ಆ್ಯಪ್ನಗರ

ತೆಲಂಗಾಣ ಸಿಎಂ ಬದಲಾವಣೆ ಗುಲ್ಲು, ಪುತ್ರನಿಗೆ ಕುರ್ಚಿ ಬಿಟ್ಟು ಕೊಡ್ತಾರಾ ಕೆಸಿಆರ್‌?

ಹಾಲಿ ತೆಲಂಗಾಣ ಸಿಎಂ ಕೆ ಚಂದ್ರಶೇಖರ್‌ ರಾವ್‌ ತಮ್ಮ ಪುತ್ರ, ಪ್ರಭಾವಿ ಸಚಿವ ಕೆಟಿ ರಾಮರಾವ್‌ ಅವರಿಗೆ ತಮ್ಮ ಹುದ್ದೆ ಬಿಟ್ಟು ಕೊಡಲಿದ್ದಾರೆ ಎಂಬ ಸುದ್ದಿ ರಾಜ್ಯದಲ್ಲಿ ಹರಿದಾಡುತ್ತಿದೆ.

TIMESOFINDIA.COM 21 Jan 2021, 4:41 pm
ಹೈದರಾಬಾದ್‌: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಆರಂಭಗೊಂಡಿರುವ ರೀತಿಯಲ್ಲೇ, ತೆಲಂಗಾಣದಲ್ಲಿಯೂ ಸಿಎಂ ಸ್ಥಾನಕ್ಕೆ ಹೊಸಬರು ಬರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
Vijaya Karnataka Web KCR KTR Telangana


ಹಾಲಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌ ತಮ್ಮ ಪುತ್ರ, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಕಾರ್ಯಾಧ್ಯಕ್ಷ ಹಾಗೂ ಸಂಪುಟ ದರ್ಜೆ ಸಚಿವ ಕೆಟಿ ರಾಮರಾವ್‌ (ಕೆಟಿಆರ್‌) ಅವರಿಗೆ ತಮ್ಮ ಹುದ್ದೆ ಬಿಟ್ಟು ಕೊಡಲಿದ್ದಾರೆ ಎಂಬ ಸುದ್ದಿ ಮೇಲಿಂದ ಮೇಲೆ ಕೇಳಿ ಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಬುಧವಾರ ಮಾತನಾಡಿರುವ ಪಶುಸಂಗೋಪನೆ ಸಚಿವ ತಲಸಾಣಿ ಶ್ರೀನಿವಾಸ್‌ ಯಾದವ್‌, ಕೆಟಿಆರ್‌ ಈಗಾಗಲೇ ಟಿಆರ್‌ಎಸ್‌ ಕಾರ್ಯಾಧ್ಯಕ್ಷರಾಗಿದ್ದು ಸಿಎಂ ಆಗುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.

“ಕೆಟಿಆರ್‌ ಅವರನ್ನು ಸಿಎಂ ಮಾಡುವ ಬಗ್ಗೆ ಕೆಸಿಆರ್‌ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅವರ ಎಲ್ಲಾ ನಿರ್ಧಾರಗಳು ಸರಿಯಾದುದು ಎಂದು ಕಳೆದ 6 ವರ್ಷಗಳಲ್ಲಿ ಸಾಬೀತಾಗಿದೆ,” ಎಂದು ಶ್ರೀನಿವಾಸ್‌ ಯಾದವ್‌ ತಿಳಿಸಿದ್ದಾರೆ.

ಕೆಟಿಆರ್‌ ನೇತೃತ್ವದಲ್ಲಿ ಮುಂದಿನ ಅಧಿವೇಶನ ನಡೆಯುವುದನ್ನು ಎದುರು ನೋಡುತ್ತಿರುವುದಾಗಿ ಟಿಆರ್‌ಎಸ್‌ ಶಾಸಕ ಶಕೀಲ್‌ ಅಹಮದ್‌ ಹೇಳಿದ್ದಾರೆ. "ಕೆಸಿಆರ್‌ ನಾಯಕತ್ವದಲ್ಲಿ ರಾಜ್ಯ ಅಭಿವೃದ್ಧಿ ಕಾಣುತ್ತಿದೆ. ಕೆಟಿಆರ್‌ ನಾಯಕತ್ವದಲ್ಲಿ ರಾಜ್ಯ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಅಲ್ಲದೆ ಯುವ ನಾಯಕತ್ವಕ್ಕೆ ಹೆಚ್ಚಿನ ಮನ್ನಣೆಯೂ ಸಿಗಲಿದೆ,” ಎಂದು ಅವರು ವಿವರಿಸಿದ್ದಾರೆ.

ಹಾಗಂತ ಕೆಟಿಆರ್‌ ಮುಖ್ಯಮಂತ್ರಿಯಾಗಬೇಕು ಎಂಬ ಬೇಡಿಕೆ ಕೇಳಿ ಬರುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಸಚಿವರಾದ ಈಟಾಲಾ ರಾಜೇಂದರ್‌, ವಿ ಶ್ರೀನಿವಾಸ್‌ ಗೌಡ್‌, ಈರಬೆಲ್ಲಿ ದಯಾಕರ್‌ ರಾವ್‌ ಮತ್ತು ವಿಧಾನ ಪರಿಷತ್‌ ಸಭಾಪತಿ ಗುಟ್ಟ ಸುಖೇಂದರ್‌ ಕೂಡ ಕೆಟಿಆರ್‌ಗೆ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಇದೆ ಎಂದಿದ್ದರು.

ಕೆಟಿಆರ್‌ ಭಡ್ತಿಯ ಬಗ್ಗೆ ಕಳೆದ ಹಲವು ವರ್ಷಗಳಿಂದ ಚರ್ಚೆಗಳು ನಡೆಯುತ್ತಿವೆ. 2018ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಫೆಡೆರಲ್‌ ಫ್ರಂಟ್‌ ಕಟ್ಟಲು ಕೆಸಿಆರ್ ಓಡಾಡುತ್ತಿದ್ದರು. ಈ ವೇಳೆ ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಕೆಟಿಆರ್‌ ಅವರನ್ನು ನೇಮಕ ಮಾಡಿದ್ದರು. ಈ ವೇಳೆಯೆ ಕೆಟಿಆರ್‌ ಸಿಎಂ ಹುದ್ದೆಗೇರಲಿದ್ದಾರೆ ಎಂಬ ಮಾತುಗಳು ಚಾಲ್ತಿಗೆ ಬಂದಿದ್ದವು.

ಕೆಲವು ತಿಂಗಳ ಹಿಂದೆ ಕೆಟಿಆರ್‌ ಆಹಾರ ಸಂಸ್ಕರಣೆ ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ಎಲ್ಲಾ ಸಚಿವರು ಮತ್ತು ಪ್ರಮುಖ ಇಲಾಖೆಗಳ ಮುಖ್ಯಸ್ಥರೊಂದಿಗೆ ಸತತ 8 ಗಂಟೆಗಳ ಸಭೆ ನಡೆಸಿದ್ದರು. ಈ ಸಭೆಗೆ ಮುಖ್ಯ ಕಾರ್ಯದರ್ಶಿ ಸೋಮೇಶ್‌ ಕುಮಾರ್‌ ಕೂಡ ಹಾಜರಾಗಿದ್ದರು. ಈ ವೇಳೆಯೂ ಕೆಟಿಆರ್‌ ಸಿಎಂ ಸ್ಥಾನಕ್ಕೇರುವ ಚರ್ಚೆಗಳು ತೀವ್ರಗೊಂಡಿದ್ದವು.

ಆದರೆ ಇನ್ನೊಂದೆಡೆ ಕೆಸಿಆರ್‌ ಮತ್ತು ಕೆಟಿಆರ್‌ ಇಬ್ಬರೂ ಈ ಸುದ್ದಿಯನ್ನು ತಳ್ಳಿ ಹಾಕುತ್ತಾ ಬಂದಿದ್ದಾರೆ. ಜನವರಿ 1ರಂದು ಮಾಧ್ಯಮಗಳ ಜತೆ ಮಾತನಾಡಿದ್ದ ಕೆಟಿಆರ್‌, ಇನ್ನೆರಡು ಅವಧಿಗೂ ಮುಖ್ಯಮಂತ್ರಿಯಾಗಿ ಕೆಸಿಆರ್‌ ಮುಂದುವರಿಯಲಿದ್ದಾರೆ ಎಂದು ಹೇಳಿದ್ದರು. ಇದೇ ರೀತಿಯ ಅಭಿಪ್ರಾಯವನ್ನು ಸ್ವತಃ ಕೆಸಿಆರ್‌ 2019ರ ಸೆಪ್ಟೆಂಬರ್‌ನಲ್ಲಿ ವ್ಯಕ್ತಪಡಿಸಿದ್ದರು. ನನಗಿನ್ನೂ 66 ವರ್ಷ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದರು.

ಆದರೆ ಹೀಗಿದ್ದೂ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ಮಾತ್ರ ನಿಂತಿಲ್ಲ. ಈಗಾಗಲೇ ಕೆಟಿಆರ್‌ ಸರಕಾರದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ರಾಜ್ಯಕ್ಕೆ ಬಂಡವಾಳ ಸೆಳೆಯುವುದು, ಕೇಂದ್ರದ ಜತೆಗಿನ ಚರ್ಚೆ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಟಿಆರ್‌ಎಸ್‌ ಮುಂದಿನ 20 ವರ್ಷಗಳ ಕಾಲ ಅಧಿಕಾರದಲ್ಲಿ ಇರಲಿದ್ದು, ಎಲ್ಲರೂ ಕೆಟಿಆರ್‌ ಅವರನ್ನು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಿ ನೋಡಲು ಇಚ್ಚಿಸುತ್ತಿದ್ದಾರೆ ಎಂದು ಶ್ರೀನಿವಾಸ್‌ ಗೌಡ್‌ ವಿಶ್ಲೇಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ