು, ಕೆರೆಗಳು ಕೋಡಿ ಬಿದ್ದಿವೆ. ಪ್ರಮುಖ ಹೆದ್ದಾರಿಗಳು ಬಂದ್‌ ಆಗಿದ್ದು ಎರಡೂ ರಾಜ್ಯಗಳಲ್ಲಿ ಕನಿಷ್ಠ 20 ಜನರು ಅಸುನೀಗಿದ್ದಾರೆ.

Agencies 14 Oct 2020, 9:35 pm
ಹೈದರಾಬಾದ್‌: ಎಲ್ಲೆಲ್ಲೂ ನೀರು. ಉಕ್ಕಿ ಹರಿಯುತ್ತಿರುವ ನದಿಗಳು, ಕೋಡಿ ಬಿದ್ದ ಕೆರೆಗಳು. ತರಗೆಲೆಗಳಂತೆ ಕೊಚ್ಚಿ ಹೋದ ವಾಹನಗಳು, ತಾರಸಿವರೆಗೂ ಮುಳುಗಿದ ಮನೆಗಳು, ಕುಸಿದ ಕಟ್ಟಡಗಳು, ಎಲ್ಲೆಲ್ಲೂ ಜನರ ಹಾಹಾಕಾರ. ಇದು ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಬಹುತೇಕ ಪ್ರದೇಶಗಳಲ್ಲಿ ಬುಧವಾರ ಕಂಡುಬಂದ ಜಲಪ್ರಳಯದ ಚಿತ್ರಣ.
Vijaya Karnataka Web floods


ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಪ್ರಭಾವದಿಂದ ತೆಲುಗು ಸೀಮೆಗಳು ದಾಖಲೆ ಮಳೆಗೆ ಸಾಕ್ಷಿಯಾಗಿವೆ. ರಾಜಧಾನಿ ಹೈದರಾಬಾದ್‌ನಲ್ಲಿಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಮನೆಗಳು, ತಗ್ಗು ಪ್ರದೇಶಗಳು, ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ಕೊರೊನಾ ಭೀತಿಯ ನಡುವೆ ಜನರು ಪ್ರವಾಹದಿಂದಲೂ ಪ್ರಾಣಾಂತಕಕ್ಕೆ ಗುರಿಯಾಗಿದ್ದಾರೆ. ನಗರದ ಬಹುತೇಕ ಎಲ್ಲಾ ಕೆರೆಗಳೂ ಕೋಡಿ ಬಿದ್ದ ಕಾರಣ, ನಗರದ ಪ್ರಮುಖ ಬೀದಿಗಳು ನದಿಗಳಂತಾಗಿದ್ದು, ವಾಹನಗಳು ಕೊಚ್ಚಿಹೋಗಿವೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಿಗೆ ಸಂಪರ್ಕಿಸುವ ರಸ್ತೆಗಳು ಕೊಚ್ಚಿ ಹೋಗಿದ್ದು, ಮುತ್ತಿನ ನಗರಿಯೊಂದಿಗೆ ಸಂಪರ್ಕ ಕಡಿತಗೊಂಡಿದೆ. ನಗರದಲ್ಲಿ ಮೆಟ್ರೊ ಪಿಲ್ಲರ್‌ ಬಳಿಯೇ ಭೂ ಕುಸಿತ ಉಂಟಾಗಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.

ಹೈದರಾಬಾದ್‌ನಲ್ಲಿ ಕುಂಭದ್ರೋಣ ಮಳೆ: ಕಾಪಾಡಿ ಎನ್ನುತ್ತಲೇ ಪ್ರವಾಹದಲ್ಲಿ ಕೊಚ್ಚಿಹೋದ ವ್ಯಕ್ತಿ!
ಹೆಚ್ಚಿದ ರೋಗ ಭೀತಿ

ನಗರದಲ್ಲಿ ಬಹುತೇಕ ಕಾಲುವೆಗಳು ಒಡೆದು ಹೋಗಿದ್ದು, ಚರಂಡಿ ನೀರು ಸೇರಿದಂತೆ ಕಲುಷಿತ ನೀರು ಮನೆಗಳಿಗೆ ನುಗ್ಗಿದೆ. ಈಗಾಗಲೇ ಕೋವಿಡ್‌-19 ಭೀತಿಯಿಂದ ಕಂಗೆಟ್ಟಿದ್ದ ಜನತೆಗೆ ಈಗ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಮತ್ತಷ್ಟು ಹೆಚ್ಚಿದೆ.

ಜಲಾಶಯಗಳು ಭರ್ತಿ

ಎರಡೂ ರಾಜ್ಯಗಳ ಎಲ್ಲಾ ಜಲಾಶಯಗಳೂ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದ ನದಿಯಂಚಿನ ಪ್ರದೇಶಗಳಲ್ಲಿ ಪ್ರವಾಹ ಭೀತಿ ಮತ್ತಷ್ಟು ಹೆಚ್ಚಿದೆ. ಜನರನ್ನು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಎನ್‌ಡಿಆರ್‌ಎಫ್‌, ಕಾಪ್ಟರ್‌ ಕಣಕ್ಕೆ

ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆಯು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಬಂದಾಂಗ್‌ಪೇಟ್‌ ಪ್ರದೇಶದಲ್ಲಿ ಜಲಾವೃತ ಮನೆಗಳಲ್ಲಿ ಸಿಲುಕಿದ್ದ 74 ಮಂದಿಯನ್ನು ರಕ್ಷಿಸಲಾಗಿದೆ. ಚಂದ್ರಯಾನಗುಟ್ಟ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್‌ ನೆರವಿನಿಂದ ಜಲಾವೃತ ಪ್ರದೇಶದ ಜನರನ್ನು ಏರ್‌ಲಿಫ್ಟ್‌ ಮಾಡಲಾಗಿದೆ. ಜಲಾವೃತ ಪ್ರದೇಶಗಳಿಂದ ಬೋಟ್‌ಗಳ ಮೂಲಕವೂ ಸಂತ್ರಸ್ತರನ್ನು ಸುರಕ್ಷಿತ ಪ್ರದೇಶಗಳತ್ತ ಸ್ಥಳಾಂತರಿಸಲಾಯಿತು.

ತೆಲಂಗಾಣದಲ್ಲಿ ಜಲ ಪ್ರಳಯ: ಆಟಿಕೆಗಳಂತೆ ನೀರಿನಲ್ಲಿ ತೇಲಿದ ಕಾರುಗಳು, 14 ಮಂದಿ ಬಲಿ!


ನಿರಾಶ್ರಿತ ಶಿಬಿರಗಳ ಸ್ಥಾಪನೆ

ನೆರೆ ಸಂತ್ರಸ್ತರಿಗಾಗಿ 40 ನಿರಾಶ್ರಿತ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 80,000 ಮಂದಿಗೆ ಆಹಾರ ಮತ್ತು ನೆಲೆಯ ವ್ಯವಸ್ಥೆ ಮಾಡಲಾಗಿದೆ ಎಂದು ತೆಲಂಗಾಣ ನಗರಾಭಿವೃದ್ಧಿ ಸಚಿವ ಕೆ.ಟಿ. ರಾಮರಾವ್‌ ತಿಳಿಸಿದ್ದಾರೆ.

ನಡು ರಸ್ತೆಯಲ್ಲೇ ಕೊಚ್ಚಿಹೋದ ವ್ಯಕ್ತಿ

ನಗರದ ಫಲಕ್ನುಮಾ ಪ್ರದೇಶದಲ್ಲಿವ್ಯಕ್ತಿಯೊಬ್ಬರು ನೋಡು ನೋಡುತಿತದ್ದಂತೆಯೇ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ನದಿಯಂತೆ ರಭಸವಾಗಿ ಹರಿಯುತ್ತಿದ್ದ ನೀರಿನ ಸೆಳೆತಕ್ಕೆ ಸಿಕ್ಕಿದ ವ್ಯಕ್ತಿ, ಎಷ್ಟೇ ಪ್ರಯತ್ನಪಟ್ಟರೂ ಸೆಳವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನೀರಿನ ರಭಸ ಹೆಚ್ಚಿದ್ದ ಕಾರಣ ಯಾರೂ ರಕ್ಷಣೆಗೂ ಮುಂದಾಗಲಿಲ್ಲ. ವ್ಯಕ್ತಿ ಕೊಚ್ಚಿ ಹೋಗುತ್ತಿರುವ ವಿಡಿಯೋ ವೈರಲ್‌ ಆಗಿದ್ದು, ಆತನ ಮೃತದೇಹ ಇನ್ನೂ ಸಿಕ್ಕಿಲ್ಲ.



24 ಗಂಟೆಯಲ್ಲಿ 20 ಸೆಂ.ಮೀ ಮಳೆ

ಹೈದರಾಬಾದ್‌ನಲ್ಲಿ 24 ಗಂಟೆಯಲ್ಲಿ20 ಸೆಂ.ಮೀ ಮಳೆ ಬಂದಿದ್ದು, ಇದು ಸುಮಾರು ನೂರು ವರ್ಷಗಳ ದಾಖಲೆಯಾಗಿದೆ. ಇನ್ನೂ ಎರಡು ದಿನ ತೆಲಂಗಾಣದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಅನಿವಾರ್ಯ ಕಾರಣಗಳ ಹೊರತಾಗಿ ಜನರು ಮನೆಗಳಿಂದ ಹೊರಬರಬಾರದು ಎಂದು ತೆಲಂಗಾಣ ಸಿಎಂ ಕೆಸಿಆರ್‌ ಮನವಿ ಮಾಡಿದ್ದಾರೆ. ವಾಯುಭಾರ ಕುಸಿತದಿಂದ ಭಾರಿ ಮಳೆಯಾಗುತ್ತಿದ್ದು, ಮುಂದಿನ 12 ಗಂಟೆಗಳ ಕಟ್ಟೆಚ್ಚರ ಘೋಷಿಸಲಾಗಿದೆ.

20ಕ್ಕೂ ಹೆಚ್ಚು ಮಂದಿ ಸಾವು?

ಮಳೆ ಸಂಬಂಧಿತ ಅವಘಡಗಳಲ್ಲಿಉಭಯ ರಾಜ್ಯಗಳಲ್ಲಿ 20ಕ್ಕೂ ಹೆಚ್ಚು ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಹೈದರಾಬಾದ್‌ನ ಬಂಡ್ಲಗೂಡ ಪ್ರದೇಶದಲ್ಲಿ ಗೋಡೆ ಕುಸಿದು ಮೂವರು ಮಕ್ಕಳು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ. ಗೋಡೆಗೆ ಅಳವಡಿಸಲಾಗಿದ್ದ ಬೃಹತ್‌ ಗ್ರಾನೈಟ್‌ ಸ್ಪ್ಯಾಬ್‌ಗಳು ಜನರ ಮೇಲೆ ಕುಸಿದಿವೆ.

ನಗರದ ಫೂಲ್‌ಬಾಗ್‌ ಕಾಲೊನಿಯಲ್ಲಿ ಗುಡ್ಡ ಮನೆಯ ಮೇಲೆ ಕುಸಿದು, ಒಳಗಿದ್ದ ವ್ಯಕ್ತಿ ಸಮಾಧಿಯಾಗಿದ್ದಾನೆ. ತೆಲಂಗಾಣದ ನಾಗರ್‌ಕರ್ನೂಲ್‌ ಜಿಲ್ಲೆಯಲ್ಲಿ ಮನೆ ಕುಸಿದು ಮೂವರು ಮೃತಪಟ್ಟಿದ್ದಾರೆ. ಬೆಂಗಳೂರು-ಹೈದರಾಬಾದ್‌ ಹೆದ್ದಾರಿಯ ಗಗನ್‌ ಪಹಡ್‌ ಪ್ರದೇಶದಲ್ಲೂ ಮನೆಯೊಂದು ಕುಸಿದು ಮೂವರು ಬಲಿಯಾಗಿದ್ದಾರೆ. ನಗರದ ಬಂಜಾರ ಹಿಲ್ಸ್‌ ಪ್ರದೇಶದಲ್ಲಿ ಮೋಟರ್‌ ಬಳಸಿ ನೀರು ಹೊರ ಹಾಕಲು ಮುಂದಾಗಿದ್ದ ವೈದ್ಯರೊಬ್ಬರು ವಿದ್ಯುತ್‌ಶಾಕ್‌ಗೆ ಬಲಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ