ಹೊಸದಿಲ್ಲಿ: ಚಳಿಗಾಲದ ಸಂಸತ್ ಅಧಿವೇಶನ ಆರಂಭಗೊಂಡ ದಿನದಿಂದಲೂ ಕರ್ನಾಟಕದ ಮೇಕೆದಾಟು ಅಣೆಕಟ್ಟು ಯೋಜನೆಗೆ ವಿರೋಧ ವ್ಯಕ್ತಪಡಿಸಿ ಸುಗಮ ಕಲಾಪಕ್ಕೆ ಅಡ್ಡಿಪಡಿಸುತ್ತಾ ಬಂದಿರುವ 24 ಎಐಎಡಿಎಂಕೆ ಸದಸ್ಯರನ್ನು ಐದು ದಿನಗಳವರೆಗೆ ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ. ಸಭ್ಯತೆಯ ನಿಯಮ ಮೀರಿ ಸದನದಲ್ಲಿ ಗದ್ದಲ ನಡೆಸಿದ್ದರಿಂದ ಶಿಸ್ತು ಕ್ರಮದ ಭಾಗವಾಗಿ ಸ್ಪೀಕರ್ ಸುಮಿತ್ರಾ ಮಹಾಜನ್, ಮುಂದಿನ ಐದು ದಿನದ ಕಲಾಪಗಳಿಂದ ಈ ಸಂಸದರನ್ನು ಅಮಾನತುಗೊಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ನಿರಂತರ ಪುಂಡಾಟ: ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣ ಸಂಬಂಧ ಡಿಪಿಆರ್ ಸಿದ್ಧಪಡಿಸಲು ಕರ್ನಾಟಕಕ್ಕೆ ಅವಕಾಶ ನೀಡಿದ ಕೇಂದ್ರ ಜಲ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ತಮಿಳುನಾಡಿನ ಸಂಸದರು ಸಂಸತ್ತಿನಲ್ಲಿ ನಿರಂತರ ಪುಂಡಾಟ ನಡೆಸುತ್ತಿದ್ದಾರೆ. ಅವರ ಪ್ರತಿಭಟನೆಯಿಂದಾಗಿ ಯಾವುದೇ ಕಲಾಪಗಳು ಸುಗಮವಾಗಿ ನಡೆಸಲು ಸಾಧ್ಯವಾಗಿಲ್ಲ.
ಕರ್ನಾಟಕದ ಸಂಸದರು ವಿವರಣೆ ನೀಡಿದರೂ ಕೇಳಿಸಿಕೊಳ್ಳುವ ತಾಳ್ಮೆ ಇಲ್ಲದ ಎಐಎಡಿಎಂಕೆ ಸದಸ್ಯರು ಗಲಾಟೆ ಎಬ್ಬಿಸುತ್ತಲೇ ಇದ್ದು, ಅಂತಿಮವಾಗಿ ಸ್ಪೀಕರ್ ಶಿಕ್ಷೆಗೆ ಒಳಗಾಗಿದ್ದಾರೆ.