ರಾಹುಲ್, ಪ್ರಿಯಾಂಕಾ ಜಂಟಿ ವೆಂಚರ್..! ಪಂಚ ರಾಜ್ಯಗಳಲ್ಲೂ ಕಾಂಗ್ರೆಸ್ ಪಂಕ್ಚರ್..!
ಚುನಾವಣೆ ನಡೆದ ಐದೂ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಪ್ರದರ್ಶನ ನೀಡುವ ಮೂಲಕ, ಪಕ್ಷದ ನಾಯಕತ್ವದಲ್ಲಿ ಸಮಗ್ರ ಬದಲಾವಣೆ ಆಗಬೇಕು ಎನ್ನುವ ಬಹುದಿನಗಳ ಬೇಡಿಕೆಗೆ ಮತ್ತೆ ಜೀವ ಬಂದಿದೆ..! ಈಗ ಕಾಂಗ್ರೆಸ್ ಮತ್ತೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವ ಸನ್ನಿವೇಶ ಉಂಟಾಗಿದೆ. ಪಂಚ ರಾಜ್ಯ ಫಲಿತಾಂಶ ಏನಾಯ್ತು..? ದೇಶದಲ್ಲಿ ಕಾಂಗ್ರೆಸ್ ಪಕ್ಷದ ಇಂದಿನ ಸ್ಥಿತಿಗತಿ ಏನು..?
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಕಥೆ ಏನಾಯ್ತು..?
ಉನ್ನಾವ್ ಅತ್ಯಾಚಾರ ಪ್ರಕರಣ, ಕೃಷಿ ಕಾಯ್ದೆ ವಿರುದ್ಧದ ಹೋರಾಟ, ಕೋವಿಡ್ ವೇಳೆ ವಲಸೆ ಕಾರ್ಮಿಕರ ಪರ ಹೋರಾಟ, ಲಖೀಂಪುರ ಖೇರಿಯಲ್ಲಿ ನಡೆದ ಹಿಂಸಾಚಾರ ಘಟನೆ.. ಹೀಗೆ ಹಲವು ಅಸ್ತ್ರಗಳು ಕಾಂಗ್ರೆಸ್ ಪಕ್ಷದ ಬತ್ತಳಿಕೆಯಲ್ಲಿದ್ದವು. ಕೋವಿಡ್ ಸಂದರ್ಭದಲ್ಲಿ ಸರ್ಕಾರ ಸೂಕ್ತವಾಗಿ ನಿರ್ವಹಣೆ ಮಾಡಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆಯೂ ಕಾಂಗ್ರೆಸ್ ಹೋರಾಟ ಮಾಡಿತ್ತು. ಉತ್ತರ ಪ್ರದೇಶ ಕಾಂಗ್ರೆಸ್ ಚುನಾವಣೆಯ ಉಸ್ತುವಾರಿ ಹೊತ್ತಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಅವರಂತೂ, ಉತ್ತರ ಪ್ರದೇಶದಾದ್ಯಂತ ಕಳೆದ ಒಂದು ವರ್ಷದಿಂದ ಪಕ್ಷ ಸಂಘಟನೆ, ಚಳವಳಿ ನಡೆಸಿಕೊಂಡು ಬಂದಿದ್ದರು. ‘ಲಡ್ಕೀ ಹೂ ಲಡ್ ಸಕ್ತೀ ಹೂ’ ಎಂಬ ಘೋಷಣೆಯೊಂದಿಗೆ ಒಂದು ಹಂತಕ್ಕೆ ಉತ್ತರ ಪ್ರದೇಶದ ಕಾಂಗ್ರೆಸ್ ಸಿಎಂ ಅಭ್ಯರ್ಥಿಯಾಗಿ ಬಿಂಬಿತರಾಗಿದ್ದರು. ಆದ್ರೆ, ಈ ಎಲ್ಲಾ ಹೋರಾಟಗಳೂ ಇದೀಗ ನಿಷ್ಪಲವಾಗಿವೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಎಂದರೆ 2 ರಿಂದ 3 ಸ್ಥಾನವನ್ನಷ್ಟೇ ಗೆಲ್ಲಬಹುದಾಗಿದೆ.
ಪಂಜಾಬ್ನಲ್ಲಿ ಸರ್ಕಾರ ಕಳೆದುಕೊಂಡ ಕಾಂಗ್ರೆಸ್..!
ಪಂಜಾಬ್ನಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಪಕ್ಷ, ಚುನಾವಣೆಯ ಹೊಸ್ತಿಲಲ್ಲೇ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಕಿತ್ತೊಗೆಯಿತು. ಚರಣ್ಜಿತ್ ಸಿಂಗ್ ಚೆನ್ನಿ ಸಿಎಂ ಆದರು. ಇತ್ತ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾದರು. ಆರಂಭದಲ್ಲಿ ಸಿಧು ಆರ್ಭಟ ಜೋರಾಗಿಯೇ ಇತ್ತು..! ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಕಣದಲ್ಲಿ ಸಿಧು ಹಾಗೂ ಚೆನ್ನಿ ಜೋಡಿ ಅಬ್ಬರಿಸಿತ್ತು. ಆದ್ರೆ, ಸಿಎಂ ಅಭ್ಯರ್ಥಿ ಆಗಬೇಕೆಂಬ ಸಿಧು ಕನಸಿಗೆ ಹೈಕಮಾಂಡ್ ತಣ್ಣೀರೆರೆಚಿತ್ತು. ಚೆನ್ನಿ ಅವರನ್ನೇ ಸಿಎಂ ಅಭ್ಯರ್ಥಿ ಎಂದು ಘೋಷಿಸಿತ್ತು. ಇದು ಸಿಧು ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೆ, ಚೆನ್ನಿ ವಿರುದ್ಧದ ಮುಸುಕಿನ ಗುದ್ದಾಟಕ್ಕೆ ವೇದಿಕೆ ಕಲ್ಪಿಸಿತು. ಇನ್ನೊಂದೆಡೆ, ಸಿಎಂ ಹುದ್ದೆಯಿಂದ ಪದಚ್ಯುತಿಗೊಂಡ ಅಮರಿಂದರ್ ಸಿಂಗ್, ಪರೋಕ್ಷವಾಗಿ ಬಿಜೆಪಿ ಬೆಂಬಲದೊಂದಿಗೆ ತಮ್ಮದೇ ಪಕ್ಷ ಕಟ್ಟಿಕೊಂಡು ಕಾಂಗ್ರೆಸ್ ವಿರುದ್ಧ ಸಿಡಿದು ನಿಂತರು. ಇವೆಲ್ಲಕ್ಕಿಂತಾ ಹೆಚ್ಚಾಗಿ ಭಗವಂತ್ ಮನ್ ಜನಪ್ರಿಯತೆ ಹಾಗೂ ವರ್ಚಸ್ಸು ಎಲ್ಲರನ್ನೂ ಮೀರಿಸುವಂತಿತ್ತು. ಆಡಳಿತ ವಿರೋಧಿ ಅಲೆ, ಪಕ್ಷದೊಳಗಿನ ಕಿತ್ತಾಟದಿಂದಲೇ ಸೊರಗಿದ್ದ ಕಾಂಗ್ರೆಸ್ಗೆ ಎಎಪಿ ಮರ್ಮಾಘಾತವನ್ನೇ ನೀಡಿತು..! ಈ ವೇಳೆ ಭಗವಂತ್ ಮನ್ಗೆ ಕುಡುಕನ ಪಟ್ಟ ಕಟ್ಟಲು ಹೋದ ಕಾಂಗ್ರೆಸ್, ಅಲ್ಲಿಯೂ ಮುಖಭಂಗ ಅನುಭವಿಸಿತು..! ಈ ಮೂಲಕ ಕಾಂಗ್ರೆಸ್ ಪಕ್ಷ ಪಂಜಾಬ್ನಲ್ಲಿ 20ಕ್ಕಿಂತಾ ಕಡಿಮೆ ಸ್ಥಾನಕ್ಕೆ ಸೀಮಿತ ಆಗುವಂತಾಯ್ತು. ಎಎಪಿ ದಿಗ್ವಿಜಯ ಸಾಧಿಸಿತು..! ಇನ್ನು ಇವರಿಬ್ಬರ ಗುದ್ದಾಟದ ನಡುವೆ ಎಸ್ಎಡಿ, ಬಿಜೆಪಿ ಎರಡಂಕಿಯನ್ನೂ ತಲುಪಲು ಸಾಧ್ಯವಾಗಲಿಲ್ಲ..!
ಗೋವಾದಲ್ಲಿ ಬಿಜೆಪಿ ‘ಹ್ಯಾಟ್ರಿಕ್’ ಪಾರ್ಟಿ..!
ಗೋವಾದಲ್ಲಿ ಕಳೆದ ಚುನಾವಣೆ ಸಂದರ್ಭದಲ್ಲೇ ಕಾಂಗ್ರೆಸ್ನ ಹಲವು ನಾಯಕರನ್ನು ಸೆಳೆದಿದ್ದ ಬಿಜೆಪಿ, ಈ ಬಾರಿಯೂ ಕಾಂಗ್ರೆಸ್ ಪಕ್ಷದಿಂದ ಬಂದವರಿಗೇ ಪ್ರಾಶಸ್ತ್ಯ ನೀಡಿ ಟಿಕೆಟ್ ನೀಡಿತು. ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿಯ ಕೆಲವರಿಗೂ ಟಿಕೆಟ್ ನೀಡಿತು. ಮೂಲ ಬಿಜೆಪಿಗರಿಗಿಂತಲೂ ಪಕ್ಷಾಂತರಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಿದ್ದರು. ಇದೀಗ ಅವರೇ ಗೆದ್ದು ಬರುವ ಮೂಲಕ, ಬಿಜೆಪಿ ಸರಳ ಬಹುಮತದತ್ತ ದಾಪುಗಾಲು ಹಾಕುತ್ತಿದೆ. ಒಂದು ವೇಳೆ ಒಂದೆರಡು ಸ್ಥಾನಗಳು ಕಡಿಮೆಯಾದರೂ, ಪಕ್ಷೇತರ ಹಾಗೂ ಇತರ ಪಕ್ಷಗಳನ್ನು ಸೆಳೆಯುವುದು ಬಿಜೆಪಿಗೆ ತುಂಬಾನೇ ಸಲೀಸು..!
ಈ ಹಂತದಲ್ಲಿ ಕಾಂಗ್ರೆಸ್ ಪಕ್ಷ ಏನು ಮಾಡಿತು..? ಕಳೆದ ಚುನಾವಣೆಯಲ್ಲಿ 17 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್, ಈ ಬಾರಿ ಎರಡಂಕಿ ತಲುಪಲು ಏದುರಿಸು ಬಿಡಬೇಕಾಯ್ತು..! ಹಾಗೆ ನೋಡಿದರೆ, ಗೋವಾದಲ್ಲಿ ಕಾಂಗ್ರೆಸ್ ಚುನಾವಣೆಗೆ ತಯಾರಿಯನ್ನೇ ನಡೆಸಿರಲಿಲ್ಲ ಎನ್ನುತ್ತವೆ ಮೂಲಗಳು..! ಬಿಜೆಪಿಯ ನಾಲ್ಕೈದು ಸುತ್ತಿನ ಭೇಟಿ, ನಾಯಕರೊಂದಿಗೆ ಮಾತುಕತೆ, ಸಭೆಗಳು ನಡೆಯುತ್ತಿದ್ದರೆ ಗೋವಾದ ಕಾಂಗ್ರೆಸ್ಸಿಗರು ಮಾತ್ರ ಮುಖ ತಿರುಗಿಸಿಕೊಂಡಿದ್ದರು. ಎಐಸಿಸಿ ನಾಯಕ ಪಿ. ಚಿದಂಬರಂ ಗೋವಾಕ್ಕೆ ಕಾಲಿಡುವವರೆಗೂ ಗೋವಾ ಕಾಂಗ್ರೆಸ್ನ ಯಾವುದೇ ನಾಯಕರಲ್ಲೂ ಚುನಾವಣೆಯ ಉತ್ಸಾಹವೇ ಕಂಡು ಬಂದಿರಲಿಲ್ಲ..! ಇದೀಗ ಸೋಲಿಗೆ ಸಜ್ಜಾಗಿರುವ ಕಾಂಗ್ರೆಸ್ ಪಕ್ಷ, ತಾನು ಎಡವಿದ್ದು ಎಲ್ಲಿ ಎಂಬ ಆತ್ಮಾವಲೋಕನದಲ್ಲಿ ಮುಳುಗಿದೆ.
ಉತ್ತರಾಖಂಡ, ಮಣಿಪುರದಲ್ಲೂ ಕಾಂಗ್ರೆಸ್ ಸಾಧನೆ ಅಷ್ಟಕ್ಕಷ್ಟೇ..!
ಉತ್ತರಾಖಂಡದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷ ರೂಪಿಸಿದ್ದ ಚುನಾವಣಾ ರಣತಂತ್ರಗಳೆಲ್ಲಾ ಕೈಕೊಟ್ಟಿವೆ..! ಬಿಜೆಪಿ ಮತ್ತೊಮ್ಮೆ ಸರ್ಕಾರ ರಚಿಸಲು ತುದಿಗಾಲಲ್ಲಿ ನಿಂತಿದೆ..! ಉತ್ತರಾಖಂಡದಲ್ಲಿ ಯಾವುದೇ ಪಕ್ಷ ಸರ್ಕಾರ ರಚಿಸಲು ಕನಿಷ್ಟ 36 ಸದಸ್ಯ ಬಲದ ಅಗತ್ಯವಿದೆ. ಆದ್ರೆ, ಬಿಜೆಪಿ 40ಕ್ಕೂ ಹೆಚ್ಚು ಸ್ಥಾನದಲ್ಲಿ ಗೆದ್ದು ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದೆ..! ಕಾಂಗ್ರೆಸ್ ಪಕ್ಷ ಎರಡಂಕಿ ತಲುಪೋದಕ್ಕೂ ಏದುಸಿರು ಬಿಡ್ತಿದೆ..
ಇನ್ನು ಮಣಿಪುರದಲ್ಲಿ ಯಾವುದೇ ಪಕ್ಷ ಸರ್ಕಾರ ರಚಿಸಲು ಮ್ಯಾಜಿಕ್ ನಂಬರ್ 31. ಆದ್ರೆ ಮಾರ್ಚ್ 10ರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಲಭ್ಯವಾದ ಮಾಹಿತಿ ಪ್ರಕಾರ ಫಲಿತಾಂಶ ಪ್ರಕಟವಾದ ಒಟ್ಟು 41 ಸ್ಥಾನಗಳ ಪೈಕಿ ಆಡಳಿತಾರೂಢ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ..! ಈ ಮೂಲಕ ಬಿಜೆಪಿಯೇ ಮತ್ತೆ ಸರ್ಕಾರ ರಚಿಸುವ ಸಾಧ್ಯತೆ ನಿಚ್ಚಳವಾಗಿದ್ದು, ಇಲ್ಲಿ ಕಾಂಗ್ರೆಸ್ ಕೇವಲ 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವಲ್ಲಿ ಸಫಲವಾಗಿದೆ. ಈ ಮೂಲಕ, ಮಣಿಪುರದಲ್ಲೂ ಕಾಂಗ್ರೆಸ್ ಪ್ರದರ್ಶನ ಕಳಪೆಯಾಗಿದೆ.