ಇಬ್ಬರು ಯೋಧರು ಹುತಾತ್ಮ
ಹೊಸದಿಲ್ಲಿ: ದಕ್ಷಿಣ ಕಾಶ್ಮೀರದಲ್ಲಿ ನಡೆದ ಭಾರಿ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದೀನ್ನ ಸ್ವಯಂಘೋಷಿತ ಕಮಾಂಡರ್ ಯಾಸಿನ್ ಇಟ್ಲೂ ಅಲಿಯಾಸ್ ಗಜ್ನವಿ ಸೇರಿದಂತೆ ಮೂವರು ಬಲಿ ತೆಗೆದುಕೊಳ್ಳುವ ಮೂಲಕ ಸೇನಾ ಪಡೆಯು ಉಗ್ರರಿಗೆ ವಜ್ರಾಘಾತ ನೀಡಿದೆ. ಆದರೆ, ಈ ಹೋರಾಟದಲ್ಲಿ ಭಾರತೀಯ ಸೇನಾ ಪಡೆಯ ಇಬ್ಬರು ಯೋಧರು ವೀರ ಮರಣವನ್ನಪ್ಪಿದ್ದಾರೆ.
ಶೋಪಿಯಾನ್ ಜಿಲ್ಲೆಯಲ್ಲಿ ಜೈನಾಪೋರ ಪ್ರದೇಶದ ಅವನೀರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಳಯರಾಜ ಮತ್ತು ಗವಾಯಿ ಸುಮೇಧ್ ವಾವನ್ ಹುತಾತ್ಮ ಯೋಧರು.
ಶನಿವಾರ ರಾತ್ರಿ ಅವ್ನೀರಾ ಗ್ರಾಮದಲ್ಲಿ ಕೆಲವು ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ದೊರಕಿತ್ತು. ವಿಶೇಷ ಕಾರ್ಯಾಚರಣೆ ತಂಡ, ಸೇನೆ ಮತ್ತು ಸಿಆರ್ಪಿಎಫ್ ತಂಡಗಳು ಅಲ್ಲಿಗೆ ಧಾವಿಸಿದ್ದವು.
ಸೇನಾ ಪಡೆಗಳು ಸುತ್ತುವರಿದ ಮಾಹಿತಿ ತಿಳಿದ ಉಗ್ರರು ಗುಂಡಿನ ದಾಳಿ ನಡೆಸಿದ ವೇಳೆ ಐವರು ಸೈನಿಕರು ಗಾಯಗೊಂಡರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಇಬ್ಬರು ಪ್ರಾಣ ಕಳೆದುಕೊಂಡರು.
ಸೇನಾಪಡೆಗಳು ರಾತ್ರಿ ಇಡೀ ಉಗ್ರರ ಸತತ ದಾಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ರಕ್ಷಣೆಗೆ ಆದ್ಯತೆ ನೀಡಿದವು. ಬೆಳಗಿನ ವರೆಗೆ ಕಾದು ಕುಳಿತು ನಿರ್ಣಾಯಕ ದಾಳಿ ನಡೆಸಿದವು ಮತ್ತು ಮೂವರು ಉಗ್ರರನ್ನು ಕೊಂದು ಹಾಕಿದವು. ಭದ್ರತಾ ಪಡೆಗಳು ಮತ್ತು ಉಗ್ರರ ನಡುವಿನ ಘರ್ಷಣೆಯಲ್ಲಿ ಏಳು ಮಂದಿ ನಾಗರಿಕರೂ ಗಾಯಗೊಂಡಿದ್ದಾರೆ.
ಬಂಡಿಪೋರಾದಲ್ಲೂ: ಇತ್ತ ಬಂಡಿಪೋರಾ ಜಿಲ್ಲೆಯಲ್ಲಿ ವಹಾಬ್ ಪ್ಯಾರೇ ಮೊಹಲ್ಲಾದಲ್ಲಿ ಉಗ್ರರ ಶೋಧ ಕಾರ್ಯಾಚರಣೆಯಲ್ಲಿದ್ದ ಪೊಲೀಸರ ಮೇಲೆ ದಾಳಿ ನಡೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಈ ವರ್ಷ 132 ಉಗ್ರರು ಹತ
ಜಮ್ಮು ಮತ್ತು ಕಾಶ್ಮೀರದಲ್ಲಿ 2017ರಲ್ಲಿ ಲಷ್ಕರೆ ತಯ್ಬಾದ ಅಬು ದುಜಾನಾ, ಬುರ್ಹಾನ್ ವಾನಿಯ ಉತ್ತರಾಧಿಕಾರಿ ಸಬ್ಜಾರ್ ಅಹಮದ್ ಭಟ್ ಸೇರಿದಂತೆ 132 ಮಂದಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದೆ.
ಹುತಾತ್ಮ ಯೋಧರು
1. ಸಿಪಾಯಿ ಇಳಯರಾಜ, ತಮಿಳುನಾಡಿನ ಕಂದಾನಿ ಗ್ರಾಮದವರು, ಇವರಿಗೆ ಹೆತ್ತವರು ಮತ್ತು ಪತ್ನಿ ಇದ್ದಾರೆ.
2. ಸಿಪಾಯಿ ಗವಾಯಿ ಸುಮೇಧ್ ವಾಮನ್, ಮಹಾರಾಷ್ಟ್ರದ ಲೋನಾಗರ ಗ್ರಾಮದವರು.
ಗಡಿಯಲ್ಲಿ ಪಾಕ್ ತಂಟೆ
ಈ ನಡುವೆ ಪೂಂಛ್ ಜಿಲ್ಲೆಯ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನಿ ಪಡೆಗಳು ಸಣ್ಣ ಶಸ್ತ್ರಾಸ್ತ್ರಗಳನ್ನು ಬಳಸಿ ಗುಂಡಿನ ದಾಳಿ ನಡೆಸಿವೆ. 24 ಗಂಟೆ ಅವಧಿಯಲ್ಲಿ ಮೂರು ಬಾರಿ ಕದನ ವಿರಾಮ ಉಲ್ಲಂಘನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾರಿವನು ಖತರ್ನಾಕ್ ಇಟ್ಲೂ?
ಭದ್ರತಾ ಸಿಬ್ಬಂದಿ ಗುಂಡಿಗೆ ಬಲಿಯಾದ ಮೂವರೂ ಖತರ್ನಾಕ್ ಉಗ್ರರು ಮತ್ತು ಸುಶಿಕ್ಷಿತರು.
ಇಟ್ಲೂ ಅಲಿಯಾಸ್ ಗಜ್ನವಿ ದಕ್ಷಿಣ ಕಾಶ್ಮೀರದ ಬುದ್ಗಾಂವ್ ಜಿಲ್ಲೆಗೆ ಸೇರಿದವನು. ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಮುಂಚೂಣಿಗೆ ಬಂದಿದ್ದ ಆತ ಯುವಕರನ್ನು ಉಗ್ರ ಜಾಲಕ್ಕೆ ಸೇರಿಸುವ ಕೆಲಸವನ್ನೂ ಮಾಡುತ್ತಿದ್ದ.
'ಹಳೆ ಉಗ್ರಗಾಮಿ' ಎಂದು ಕರೆಯಲ್ಪಡುವ ಈತ 1996ರಲ್ಲೇ ಹಿಜ್ಬುಲ್ ಮುಜಾಹಿದೀನ ಸೇರಿದ್ದ. 2007ರಲ್ಲಿ ಶರಣಾಗತನಾಗಿದ್ದ ಆತನನ್ನು 2014ರಲ್ಲಿ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು. ಅಲ್ಲಿಂದ ಮತ್ತೊಮ್ಮೆ ಉಗ್ರ ಪಡೆ ಸೇರಿದ ಆತ ಸ್ವಯಂಘೋಷಿತ ಮುಖ್ಯ ಕಾರ್ಯಾಚರಣೆ ಕಮಾಂಡರ್ ಆಗಿದ್ದ. ಆತನಿಂದ ಒಂದು ಕೆಕೆ ಮತ್ತು 2 ಎಕೆ ರೈಫಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಗ್ರ ಸಂಘಟನೆಯ ಆನ್ಲೈನ್ ಪ್ರಚಾರಕನಾಗಿದ್ದ ತಂತ್ರಜ್ಞ ಇರ್ಫಾನ್ ಮತ್ತು ಇಟ್ಲೂವಿನ ಖಾಸಗಿ ಭದ್ರತಾ ಬಂಟ ಉಮರ್ ಮೃತ ಇತರ ಇಬ್ಬರು ಉಗ್ರರು.