ಆ್ಯಪ್ನಗರ

ರಾಜಸ್ಥಾನ ಆಯ್ತು, ಈಗ ಮಣಿಪುರ ಸರದಿ; ಕಾಂಗ್ರೆಸ್‌ನ 6 ಶಾಸಕರಿಂದ ರಾಜೀನಾಮೆ

ಸೋಮವಾರ ನಡೆದ ಒಂದು ದಿನದ ವಿಧಾನಸಭೆ ಅಧಿವೇಶನದಿಂದ ಪಕ್ಷದ ಹೈಕಮಾಂಡ್‌ ನೀಡಿದ್ದ ವಿಪ್‌ ಧಿಕ್ಕರಿಸಿ ಕಾಂಗ್ರೆಸ್‌ನ ಎಂಟು ಶಾಸಕರು ದೂರ ಉಳಿದಿದ್ದರು. ಇವರಲ್ಲಿ ಆರು ಜನ ಈಗ ರಾಜೀನಾಮೆ ನೀಡಿದ್ದಾರೆ.

Agencies 11 Aug 2020, 6:00 pm

ಇಂಪಾಲ್‌: ರಾಜಸ್ಥಾನದ ಕಾಂಗ್ರೆಸ್‌ ಬಿಕ್ಕಟ್ಟು ಕೊನೆಗೊಳ್ಳುವ ಸೂಚನೆ ಲಭಿಸಿರುವಾಗಲೇ ಅತ್ತ ಮಣಿಪುರದಲ್ಲಿ ಬಂಡಾಯದ ಬಿರುಗಾಳಿ ಎದ್ದಿದೆ. ಮಂಗಳವಾರ ಪಕ್ಷದ ಆರು ಶಾಸಕರು ರಾಜೀನಾಮೆ ನೀಡಿದ್ದು, ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Vijaya Karnataka Web O Ibobi Singh
ಕಾಂಗ್ರೆಸ್‌ ನಾಯಕ, ಮಾಜಿ ಸಿಎಂ ಓಕ್ರಾಮ್‌ ಇಬೋಬಿ ಸಿಂಗ್‌


ಸೋಮವಾರ ನಡೆದ ಒಂದು ದಿನದ ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ನೇತೃತ್ವದ ಎನ್‌. ಬಿರೇನ್‌ ಸಿಂಗ್‌ ಸರಕಾರ ವಿಶ್ವಾಸ ಮತ ಯಾಚನೆ ಮಾಡಿ ನಿರಾಯಾಸ ಗೆಲುವು ಸಾಧಿಸಿತ್ತು. ಪಕ್ಷದ ಹೈಕಮಾಂಡ್‌ ನೀಡಿದ್ದ ವಿಪ್‌ ಧಿಕ್ಕರಿಸಿ ಕಾಂಗ್ರೆಸ್‌ನ ಎಂಟು ಶಾಸಕರು ಈ ಮಹತ್ವದ ಅಧಿವೇಶನದಿಂದ ದೂರ ಉಳಿದಿದ್ದರು.

ಇವರಲ್ಲಿ ಆರು ಜನ ಶಾಸರು, ಒ ಹೆನ್ರಿ ಸಿಂಗ್‌, ಒಯಿನಮ್‌ ಲುಖೊಯಿ, ಮಹ್ಮದ್‌ ಅಬ್ದುಲ್‌ ನಸೀರ್‌, ಪಾವೊನಮ್‌ ಬ್ರೊಜೆನ್‌, ಎನ್‌ಗಮ್‌ಥಾಂಗ್‌ ಹಾಕಿಪ್‌ ಮತ್ತು ಗಿನ್‌ಸುವಾನ್‌ಹು ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಸದ್ಯ ರಾಜ್ಯದಲ್ಲಿ ಒ ಇಬೋಬಿ ಸಿಂಗ್‌ ಕಾಂಗ್ರೆಸ್‌ ನಾಯಕತ್ವ ವಹಿಸಿದ್ದು, ಇವರ ತೀರ್ಮಾನಗಳನ್ನು ಈ ಶಾಸಕರು ವಿರೋಧಿಸಿದ್ದಾರೆ.

"ರಾಜ್ಯದ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಇಬೋಬಿ ಸಿಂಗ್‌ ಅಸಮರ್ಥ ನಿಲುವುಗಳಿಂದ ಸರಕಾರ ರಚಿಸಲು ಸಾಧ್ಯವಾಗಿಲ್ಲ,’’ ಎಂದು ಈ ಅತೃಪ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಪರೇಷನ್‌ಗೆ ಇಳಿದವರಿಗೆ ರಿವರ್ಸ್‌ ಆಪರೇಷನ್‌ ಶಾಕ್‌, ಪತನದಂಚಿಗೆ ಮಣಿಪುರ ಬಿಜೆಪಿ ಸರಕಾರ

‘‘ಸೋಮವಾರ ರಾತ್ರಿ ವಿಧಾನಸಭೆ ಅಧಿವೇಶನದ ನಂತರ ಸ್ಪೀಕರ್‌ ಯಮ್ನಮ್‌ ಖೇಮ್‌ಚಂದ್‌ ಸಿಂಗ್‌ ಅವರು ನಮ್ಮನ್ನು ಕರೆಸಿಕೊಂಡು ವಿಚಾರಣೆ ನಡೆಸಿದರು. ನಮ್ಮ ರಾಜೀನಾಮೆ ಪತ್ರಗಳನ್ನು ಕೂಡ ಅವರು ಪರಿಶೀಲಿಸಿದರು, ಇನ್ನೂ ಅಂಗೀಕರಿಸಿಲ್ಲ’’ ಎಂದು ಹೆನ್ರಿ ಸಿಂಗ್‌ ಹೇಳಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯ ತೊರೆದು ತಾವು ಹೊರ ಬರುವುದಾಗಿ ಹೆನ್ರಿ ತಿಳಿಸಿದ್ದಾರೆ. ಇದೀಗ ಬಂದ ಸುದ್ದಿ ಪ್ರಕಾರ ಸ್ಪೀಕರ್‌ ಐವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಒಬ್ಬರ ರಾಜೀನಾಮೆಯನ್ನು ಮಾತ್ರ ಅಂಗೀಕರಿಸಿಲ್ಲ.

ಡ್ರಗ್‌ ಪ್ರಕರಣವೊಂದರ ತನಿಖೆ ವಿಷಯದಲ್ಲಿ ಸರಕಾರದ ವಿರುದ್ಧ ಅಪಸ್ವರ ಎತ್ತಿದ್ದ ಕಾಂಗ್ರೆಸ್‌, ಸಿಬಿಐ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿತ್ತು. ನಂತರ ಇದೇ ವಿಷಯವಾಗಿ ಸರಕಾರದ ವಿರುದ್ಧ ವಿಧಾನಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿತ್ತು. ಒಂದು ಸಂದರ್ಭದಲ್ಲಿ ಬಿರೇನ್‌ ಸಿಂಗ್‌ ಸರಕಾರ ಪತನದ ಅಂಚಿಗೆ ತಲುಪಿತ್ತು. ಆದರೆ ಸೋಮವಾರ ವಿಶ್ವಾಸ ಮತ ಯಾಚನೆ ಮಾಡಿ ಗೆಲುವು ಸಾಧಿಸಿದೆ. 60 ಸದಸ್ಯ ಬಲದ ವಿಧಾನಸಭೆಯಲ್ಲಿ ಸದ್ಯ 53 ಸದಸ್ಯರಿದ್ದು, ಈ ಪೈಕಿ ಆಡಳಿತರೂಢ ಮೈತ್ರಿಕೂಟ 29 ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್‌ ಬಲ 24. ಸೋಮವಾರದ ಅಧಿವೇಶನಕ್ಕೆ ಒಟ್ಟು 8 ಕಾಂಗ್ರೆಸ್‌ ಶಾಸಕರು ಗೈರಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ