ಆ್ಯಪ್ನಗರ

ಓಲಾ ಕ್ಯಾಬ್ ಚಾಲಕನ ಜತೆ ಒಟಿಪಿ ಹಂಚಿಕೊಂಡ ಹಣಕಾಸು ತಜ್ಞರು 14,000 ರೂ ಕಳಕೊಂಡ್ರು...!

ಓಲಾ ಕ್ಯಾಬ್ ಚಾಲಕನ ಜತೆ ಒಟಿಪಿ ಹಂಚಿಕೊಂಡ ಇಬ್ಬರು ಹಣಕಾಸು ವೃತ್ತಿಪರರು ತಮ್ಮ ಓಲಾ ಮನಿ ಅಕೌಂಟಿನಿಂದ ಒಟ್ಟು 14,000 ರೂ ಕಳೆದುಕೊಂಡ ಘಟನೆ ಮುಂಬಯಿಯಲ್ಲಿ ನಡೆದಿದೆ. ಹಣಕಾಸು ವೃತ್ತಿಪರರನ್ನೇ ವಂಚಿಸಿದ ಚಾಲಕನನ್ನು ಓಲಾ ಕ್ಯಾಬ್ ಸಸ್ಪೆಂಡ್ ಮಾಡಿದೆ.

Vijaya Karnataka Web 6 Apr 2019, 12:24 pm
ಮುಂಬಯಿ: ಓಲಾ ಕ್ಯಾಬ್‌ಗೆ ಸೇರಿದ ಚಾಲಕನ ಜತೆ ಒಟಿಪಿ ಹಂಚಿಕೊಂಡ ಇಬ್ಬರು ಹಣಕಾಸು ವೃತ್ತಿಪರರು ತಮ್ಮ ಇ-ವ್ಯಾಲೆಟ್‌ನಿಂದ 14,000 ರೂ.ಗಳನ್ನು ಕಳೆದುಕೊಂಡಿದ್ದಾರೆ.
Vijaya Karnataka Web cab app


ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಜೋಗೇಶ್ವರಿ-ವಿಖ್ರೋಲಿ ಲಿಂಕ್ ರೋಡ್‌ (ಜೆವಿಎಲ್‌ಆರ್‌) ನ ಐಷಾರಾಮಿ ಕಾಂಪ್ಲೆಕ್ಸ್‌ ಒಂದರಲ್ಲಿ ವಾಸಿಸುವ ಅಕ್ಕಪಕ್ಕದ ನಿವಾಸಿಗಳಿಬ್ಬರಿಗೆ ಒಬ್ಬನೇ ಓಲಾ ಚಾಲಕ ನಾಮ ಹಾಕಿದ್ದಾನೆ. ಆತನನ್ನು ಸಸ್ಪೆಂಡ್ ಮಾಡಿರುವುದಾಗಿ ಓಲಾ ಹೇಳಿದೆ.

ಆಗಿದ್ದೇನು?:
ಚಾರ್ಟರ್ಡ್‌ ಅಕೌಂಟೆಂಟ್‌ ಆಗಿರುವ ವಿರಾಜ್ ಪ್ರಸಾದ್ ಒಬೆರಾಯ್‌ ಸ್ಪ್ಲೆಂಡರ್‌ನಿಂದ ಪ್ರಭಾದೇವಿಯಲ್ಲಿರುವ ತಮ್ಮ ಕಚೇರಿಗೆ ತೆರಳಲು ಓಲಾ ಕ್ಯಾಬ್ ಬುಕ್ ಮಾಡಿದ್ದರು. ಚಾಲಕ ಎಲ್ಲಿಗೆ ತಲುಪಿದ್ದಾನೆ ಎಂದು ತಿಳಿಯಲು ಅವನಿಗೆ ಕರೆ ಮಾಡಿದಾಗ, ಜಾಗ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಓಲಾ ಕಳುಹಿಸಿದ ಒಟಿಪಿ ಹಂಚಿಕೊಳಳುವಂತೆ ಕೇಳಿದ್ದಾನೆ. ಪ್ರಯಾಣ ಆರಂಭಕ್ಕೆ ಮೊದಲು ಕಳುಹಿಸಿದ ಒಟಿಪಿಗಿಂತ ಭಿನ್ನವಾದ ಒಟಿಪಿ ಅದಾಗಿತ್ತು. ಈ ಬಗ್ಗೆ ಯಾವುದೇ ಸಂದೇಹ ಪಡದ ಪ್ರಸಾದ್ ಒಟಿಪಿ ಹಂಚಿಕೊಂಡಿದ್ದಾರೆ. ತಕ್ಷಣವೇ ಓಲಾ ಆ್ಯಪ್‌ ನಿಷ್ಕ್ರಿಯಗೊಂಡಿದೆ. ಸ್ವಲ್ಪ ಹೊತ್ತಿನ ಬಳಿಕವಷ್ಟೇ ತಾನು ಓಲಾ ಮನಿ ಅಕೌಂಟಿನಿಂದ 10,000 ರೂ ಕಳೆದುಕೊಂಡಿರುವುದು ಪ್ರಸಾದ್‌ಗೆ ತಿಳಿಯಿತು.

ಪ್ರಮುಖ ಟಿ.ವಿ ಚಾನೆಲ್ ಒಂದರ ಹಣಕಾಸು ಅಧಿಕಾರಿ ನಿತಿನ್ ಮಾಥುರ್‌ ಕೂಡ ಓಲಾ ಕ್ಯಾಬ್‌ ಚಾಲಕನಿಗೆ ಕರೆದ ಮಾಡಿದ್ದರು. ಅವರ ಓಲಾ ಮನಿ ಅಕೌಂಟಿನಿಂದಲೂ 4,000 ರೂ ಮಾಯವಾಯ್ತು.

ಈ ಇಬ್ಬರೂ ಸಂತ್ರಸ್ತರು ಒಬ್ಬನೇ ಚಾಲಕ ಹಾಗೂ ಆತನ ಸಹವರ್ತಿಗಳಿಂದ ಮೋಸ ಹೋಗಿರಬಹುದು ಎಂದು ಶಂಕಿಸಿದ್ದಾರೆ.

ಪ್ರಸಾದ್ ಅವರು ಮೇಘ್ವಾಡಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದರೆ, ಮಾಥುರ್‌ ಟ್ವಿಟರ್ ಮೂಲಕ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಗ್ರಾಹಕರು ತಮ್ಮ ಸುರಕ್ಷತೆಯನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬ ಬಗ್ಗೆ ನಾವು ನಿರಂತರವಾಗಿ ಮಾಹಿತಿಗಳನ್ನು ನೀಡುತ್ತಲೇ ಇದ್ದೇವೆ. ಲಾಗಿನ್ ವಿವರ, ಒಟಿಪಿಯಂತಹ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಯಾರ ಜತೆಗೂ ಹಂಚಿಕೊಳ್ಳಬಾರದು ಎಂದು ತಿಳಿಸುತ್ತಲೇ ಇದ್ದೇವೆ. ನಾವು ಯಾವತ್ತೂ ಅಂತಹ ಮಾಹಿತಿಗಳನ್ನು ಕೇಳುವುದಿಲ್ಲ. ಓಲಾ ಕಂಪನಿಯವರೇ ಎಂದು ಹೇಳಿಕೊಂಡು ಯಾರಾದರೂ ಕೇಳಿದರೂ ಮಾಹಿತಿಗಳನ್ನು ನೀಡಬಾರದು' ಎಂದು ಓಲಾ ವಕ್ತಾರರೊಬ್ಬರು ತಿಳಿಸಿದರು.

'ಮತ್ತೊಬ್ಬ ವ್ಯಕ್ತಿಯ ಫೋನ್‌ ನಂಬರ್‌ಗೆ ಹೊಸದಾಗಿ ಓಲಾ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡರೂ ದುರ್ಬಳಕೆ ತಡೆಯುವುದಕ್ಕಾಗಿ ಮೂಲ ನೋಂದಾಯಿತ ಫೋನ್ ಸಂಖ್ಯೆಗೆ ಒಟಿಪಿ ರವಾನೆಯಾಗುತ್ತದೆ. ಹೀಗಾಗಿ ಒಟಿಪಿಯನ್ನು ಹಾರ ಜತೆಗೂ ಹಂಚಿಕೊಳ್ಳಬಾರದು. ಒಟಿಪಿ ಇಲ್ಲದೆ ಇಂತಹ ವಂಚನೆ ಪ್ರಕರಣ ಅಸಾಧ್ಯ' ಎಂದು ಸೈಬರ್ ಭದ್ರತಾ ತಜ್ಞ ಹಾಗೂ ವಕೀಲ ಪ್ರಶಾಂತ್ ಮಾಲಿ ಹೇಳುತ್ತಾರೆ.

ಗ್ರಾಹಕರ ವಿವರಗಳನ್ನು ಯಾವತ್ತೂ ಚಾಲಕರ ಜತೆ ನಾವು ಹಂಚಿಕೊಳ್ಳುವುದಿಲ್ಲ ಎಂದು ಕ್ಯಾಬ್ ಅಗ್ರಿಗೇಟರ್‌ (ಓಲಾ ಕ್ಯಾಬ್) ಹೇಳುತ್ತಾರೆ. ಗ್ರಾಹಕರು ಚಾಲಕನಿಗೆ ಕರೆ ಮಾಡಿದಾಗಷ್ಟೇ ಗ್ರಾಹಕರ ಫೋನ್‌ ಸಂಖ್ಯೆ ಚಾಲಕರಿಗೆ ತಿಳಿಯುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ