ಆ್ಯಪ್ನಗರ

Fire in Hospital: ನರ್ಸಿಂಗ್ ಹೋಂನಲ್ಲಿ ಬೆಂಕಿ ಅವಘಡ: ವೈದ್ಯ ದಂಪತಿ ಸೇರಿ ಆರು ಮಂದಿ ಬಲಿ

Jharkhand Nursing Home Fire: ಜಾರ್ಖಂಡ್‌ನ ಧನಬಾದ್‌ನಲ್ಲಿರುವ ಖಾಸಗಿ ನರ್ಸಿಂಗ್ ಹೋಂನಲ್ಲಿ ಶನಿವಾರ ಮಧ್ಯರಾತ್ರಿ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ ವೈದ್ಯ ದಂಪತಿ ಸೇರಿದಂತೆ ಆರು ಮಂದಿ ಬಲಿಯಾಗಿದ್ದಾರೆ. ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ರಕ್ಷಿಸಲಾಗಿದೆ.

Authored byಅಮಿತ್ ಎಂ.ಎಸ್ | Vijaya Karnataka Web 28 Jan 2023, 2:18 pm

ಹೈಲೈಟ್ಸ್‌:

  • ಜಾರ್ಖಂಡ್‌ನ ಧನಬಾದ್‌ನಲ್ಲಿನ ಖಾಸಗಿ ನರ್ಸಿಂಗ್ ಹೋಂನಲ್ಲಿ ಬೆಂಕಿ ಅವಘಡ
  • ಆಸ್ಪತ್ರೆಯ ಉಗ್ರಾಣದಲ್ಲಿ ಶಾರ್ಟ್ ಸರ್ಕೀಟ್‌ನಿಂದ ಹೊತ್ತಿಕೊಂಡ ಬೆಂಕಿಯಿಂದ ದುರಂತ
  • ಮೇಲಿನ ಮಹಡಿಯಲ್ಲಿ ವೈದ್ಯರು ನೆಲೆಸಿದ್ದ ವಸತಿ ಭಾಗಕ್ಕೆ ಆವರಿಸಿದ್ದ ಹೊಗೆಯಿಂದ ಸಾವು

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Jharkhand hospital fire
ಧನಬಾದ್: ಖಾಸಗಿ ನರ್ಸಿಂಗ್ ಹೋಂನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಹೆಸರಾಂತ ವೈದ್ಯ ದಂಪತಿ ಸೇರಿದಂತೆ ಕನಿಷ್ಠ ಆರು ಮಂದಿ ಬಲಿಯಾಗಿದ್ದಾರೆ. ಜಾರ್ಖಂಡ್‌ನ ಧನಬಾದ್‌ನಲ್ಲಿ ಶನಿವಾರ ನಸುಕಿನಲ್ಲಿ ಈ ದುರಂತ ಸಂಭವಿಸಿದೆ.
ಧನಬಾದ್‌ನ ಬ್ಯಾಂಕ್ ಮೋರ್ ಪ್ರದೇಶದಲ್ಲಿರುವ ನರ್ಸಿಂಗ್ ಹೋಂ- ಖಾಸಗಿ ಆಸ್ಪತ್ರೆಯ ಉಗ್ರಾಣದಲ್ಲಿ ರಾತ್ರಿ 2.30ರ ವೇಳೆಗೆ ಬೆಂಕಿ ಹೊತ್ತಿಕೊಂಡಿದೆ. ಕ್ಲಿನಿಕ್ ಮತ್ತು ಅವರ ವಸತಿ ಸಂಕೀರ್ಣವನ್ನು ಸಂಪರ್ಕಿಸುವ ಕಾರಿಡಾರ್‌ನಲ್ಲಿ ಬೆಂಕಿ ಜ್ವಾಲೆಗಳು ಆವರಿಸಿಕೊಂಡಿವೆ.
ಬೆಂಕಿಯಲ್ಲಿ ಬೆಂದ ಕಬ್ಬು ಬೆಳೆಗಾರ; ಧಾರವಾಡ ಜಿಲ್ಲೆಯಲ್ಲಿ ಪದೇ ಪದೇ ಸಂಭವಿಸುತ್ತಿರುವ ಅಗ್ನಿ ಅವಗಢ

ಈ ಆಸ್ಪತ್ರೆಯ ಸಂಸ್ಥಾಪಕ ಮಾಲೀಕರಾದ ಡಾ. ವಿಕಾಸ್ ಹಜ್ರಾ ಮತ್ತು ಅವರ ಪತ್ನಿ ಡಾ. ಪ್ರೇಮಾ ಹಜ್ರಾ ದಂಪತಿ ಬೆಂಕಿ ಅವಘಡದಲ್ಲಿ ಬಲಿಯಾಗಿದ್ದಾರೆ. ಅವರ ಸೋದರ ಸಂಬಂಧಿ ಸೋಹನ್ ಕುಮಾರಿ ಮತ್ತು ಸಹಾಯಕಿ ತಾರಾ ದೇವಿ, ಹಾಗೂ ಇಬ್ಬರು ಸಿಬ್ಬಂದಿ ಕೂಡ ಮೃತಪಟ್ಟಿದ್ದಾರೆ. ಅಗ್ನಿಶಾಮಕ ಹಾಗೂ ಸುರಕ್ಷತಾ ಸಿಬ್ಬಂದಿ, ನರ್ಸಿಂಗ್ ಹೋಂನಲ್ಲಿದ್ದ ಅನೇಕ ರೋಗಿಗಳು ಹಾಗೂ ಸಿಬ್ಬಂದಿಯನ್ನು ಸಜೀವವಾಗಿ ಹೊರಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಎರಡನೇ ಮಹಡಿಯಲ್ಲಿರುವ ಉಗ್ರಾಣದಲ್ಲಿ ಹೊತ್ತಿಕೊಂಡ ಬೆಂಕಿ, ಅಕ್ಕಪಕ್ಕದ ಕೊಠಡಿಗಳಿಗೆ ಕ್ರಮೇಣ ಆವರಿಸಿದೆ. ಆಸ್ಪತ್ರೆಯ ಮೇಲಿನ ಮಹಡಿಯಲ್ಲಿಯೇ ವೈದ್ಯರ ವಸತಿ ಇದ್ದು, ಈ ಉಗ್ರಾಣವು ಅದರ ಪಕ್ಕದಲ್ಲಿದೆ. ಹೀಗಾಗಿ ವೈದ್ಯರ ಮನೆಗೆ ದಟ್ಟ ಹೊಗೆ ಪ್ರವೇಶಿಸಿದೆ. ಭಾರಿ ಹೊಗೆ ಮನೆಯೊಳಗೆ ಪ್ರವೇಶಿಸಿದ್ದರಿಂದ ಹಜ್ರಾ ದಂಪತಿ ಮತ್ತು ಇತರರಿಗೆ ಅಲ್ಲಿಂದ ಹೊರಗೆ ಓಡಿ ಹೋಗಲು ಸಾಧ್ಯವಾಗಿಲ್ಲ. ಇದರಿಂದ ಉಸಿರುಗಟ್ಟಿ ಅವರು ಅಸುನೀಗಿದ್ದಾರೆ.
ಕಿಡಿಗೇಡಿಗಳಿಂದ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಬೆಂಕಿ, ಪಾದಯಾತ್ರೆ ಮೂಲಕ ಬೆಟ್ಟ ಹತ್ತುತ್ತಿದ್ದ ಬೆಂಗಳೂರಿನ ವ್ಯಕ್ತಿ ಸಾವು

"ಮೇಲ್ನೋಟಕ್ಕೆ ಇದು ಉಗ್ರಾಣದಲ್ಲಿ ಶಾರ್ಟ್ ಸರ್ಕೀಟ್ ಕಾರಣದಿಂದ ಸಂಭವಿಸಿದ ಅಗ್ನಿ ಅನಾಹುತದಂತೆ ಕಂಡುಬಂದಿದೆ. ಇನ್ನೂ ತನಿಖೆ ನಡೆಯುತ್ತಿದೆ. ಮೃತರ ಗುರುತು ಪತ್ತೆ ಮಾಡಲಾಗಿದೆ" ಎಂದು ಎಸ್‌ಡಿಎಂ ಪ್ರೇಮ್ ಕುಮಾರ್ ತಿವಾರಿ ತಿಳಿಸಿದ್ದಾರೆ.

"ನಮಗೆ ಸ್ವಲ್ಪ ಮಂಚೆಯೇ ಮಾಹಿತಿ ಬಂದಿದ್ದರೂ ಇನ್ನಷ್ಟು ಸಮರ್ಪಕವಾಗಿ ರಕ್ಷಣಾ ಕಾರ್ಯ ನಡೆಸಲು ಸಾಧ್ಯವಾಗುತ್ತಿತ್ತು. ತಂಡವು ಐವರು ಪುರುಷರು, ಇಬ್ಬರು ಮಹಿಳೆಯರು ಮತ್ತು ಎರಡು ನಾಯಿಗಳನ್ನು ರಕ್ಷಿಸಿತ್ತು. ಅವರಲ್ಲಿ ಒಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಉಳಿದವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಅಗ್ನಿಶಾಮಕ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿದ್ದ ಸುಮಾರು 25 ರೋಗಿಗಳನ್ನು ಬೇರೆ ಕಟ್ಟಡಕ್ಕೆ ಸಾಗಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇದರಿಂದ ಸಂಭವಿಸಬಹುದಾಗಿದ್ದ ಇನ್ನಷ್ಟು ಭಯಾನಕ ಅನಾಹುತ ತಪ್ಪಿದೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ