ಆ್ಯಪ್ನಗರ

ಆಂಧ್ರದಲ್ಲಿ ನಿಗೂಢ ಕಾಯಿಲೆಗೆ ಓರ್ವ ಬಲಿ, 347ಕ್ಕೂ ಹೆಚ್ಚು ಜನರು ಅಸ್ವಸ್ಥ, ರೋಗದ ಜಾಡು ಇನ್ನೂ ನಾಪತ್ತೆ!

ಈ ನಿಗೂಢ ಕಾಯಿಲೆಯ ಜಾಡು ಪತ್ತೆಗೆ ಆಂಧ್ರ ಪ್ರದೇಶ ಸರಕಾರ ನಡೆಸಿರುವ ಕಸರತ್ತುಗಳು ಇದುವರೆಗೂ ಫಲ ನೀಡಿಲ್ಲ. ಸದ್ಯಕ್ಕೆ ನೀರಿನಿಂದ ಹರಡಿಲ್ಲವೆಂದ ವೈದ್ಯರು ಹೇಳಿದ್ದು, ಈಗ ಹಾಲಿನ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ.

Agencies 7 Dec 2020, 9:37 pm
ಹೈದರಾಬಾದ್‌: ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರಿನಲ್ಲಿ ಒಬ್ಬ ವ್ಯಕ್ತಿಯನ್ನು ಬಲಿ ಪಡೆದು, 347 ಜನರನ್ನು ಅಸ್ವಸ್ಥಗೊಳಿಸಿರುವ ನಿಗೂಢ ಕಾಯಿಲೆಯ ಜಾಡು ಪತ್ತೆಗೆ ಆಂಧ್ರ ಪ್ರದೇಶ ಸರಕಾರ ನಡೆಸಿರುವ ಕಸರತ್ತುಗಳು ಇದುವರೆಗೂ ಫಲ ನೀಡಿಲ್ಲ. ಇದರಿಂದ ಗೊಂದಲ ಮುಂದುವರಿದಿದ್ದು, ತ್ವರಿತ ಅಧ್ಯಯನಕ್ಕೆ ತಜ್ಞರ ತಂಡವೊಂದನ್ನು ಕಳಿಸಿಕೊಡುವುದಾಗಿ ಕೇಂದ್ರ ಸರಕಾರ ಘೋಷಿಸಿದೆ.
Vijaya Karnataka Web West Godavari: A woman being taken to a hospital in Eluru


ಎಲೂರಿನ ಕೆಲವು ಬಡಾವಣೆಗಳ ಜನರಲ್ಲಿ ಹಠಾತ್ತನೆ ವಾಂತಿ, ತಲೆನೋವು ಮತ್ತು ತಲೆಸುತ್ತಿನಂತಹ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ. ತಕ್ಷಣ ಅವರೆಲ್ಲರನ್ನು ಸಮೀಪದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 45 ವರ್ಷದ ಒಬ್ಬ ವ್ಯಕ್ತಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಮುನ್ನೂರಕ್ಕೂ ಹೆಚ್ಚು ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಕೊರೊನಾ ಸೋಂಕು ಹಾವಳಿ ನಡುವೆಯೇ ಕಾಣಿಸಿಕೊಂಡಿರುವ ಈ ಕಾಯಿಲೆ ಯಾವುದು ಎನ್ನುವುದನ್ನು ಪತ್ತೆ ಮಾಡಲು ವೈದ್ಯರು ಹೆಣಗುತ್ತಿದ್ದಾರೆ.

ಆರಂಭದಲ್ಲಿ ಕಲುಷಿತ ನೀರು ಕುಡಿದು ಈ ಸಮಸ್ಯೆ ಉಂಟಾಗಿರಬಹುದೆಂದು ಶಂಕಿಸಲಾಗಿತ್ತು. ಆದರೆ ವೈದ್ಯಕೀಯ ವರದಿಗಳು ಅದನ್ನು ಅಲ್ಲಗಳೆದಿವೆ. ಆರೋಗ್ಯ ಬಾಧಿತ ಪ್ರದೇಶಗಳಿಗೆ ಇದುವರೆಗೆ ಎಲೂರು ಮುನ್ಸಿಪಾಲಿಟಿಯಿಂದ ನೀರಿನ ಸರಬರಾಜು ಕೂಡ ಇಲ್ಲ. ಹಾಗಾಗಿ ಎಲ್ಲರೂ ಏಕಕಾಲಕ್ಕೆ ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವುದು ಅಧಿಕಾರಿಗಳನ್ನು ಕಳವಳಕ್ಕೆ ದೂಡಿದೆ.

ಸಾಂಕ್ರಾಮಿಕ ಅಲ್ಲ

ಈ ನಿಗೂಢ ಕಾಯಿಲೆ ಸಾಂಕ್ರಾಮಿಕ ಅಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. "ಇದುವರೆಗೆ ಒಬ್ಬರಿಂದ ಇನ್ನೊಬ್ಬರಿಗೆ ಸೋಂಕು ಹರಡಿದ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಇದರಿಂದ ಅದು ಸಾಂಕ್ರಾಮಿಕ ಅಲ್ಲ ಎನ್ನುವುದು ಖಚಿತವಾಗಿದೆ. ಇನ್ನೂ 157 ಅಸ್ವಸ್ಥರು ಚಿಕಿತ್ಸೆ ಪಡೆಯುತ್ತಿದ್ದು, 190 ಮಂದಿ ಗುಣಮುಖರಾಗಿದ್ದಾರೆ,’’ ಎಂದು ಕಂದಾಯ ಅಧಿಕಾರಿ ಮುತ್ಯಾಲ ರಾಜು ಸೋಮವಾರ ಹೇಳಿದರು.


ವಿಚಿತ್ರ ಕಾಯಿಲೆ

ಅಸ್ವಸ್ಥಗೊಂಡಿರುವ ಎಲ್ಲರಲ್ಲೂ ಬಹುತೇಕ ಒಂದೇ ರೀತಿಯ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ. 3 ರಿಂದ 5 ನಿಮಿಷ ಕಾಲ ಮೂರ್ಛೆ ಹೋಗುತ್ತಾರೆ. ದಿಢೀರ್‌ ಮರೆವು, ಆತಂಕ, ವಾಂತಿ, ತಲೆನೋವು, ತಲೆ ಸುತ್ತು ಮತ್ತು ಬೆನ್ನು ನೋವು ಈ ಕಾಯಿಲೆಯ ಪ್ರಧಾನ ಲಕ್ಷಣಗಳು. ಒಬ್ಬರ ಜೀವ ಹಾನಿ ಹೊರತುಪಡಿಸಿದರೆ ಉಳಿದವರೆಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

"ಈ ಪ್ರದೇಶಗಳ ಪ್ರತಿ ಮನೆಯಲ್ಲೂ ಒಬ್ಬರು ಅಥವಾ ಇಬ್ಬರು ಅಸ್ವಸ್ಥಗೊಂಡಿದ್ದಾರೆ. ಶೋಧಿಸಿ ಶುಚಿಗೊಳಿಸಿದ ಖನಿಜಯುಕ್ತ ನೀರು ಕುಡಿಯುವವರು ಕೂಡ ಅಸ್ವಸ್ಥರಾಗಿದ್ದಾರೆ. ಪಾಕೆಟ್‌ ಹಾಲಿನ ಬಗ್ಗೆ ಈಗ ಸಂಶಯ ಮೂಡಿದ್ದು, ಅದರ ಪರೀಕ್ಷೆಯೂ ನಡೆದಿದೆ," ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ



ಕೇಂದ್ರ ತಂಡ ರಚನೆ

ರೋಗ ನಿಗೂಢ ಪತ್ತೆಗೆ ಕೇಂದ್ರ ಆರೋಗ್ಯ ಸಚಿವಾಲಯ ಮೂವರು ಸದಸ್ಯರ ತಂಡವೊಂದನ್ನು ರಚಿಸಿದೆ. ದಿಲ್ಲಿಯ ಏಮ್ಸ್‌ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ.ಜಮ್ಷಡ್‌ ನಾಯರ್‌, ಪುಣೆ ಎನ್‌ಐವಿ ಸಂಸ್ಥೆಯ ವೈರಾಣು ತಜ್ಞ ಡಾ.ಅವಿನಾಶ್‌ ದೇವಷ್ತವಾರ್‌ ಮತ್ತು ಎನ್‌ಸಿಡಿಸಿ ನಿರ್ದೇಶಕ ಡಾ.ಸಂಕೇತ್‌ ಕುಲಕರ್ಣಿ ಒಳಗೊಂಡ ತಂಡ ಮಂಗಳವಾರ ಎಲೂರಿಗೆ ತಲುಪಲಿದೆ ಎಂದು ಸಚಿವಾಲಯ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ