ಆ್ಯಪ್ನಗರ

ಚಿತ್ರರಂಗದ ದಂತಕತೆ ಮೃಣಾಲ್‌ ಸೇನ್‌ ಇನ್ನಿಲ್ಲ

ಪ್ರಭಾವಿ ಹಿಂದಿ ಚಿತ್ರರಂಗಕ್ಕೆ ಪರ್ಯಾಯವಾಗಿ ಬಂಗಾಳಿ ಚಿತ್ರರಂಗವನ್ನು ಜಗತ್ತೇ ತಿರುಗಿ ನೋಡುವಂತೆ ರೂಪಿಸಿದ ತ್ರಿಮೂರ್ತಿಗಳಲ್ಲಿ (ಸತ್ಯಜಿತ್‌ ರೇ, ರಿತ್ವಿಕ್‌ ಘಾತಕ್‌ ಮತ್ತು ಸೇನ್‌) ಕೊನೆಯ ಕೊಂಡಿಯಾಗಿದ್ದಾರೆ ಮೃಣಾಲ್‌ ಸೇನ್‌.

Vijaya Karnataka 31 Dec 2018, 3:52 pm
ಕೋಲ್ಕೊತಾ: ಹೊಸ ಅಲೆಯ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗವನ್ನು ಹೊಸ ಎತ್ತರಕ್ಕೇರಿಸಿದ್ದ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮೃಣಾಲ್‌ ಸೇನ್‌(95) ಇನ್ನಿಲ್ಲ. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಭಾನುವಾರ ಬೆಳಗ್ಗೆ 10.30ಕ್ಕೆ ಕೊನೆಯುಸಿರೆಳೆದರು.
Vijaya Karnataka Web mrinal


ಪ್ರಭಾವಿ ಹಿಂದಿ ಚಿತ್ರರಂಗಕ್ಕೆ ಪರ್ಯಾಯವಾಗಿ ಬಂಗಾಳಿ ಚಿತ್ರರಂಗವನ್ನು ಜಗತ್ತೇ ತಿರುಗಿ ನೋಡುವಂತೆ ರೂಪಿಸಿದ ತ್ರಿಮೂರ್ತಿಗಳಲ್ಲಿ (ಸತ್ಯಜಿತ್‌ ರೇ, ರಿತ್ವಿಕ್‌ ಘಾತಕ್‌ ಮತ್ತು ಸೇನ್‌) ಕೊನೆಯ ಕೊಂಡಿಯಾಗಿದ್ದಾರೆ ಮೃಣಾಲ್‌ ಸೇನ್‌. ಅವರ ಪತ್ನಿ, ನಟಿ ಗೀತಾ ಸೇನ್‌ ಕಳೆದ ವರ್ಷ ನಿಧನರಾಗಿದ್ದರು. ಪುತ್ರ ಕುನಾಲ್‌ ಸೇನ್‌ ಶಿಕಾಗೋದಲ್ಲಿದ್ದಾರೆ.

ಸಾಮಾಜಿಕ ಸಮಸ್ಯೆಗಳನ್ನು ಮಾನವೀಯ ನೆಲೆಯಲ್ಲಿ ಚಿಕಿತ್ಸಕ ದೃಷ್ಟಿಯಿಂದ ನೋಡುತ್ತಾ ಕಲಾತ್ಮಕ ಸಿನಿಮಾಗಳನ್ನು ಸೃಷ್ಟಿಸುತ್ತಿದ್ದರು ಮೃಣಾಲ್‌ ಸೇನ್‌. ಅವರಿಗೆ ಸಿನಿಮಾ ಕೇವಲ ಮನೋರಂಜನೆಯ ಮಾಧ್ಯಮವಾಗಿರಲಿಲ್ಲ . ಜನಸಮೂಹವನ್ನು ಎಚ್ಚರಿಸುವ ಮತ್ತು ಶಿಕ್ಷಣ ನೀಡುವ ಒಂದು ಸಾಧನವಾಗಿ ಬಳಸಿದರು. ದೇಶೀ ಸೊಗಡಿನ ಅವರ ಚಿತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಿದವು.

1923ರ ಮೇ 14ರಂದು ಈಗಿನ ಬಾಂಗ್ಲಾ ದೇಶದ ಫರೀದ್‌ಪುರದಲ್ಲಿ ಜನಿಸಿದ ಅವರು ಎಡಪಂಥೀಯ ವಿಚಾರಧಾರೆಗಳ ಪ್ರತಿಪಾದಕರಾಗಿದ್ದರು. 1998ರಿಂದ 2003ರವರೆಗೆ ರಾಜ್ಯಸಭೆಯ ಸದಸ್ಯರೂ ಆಗಿದ್ದರು.

ಸಾಮಾಜಿಕ ವಾಸ್ತವಗಳ ಅತ್ಯಂತ ಸಂವೇದನಾಶೀಲ ಪ್ರಸ್ತುತಿಗಾಗಿ ಸಾರ್ವಕಾಲಿಕವಾಗಿ ನೆನಪಿಟ್ಟುಕೊಳ್ಳು ನಿರ್ದೇಶಕ. ಅವರ ನಿರ್ಗಮನ ಬಂಗಾಲಕ್ಕಷ್ಟೇ ಅಲ್ಲ, ಭಾರತಕ್ಕಷ್ಟೇ ಅಲ್ಲ, ಜಾಗತಿಕ ಸಿನಿಮಾಕ್ಕೆ ದೊಡ್ಡ ನಷ್ಟ.
- ರಾಮನಾಥ ಕೋವಿಂದ್‌, ರಾಷ್ಟ್ರಪತಿ

ಮೃಣಾಲ್‌ ಸಾವು ಕೇವಲ ಸಿನಿಮಾಕ್ಕಷ್ಟೇ ಅಲ್ಲ, ಭಾರತದ ಸಂಸ್ಕೃತಿ ಮತ್ತು ನಾಗರಿಕತಾತ್ಮಕ ಮೌಲ್ಯಗಳಿಗೂ ತುಂಬಲಾರದ ನಷ್ಟ.
- ಸೀತಾರಾಮ್‌ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

......

ದಿಕ್ಕು ದೆಸೆ ಬದಲಿಸಿದ ಸೇನ್‌ ಚಿತ್ರಗಳು
ಭುವನ್‌ ಶೋಮೆ, ಖೋರಸ್‌, ಮೃಗಯಾ, ಅಕಲೇರ್‌ ಸಂಧಾನೆ, ಕೋಲ್ಕೊತಾ 71, ಖರೀಜ್‌, ಪುನಶ್ಚಾ, ಆಕಾಶ್‌ ಕುಸುಮ್‌, ಅಂತರೀನ್‌, ಪರಶುರಾಮ್‌, ಖಂಡಹಾರ್‌, ಏಕ್‌ ದಿನ್‌ ಪ್ರತಿದಿನ್‌, ಪದಾತಿಕ್‌

.....

11 ಚಿತ್ರಗಳಿಗೆ ಅತ್ಯುತ್ತಮ ಸಿನಿಮಾ ರಾಷ್ಟ್ರಪ್ರಶಸ್ತಿ

ನಾಲ್ಕು ಬಾರಿ ಶ್ರೇಷ್ಠ ನಿರ್ದೇಶಕ ರಾಷ್ಟ್ರ ಪ್ರಶಸ್ತಿ

ಮೂರು ಬಾರಿ ಅತ್ಯುತ್ತಮ ಚಿತ್ರಕಥೆಗಾಗಿ ಪ್ರಶಸ್ತಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ