ಆ್ಯಪ್ನಗರ

ಜಸ್ಟಿಸ್‌ ಲೋಯಾ ಸಾವಿನ ಪ್ರಕರಣ ಸಿಜೆಐ ನೇತೃತ್ವದ ಪೀಠಕ್ಕೆ

ಸಿಬಿಐ ನ್ಯಾಯಾಧೀಶ ಬಿ.ಎಚ್‌ ಲೋಯಾ ಅವರ ಸಂದೇಹಾಸ್ಪದ ಸಾವಿನ ಕುರಿತು ತನಿಖೆಗೆ ಆಗ್ರಹಿಸಿದ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ದೀಪಕ್‌ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠ ಸೋಮವಾರ ಕೈಗೆತ್ತಿಕೊಳ್ಳಲಿದೆ.

Vijaya Karnataka Web 20 Jan 2018, 4:43 pm
ಹೊಸದಿಲ್ಲಿ: ಸಿಬಿಐ ನ್ಯಾಯಾಧೀಶ ಬಿ.ಎಚ್‌ ಲೋಯಾ ಅವರ ಸಂದೇಹಾಸ್ಪದ ಸಾವಿನ ಕುರಿತು ತನಿಖೆಗೆ ಆಗ್ರಹಿಸಿದ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ದೀಪಕ್‌ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠ ಸೋಮವಾರ ಕೈಗೆತ್ತಿಕೊಳ್ಳಲಿದೆ.
Vijaya Karnataka Web 3 judge bench headed by chief justice to hear pils for probe into judge loyas death
ಜಸ್ಟಿಸ್‌ ಲೋಯಾ ಸಾವಿನ ಪ್ರಕರಣ ಸಿಜೆಐ ನೇತೃತ್ವದ ಪೀಠಕ್ಕೆ


ಜಸ್ಟಿಸ್‌ ಅರುಣ್‌ ಮಿಶ್ರಾ ನೇತೃತ್ವದ ಇನ್ನೊಂದು ಪೀಠಕ್ಕೆ ವಹಿಸಲಾಗಿದ್ದ ಪ್ರಕರಣವನ್ನು ಸಿಜೆಐ ಕಳೆದ ವಾರ ತಮ್ಮ ನೇತೃತ್ವದ ಪೀಠಕ್ಕೆ ಮರು ಹಂಚಿಕೆ ಮಾಡಿದ್ದರು.

ಆಯ್ದ ಕೇಸುಗಳನ್ನು ಕಿರಿಯ ನ್ಯಾಯಾಧೀಶರ ನೇತೃತ್ವದ ಪೀಠಗಳಿಗೆ ಹಂಚಿಕೆ ಮಾಡುತ್ತಿರುವ ಸಿಜೆಐ ಕೇಸುಗಳ ಹಂಚಿಕೆಯಲ್ಲಿ ತಾರತಮ್ಯವೆಸಗುತ್ತಿದ್ದಾರೆ ಎಂದು ಕಳೆದ ವಾರ ನಾಲ್ವರು ಹಿರಿಯ ನ್ಯಾಯಾಧೀಶರು ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಜಸ್ಟಿಸ್‌ ಲೋಯಾ ಸಾವಿನ ಪ್ರಕರಣವನ್ನು ಸಿಜೆಐ ದೀಪಕ್‌ ಮಿಶ್ರಾ ಮರಳಿ ತಮ್ಮ ಪೀಠದ ವ್ಯಾಪ್ತಿಗೆ ತೆಗೆದುಕೊಂಡಿದ್ದಾರೆ.

'ಭಿನ್ನಮತೀಯ' ನ್ಯಾಯಾಧೀಶರ ಅಸಮಾಧಾನಕ್ಕೆ ಈ ಕೇಸೂ ಒಂದು ಪ್ರಮುಖ ಕಾರಣವಾಗಿತ್ತು. ತಮ್ಮ ವೈಯಕ್ತಿಕ ಆದ್ಯತೆಯ ಮೇರೆಗೆ ಸಿಜೆಐ ಕೇಸುಗಳ ಹಂಚಿಕೆ ಮಾಡುತ್ತಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಜಸ್ಟಿಸ್‌ ಚಲಮೇಶ್ವರ್‌ ಮತ್ತು ಇತರ ಮೂವರು ಆರೋಪಿಸಿದ್ದರು.

ಕಳೆದ ವಾರ ಜಸ್ಟಿಸ್ ಅರುಣ್‌ ಮಿಶ್ರಾ ಭಾವನಾತ್ಮಕ ಭಾಷಣ ಮಾಡಿ, ಸುಪ್ರೀಂ ಕೋರ್ಟಿನ ನಾಲ್ವರು ಅತ್ಯಂತ ಹಿರಿಯ ನ್ಯಾಯಾಧೀಶರು ಜಡ್ಜ್‌ಗಳನ್ನು ಹಿರಿಯರು-ಕಿರಿಯರು ಎಂದು ವಿಭಜಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದರು. ಆ ನಾಲ್ವರು ನ್ಯಾಯಾಧೀಶರು ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ಹೊರಹಾಕುವ ಮೂಲಕ ನ್ಯಾಯಾಂಗದ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಅರುಣ್ ಮಿಶ್ರಾ ಟೀಕಿಸಿದ್ದರು. ಅಲ್ಲದೆ ತಮ್ಮ ನೇತೃತ್ವದ ಪೀಠ ಮುಖ್ಯ ನ್ಯಾಯಮೂರ್ತಿಗಳ ಆದ್ಯತೆಯ ಪೀಠ ಎಂಬಂತೆ ಬಿಂಬಿಸಿ ಘನತೆಗೆ ಮಸಿ ಬಳಿಯುತ್ತಿದ್ದಾರೆ ಎಂದೂ ಮಿಶ್ರಾ ಆರೋಪಿಸಿದ್ದರು.

ಜಸ್ಟಿಸ್‌ ಲೋಯಾ 2014ರ ಡಿಸೆಂಬರ್‌ 1ರಂದು ನಿಧನರಾಗುವ ವೇಳೆಗೆ ಅಂತಾರಾಜ್ಯ ಗ್ಯಾಂಗ್‌ಸ್ಟರ್‌ ಸೊಹ್ರಾಬುದ್ದೀನ್‌ ಶೇಖ್‌ನ ಎನ್‌ಕೌಂಟರ್‌ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ಈ ಪ್ರಕರಣದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಇತರರ ವಿರುದ್ಧ ಆರೋಪ ಹೊರಿಸಲಾಗಿತ್ತು. ನಂತರ ಕೇಸಿನ ವಿಚಾರಣೆ ನಡೆಸಿದ ನ್ಯಾಯಾಧೀಶರು ಶಾ ಅವರನ್ನು ದೋಷಮುಕ್ತಗೊಳಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ