ಆ್ಯಪ್ನಗರ

ಭಯೋತ್ಪಾದನೆ ಬಗ್ಗುಬಡಿಯಲು ಒಂದಾಗೋಣ: ಪ್ರಧಾನಿ ಮೋದಿ

ಮುಂಬಯಿ ದಾಳಿಯ 9ನೇ ವರ್ಷಾಚರಣೆ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ದುರಂತದಲ್ಲಿ ಪ್ರಾಣತೆತ್ತವರನ್ನು ಸ್ಮರಿಸಿಕೊಂಡಿದ್ದು ಭಯೋತ್ಪಾದನೆ ವಿರುದ್ಧ ಜಗತ್ತು ಒಂದಾಗಿ ಹೋರಾಡಬೇಕು ಎಂದು ಕರೆ ನೀಡಿದ್ದಾರೆ.

PTI 26 Nov 2017, 12:44 pm
ಮುಂಬಯಿ ದಾಳಿಗಳ 9ನೇ ವರ್ಷಾಚರಣೆ ಸಂದರ್ಭ ಪ್ರಧಾನಿಯ ಮನ್‌ ಕೀ ಬಾತ್‌
Vijaya Karnataka Web 11 anniversary modi urges world to together battle terror
ಭಯೋತ್ಪಾದನೆ ಬಗ್ಗುಬಡಿಯಲು ಒಂದಾಗೋಣ: ಪ್ರಧಾನಿ ಮೋದಿ


ಹೊಸದಿಲ್ಲಿ: ಮುಂಬಯಿ ದಾಳಿಯ 9ನೇ ವರ್ಷಾಚರಣೆ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ದುರಂತದಲ್ಲಿ ಪ್ರಾಣತೆತ್ತವರನ್ನು ಸ್ಮರಿಸಿಕೊಂಡಿದ್ದು ಭಯೋತ್ಪಾದನೆ ವಿರುದ್ಧ ಜಗತ್ತು ಒಂದಾಗಿ ಹೋರಾಡಬೇಕು ಎಂದು ಕರೆ ನೀಡಿದ್ದಾರೆ.

ತಮ್ಮ ತಿಂಗಳ 'ಮನ್‌ ಕೀ ಬಾತ್‌' ಕಾರ್ಯಕ್ರಮದಲ್ಲಿ, ಭಯೋತ್ಪಾದನೆಯ ಪಿಡುಗು ಬೆಳೆಯುತ್ತಿರುವುದನ್ನು ನಾಲ್ಕು ದಶಕಗಳಿಂದ ಭಾರತ ಜಗತ್ತಿನ ಮುಂದೆ ಪ್ರಸ್ತಾಪಿಸುತ್ತಲೇ ಬಂದಿದೆ ಎಂದು ನೆನಪಿಸಿಕೊಂಡರು.

'ಪ್ರಾರಂಭದಲ್ಲಿ ಜಗತ್ತು ನಮ್ಮ ಮಾತನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಇಂದು ಭಯೋತ್ಪಾದನೆಯ ವಿನಾಶಕಾರಿ ಮುಖ ವಿಶ್ವಕ್ಕೆ ಅರಿವಾಗಿದೆ... ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೊಗೆಯಲು ಜಗತ್ತು ಕೈಜೋಡಿಸಲಿದೆ' ಎಂದು ಪ್ರಧಾನಿ ನುಡಿದರು.

'ಭಯೋತ್ಪಾದನೆ ಮತ್ತು ತೀವ್ರವಾದಗಳು ದೇಶದ ಸಾಮಾಜಿಕ ಬಂಧವನ್ನೇ ಹಾಳುಗೆಡಹುವ 'ಅಪವಿತ್ರ ಪ್ರಯತ್ನ' ಮಾಡಿವೆ. ಆದ್ದರಿಂದ ಎಲ್ಲ ಮಾನವೀಯ ಶಕ್ತಿಗಳು ಭಯೋತ್ಪಾದನೆಯ ವಿರುದ್ಧ ಒಗ್ಗೂಡಿ ಸಮರ ನಡೆಸುವ ಅಗತ್ಯ ಹೆಚ್ಚಾಗಿದೆ' ಎಂದು ಅವರು ಪ್ರತಿಪಾದಿಸಿದರು.

'ಇದು ಅಹಿಂಸೆ ಮತ್ತು ಶಾಂತಿಯ ಸಂದೇಶ ಸಾರಿದ ಮಹಾವೀರ, ಬುದ್ಧ, ಗುರುನಾನಕ್‌ ಮತ್ತು ಮಹಾತ್ಮಾ ಗಾಂಧಿಯಂತಹ ಮಹಾ ಪುರುಷರ ನಾಡು. ಭಯೋತ್ಪಾದನೆಯು ಮಾನವೀಯ ಶಕ್ತಿಗಳನ್ನು ಹಾಳುಗೆಡಹುತ್ತಿದೆ. ಆದ್ದರಿಂದ ಭಾರತ ಮಾತ್ರವಲ್ಲ, ಇಡೀ ಜಗತ್ತಿನ ಮಾನವತಾವಾದಿ ಶಕ್ತಿಗಳು ಭಯೋತ್ಪಾದನೆಯನ್ನು ಬಗ್ಗುಬಡಿಯಲು ಒಂದಾಗಬೇಕು' ಎಂದು ಪ್ರಧಾನಿ ಮೋದಿ ಕರೆ ನೀಡಿದರು.

2008ರ ಮುಂಬಯಿ ಭಯೋತ್ಪಾದಕ ದಾಳಿಗಳಲ್ಲಿ ನೂರಾರು ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು.

ತಾಪಮಾನ ಹೆಚ್ಚಳದ ಪ್ರಸ್ತಾಪ: ಜಾಗತಿಕ ತಾಪಮಾನದ ಹಿನ್ನೆಲೆಯಲ್ಲಿ ಹವಾಮಾನ ಬದಲಾವಣೆಯಾಗುತ್ತಿರುವುದನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ತಿಂಗಳ ರೇಡಿಯೋ ಭಾಷಣ 'ಮನ್‌ ಕೀ ಬಾತ್‌'ನಲ್ಲಿ ಪ್ರಸ್ತಾಪಿಸಿದ್ದಾರೆ.

ಪ್ರತಿವರ್ಷವೂ ದೀಪಾವಳಿಯ ಮುಂಚೆಯೇ ಚಳಿಗಾಲ ಶುರುವಾಗುತ್ತಿದ್ದ ಕಾಲವೊಂದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಡಿಸೆಂಬರ್‌ ಬಂದರೂ ವಾತಾವರಣ ಬಿಸಿಯಾಗಿಯೇ ಇರುತ್ತದೆ. ಇದು ಭೂ ತಾಪಮಾನ ಹೆಚ್ಚಳದ ಪರಿಣಾಮ ಎಂದು ಪ್ರಧಾನಿ ನುಡಿದರು.

ಸಕಾರಾತ್ಮಕ ನೆನಪು ಹಂಚಿಕೊಳ್ಳಿ: 'ಪ್ರತಿ ವರ್ಷದ ಕೊನೆಯಲ್ಲಿ ಕಳೆದು ಹೋದ ವರ್ಷದ ಘಟನೆಗಳನ್ನು ನೆನಪಿಸಿಕೊಳ್ಳುವುದು ವಾಡಿಕೆ. ಆದರೆ ನಾವೀಗ ಹೊಸ ವರ್ಷದ ಆಗಮನವನ್ನು ಧನಾತ್ಮಕ ಸಂದೇಶದೊಂದಿಗೆ ಸ್ವಾಗತಿಸೋಣ. ಈ ವರ್ಷದ ನಡೆದ ಐದು ಧನಾತ್ಮಕ ಸಂಗತಿಗಳನ್ನು ನೆನಪಿಸಿಕೊಂಡು ನನ್ನ ಜತೆ ಹಂಚಿಕೊಳ್ಳಿ. 2017ರ ನಿಮ್ಮ ಧನಾತ್ಮಕ ಸಂಗತಿಗಳನ್ನು #PositiveIndia ಹ್ಯಾಶ್‌ಟ್ಯಾಗ್‌ನಲ್ಲಿ ನನ್ನ ಜತೆ ಹಂಚಿಕೊಳ್ಳಿ. ಅವುಗಳು ನಮ್ಮೆಲ್ಲರಿಗೂ ಪ್ರೇರಣೆಯಾಗುವಂತಿರಲಿ' ಎಂದು ಪ್ರಧಾನಿ ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ