ಆ್ಯಪ್ನಗರ

ಸೆಪ್ಟೆಂಬರ್‌ 25ರ ಭಾರತ್‌ ಬಂದ್‌ಗೆ 250 ಕೃಷಿ ಸಂಘಟನೆಗಳ ಬೆಂಬಲ

ಹೊಸ ಕಾಯಿದೆಯಿಂದ ಕನಿಷ್ಠ ಬೆಂಬಲ ಬೆಲೆ ನೀತಿಗೆ ಒದಗುವ ಗತಿ ಏನು ಎನ್ನುವ ಕಳವಳ ನಮ್ಮನ್ನು ಕಾಡುತ್ತಿದೆ. ಕಾಯಿದೆಯಲ್ಲಿ ಈ ಬಗ್ಗೆ ಖಾತ್ರಿ ನೀಡಬೇಕು ಎನ್ನುವುದು ನಮ್ಮ ಆಗ್ರಹ ಎಂದು ಆರ್‌ಎಸ್‌ಎಸ್‌ ಸಹಸಂಘಟನೆ ಭಾರತೀಯ ಕಿಸಾನ್‌ ಸಂಘ ಹೇಳಿದೆ.

Agencies 22 Sep 2020, 9:35 pm
ಹೊಸದಿಲ್ಲಿ: ರೈತರ ಆದಾಯ ದ್ವಿಗುಣಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಸರಕಾರ ಸಂಸತ್ತಿನ ಅನುಮೋದನೆ ಪಡೆದಿರುವ ಎರಡು ಕೃಷಿ ವಿಧೇಯಕಗಳ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ ತೀವ್ರಗೊಂಡಿದೆ. ಕೃಷಿ ಸಂಘಟನೆಗಳು ಸೆ.25ರಂದು 'ಭಾರತ್‌ ಬಂದ್‌' ನಡೆಸಲು ಕರೆ ನೀಡಿವೆ.
Vijaya Karnataka Web Farmer protest
ಹರಿಯಾಣದ ಅಂಬಾಲದಲ್ಲಿ ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ


ದೇಶದ ಸುಮಾರು 250 ಕೃಷಿ ಸಂಘಟನೆಗಳು ಅಂದು ಪ್ರತಿಭಟನೆ ನಡೆಸಲಿವೆ. ಅಖಿಲ ಭಾರತ ಕಿಸಾನ್‌ ಸಂಘರ್ಷ ಸಮನ್ವಯ ಸಮಿತಿ ಹೆಸರಿನಲ್ಲಿ ಒಕ್ಕೂಟ ರಚಿಸಿಕೊಂಡು ಹೋರಾಟ ತೀವ್ರಗೊಳಿಸಲು ಕೃಷಿ ಸಂಘಟನೆಗಳು ನಿರ್ಧರಿಸಿವೆ.

"ಬೆಂಬಲ ಬೆಲೆ ವಿಷಯದಲ್ಲಿ ಖಾತ್ರಿ ನೀಡದೇ ಹೋದರೆ ದೇಶವ್ಯಾಪಿ ಅಶಾಂತಿ ಸ್ಫೋಟಗೊಳ್ಳಲಿದೆ. ನೂತನ ಕಾನೂನುಗಳಿಂದ ಅನುಕೂಲಕ್ಕಿಂತ ಅಪಾಯವೇ ಹೆಚ್ಚು. ವಿಶೇಷವಾಗಿ ಬಡವರ ಆಹಾರ ಭದ್ರತೆಯ ಬೀಗದ ಕೈ ಕಾರ್ಪೊರೇಟ್‌ ಕುಳಗಳ ಕೈಸೇರುತ್ತದೆ,'' ಎಂದು ಅಖಿಲ ಭಾರತ ಕಿಸಾನ್‌ ಸಂಘರ್ಷ ಸಮನ್ವಯ ಸಮಿತಿಯ ಸಂಚಾಲಕ ವಿ.ಎಂ. ಸಿಂಗ್‌ ಎಚ್ಚರಿಸಿದ್ದಾರೆ.

ರೈತ, ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆ ವಿರೋಧಿಸಿ ಸೆ.25ಕ್ಕೆ ಭಾರತ್‌ ಬಂದ್‌, ಬುಧವಾರ ನಿರ್ಧಾರ

''ಇದು 'ಜಿಂದಾಬಾದ್‌-ಮುರ್ದಾಬಾದ್‌'ಗೆ ಸೀಮಿತವಾದ ವಿಷಯ ಅಲ್ಲ. ರೈತರ ಬದುಕಿನ ಜೀವನ್ಮರಣದ ಪ್ರಶ್ನೆ. ಪ್ರಜಾಪ್ರಭುತ್ವದ ಹಾದಿಯಲ್ಲಿಯೇ ಸರಕಾರಕ್ಕೆ ಈ ವಿಷಯ ಮನವರಿಕೆ ಮಾಡಿಕೊಡುವ ಪ್ರಯತ್ನ ಇದುವರೆಗೆ ಮಾಡಿದ್ದೇವೆ. ಸುಗ್ರೀವಾಜ್ಞೆ ಹೊರಡಿಸಿದ ಬೆನ್ನ ಹಿಂದೆಯೇ ಪ್ರಧಾನಿಗೆ ನಮ್ಮ ಕಳವಳ ವ್ಯಕ್ತಪಡಿಸಿ ಸಾವಿರಾರು ಪತ್ರ ಬರೆದದ್ದಾಗಿದೆ. ಸಂಸತ್ತಿನ ಒಳಗೂ ನಮ್ಮ ಆತಂಕಕ್ಕೆ ಈ ಸರಕಾರ ಸ್ಪಂದಿಸುವ ಪ್ರಯತ್ನ ಮಾಡಲಿಲ್ಲ. ಆದ್ದರಿಂದ ಈಗ ಹೋರಾಟವೊಂದೇ ನಮಗೆ ಉಳಿದಿರುವ ದಾರಿ,'' ಎಂದು ಜೈ ಕಿಸಾನ್‌ ಆಂದೋಲನದ ಸಂಚಾಲಕ ಅವಿಕ್‌ ಸಹಾ ಹೇಳಿದ್ದಾರೆ.

ಕೃಷಿ ವಿಧೇಯಕಗಳ ವಿರುದ್ಧ ಪಂಜಾಬ್‌ ಮತ್ತು ಹರಿಯಾಣ ರೈತರು ತಿಂಗಳ ಹಿಂದೆ ಪ್ರತಿಭಟನೆ ಆರಂಭಿಸಿದ್ದಾರೆ. ಅದು ಈಗ ದೇಶಾದ್ಯಂತ ವ್ಯಾಪಿಸುತ್ತಿದೆ.

ಆರ್‌ಎಸ್‌ಎಸ್‌ ಕಳವಳ

"ಹೊಸ ಕಾನೂನಿನಿಂದ ಕೆಲವು ಉತ್ತಮ ಪರಿಣಾಮ ಕಾಣಿಸುವ ಭರವಸೆ ಇದೆ. 'ಒಂದು ದೇಶ, ಒಂದು ಮಾರುಕಟ್ಟೆ' ಪರಿಕಲ್ಪನೆಯಿಂದ ರೈತರಿಗೆ ಅನುಕೂಲವಾಗುತ್ತದೆ. ಆದರೆ ಕನಿಷ್ಠ ಬೆಂಬಲ ಬೆಲೆ ನೀತಿಗೆ ಒದಗುವ ಗತಿ ಏನು ಎನ್ನುವ ಕಳವಳ ನಮ್ಮನ್ನು ಕಾಡುತ್ತಿದೆ. ಕಾಯಿದೆಯಲ್ಲಿ ಈ ಬಗ್ಗೆ ಖಾತ್ರಿ ನೀಡಬೇಕು ಎನ್ನುವುದು ನಮ್ಮ ಆಗ್ರಹ,'' ಎಂದು ಆರ್‌ಎಸ್‌ಎಸ್‌ ಸಹಸಂಘಟನೆ ಭಾರತೀಯ ಕಿಸಾನ್‌ ಸಂಘದ ಪ್ರಧಾನ ಕಾರ್ಯದರ್ಶಿ ಮೋಹಿನಿ ಮೋಹನ್‌ ಮಿಶ್ರಾ ತಿಳಿದ್ದಾರೆ. ''ಬೆಂಬಲ ಬೆಲೆ ವ್ಯವಸ್ಥೆಗೆ ಏನೂ ಧಕ್ಕೆ ಆಗುವುದಿಲ್ಲ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ. ಆದರೆ ಕಾನೂನಿನಲ್ಲಿಯೂ ಈ ಸಂಗತಿಯನ್ನು ಸೇರ್ಪಡೆ ಮಾಡಿ ಎನ್ನುವುದು ಬೇಡಿಕೆ,'' ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಬಂದ್‌ ಬುಧವಾರ ತೀರ್ಮಾನ


ಇನ್ನು ರಾಜ್ಯದಲ್ಲಿ ಬಂದ್‌ ನಡೆಸುವ ಬಗ್ಗೆ ಬುಧವಾರ ನಿರ್ಧಾರ ತೆಗೆದುಕೊಳ್ಳುವುದಾಗಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ