ಆ್ಯಪ್ನಗರ

ಹೊಸ ಖಾತೆಗೆ ಆಧಾರ್‌ ನೋಂದಣಿ ಚುರುಕುಗೊಳಿಸಿ: ಬ್ಯಾಂಕುಗಳಿಗೆ ಯುಐಡಿಎಐ ನಿರ್ದೇಶನ

ಆಧಾರ್‌ ಲಿಂಕ್‌ ಗಡುವನ್ನು ಮುಂದಿನ ವರ್ಷ ಮಾರ್ಚ್‌ 31ಕ್ಕೆ ವಿಸ್ತರಿಸಿ ಮಧ್ಯಾಂತರ ಆದೇಶ ಹೊರಡಿಸಿದೆ.

Vijaya Karnataka Web 15 Dec 2017, 10:03 pm

ಹೊಸದಿಲ್ಲಿ: ಸರಕಾರದ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳಿಗೆ ಆಧಾರ್‌ ಜೋಡಣೆ ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಆಧಾರ್‌ ಜೋಡಣೆಗೆ ತಡೆಯೊಡ್ಡಲು ನಿರಾಕರಿಸಿತು. ಅದೇ ವೇಳೆ, ಆಧಾರ್‌ ಲಿಂಕ್‌ ಗಡುವನ್ನು ಮುಂದಿನ ವರ್ಷ ಮಾರ್ಚ್‌ 31ಕ್ಕೆ ವಿಸ್ತರಿಸಿ ಮಧ್ಯಾಂತರ ಆದೇಶ ಹೊರಡಿಸಿದೆ. ಮೊಬೈಲ್‌ ಸಂಖ್ಯೆಗೆ ಆಧಾರ್‌ ಸಂಖ್ಯೆ ಜೋಡಿಸಲು ಇದಕ್ಕೂ ಮೊದಲು 2018ರ ಫೆಬ್ರವರಿ 6ಕ್ಕೆ ಅಂತಿಮ ಗಡುವು ವಿಧಿಸಲಾಗಿತ್ತು.

Vijaya Karnataka Web aadhar link uidai directs bank
ಹೊಸ ಖಾತೆಗೆ ಆಧಾರ್‌ ನೋಂದಣಿ ಚುರುಕುಗೊಳಿಸಿ: ಬ್ಯಾಂಕುಗಳಿಗೆ ಯುಐಡಿಎಐ ನಿರ್ದೇಶನ


ಆಧಾರ್‌ ಜೋಡಣೆಗೆ ಸಂಬಂದಪಟ್ಟ ಅರ್ಜಿಗಳ ಅಂತಿಮ ವಿಚಾರಣೆ 2018ರ ಜನವರಿ 17ರಂದು ಆರಂಭವಾಗಲಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಸಾರಥ್ಯದ ಪಂಚ ಸದಸ್ಯರ ಸಂವಿಧಾನ ಪೀಠ ಹೇಳಿತ್ತು. ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎ.ಎಂ.ಖನ್ವಿಲ್ಕರ್‌, ಡಿ.ವೈ. ಚಂದ್ರಚೂಡ ಹಾಗೂ ಅಶೋಕ್‌ ಭೂಷಣ… ಸಂವಿಧಾನ ಪೀಠದ ಇತರ ನಾಲ್ವರು ಸದಸ್ಯರು.

14000 ಬ್ಯಾಂಕ್‌ ಶಾಖೆಗಳಲ್ಲಿ ನೋಂದಣಿ ಕೇಂದ್ರ

ಹೊಸದಾಗಿ ಖಾತೆ ತೆರೆಯಬಯಸುವ ಗ್ರಾಹಕರಿಗಾಗಿ ಆಧಾರ್‌ ನೋಂದಣಿ ಚುರುಕುಗೊಳಿಸುವ ನಿಟ್ಟಿನಲ್ಲಿ ತಮ್ಮ ಶಾಖೆಗಳ ಪೈಕಿ ಶೇಕಡ 10ರಷ್ಟು ಶಾಖೆಗಳಲ್ಲಿ ಬೆರಳ ಗುರುತು ಹಾಗೂ (ಕಣ್ಣಿನ) ಪಾಪೆ ಪೊರೆ ಸ್ಕ್ಯಾ‌ನರ್‌ಗಳನ್ನು ಅಳವಡಿಸುವಂತೆ ಬ್ಯಾಂಕುಗಳಿಗೆ ಭಾರತೀಯ ವಿಶೇಷ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಶುಕ್ರವಾರ ನಿರ್ದೇಶನ ನೀಡಿದೆ.

ಗ್ರಾಹಕರು ಆಧಾರ್‌ ಇಲ್ಲದೆಯೂ ಹೊಸ ಬ್ಯಾಂಕ್‌ ಖಾತೆಗಳನ್ನು ತೆರೆಯಬಹುದು. ಆದರೆ, 12 ಅಂಕಿಗಳ ಗುರುತಿನ ಸಂಖ್ಯೆಗೆ ಅರ್ಜಿ ಸಲ್ಲಿಸಿರುವ ಬಗ್ಗೆ ಖಾತೆದಾರ ಪುರಾವೆ ನೀಡಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ಸ್ಪಷ್ಟಪಡಿಸಿತು.

''ಆಧಾರ್‌ ಜೋಡಣೆ ಪ್ರಕ್ರಿಯೆಯನ್ನು ಸರಳಗೊಳಿಸಲು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ನಿಗದಿತ ಬ್ಯಾಂಕ್‌ ಶಾಖೆಗಳಲ್ಲಿ ಆಧಾರ್‌ ಬೆರಳ ಗುರುತು ಹಾಗೂ ಐರಿಸ್‌ ಸ್ಕ್ಯಾ‌ನರ್‌ಗಳ ವ್ಯವಸ್ಥೆ ಮಾಡುವಂತೆ ಎಲ್ಲಾ ಬ್ಯಾಂಕುಗಳಿಗೆ ನಿರ್ದೇಶನ ನೀಡಿದ್ದೇವೆ. ಆ ಮೂಲಕ ಜನರಿಗೆ ಕಷ್ಟ ಆಗಲಾರದು (ಆಧಾರ್‌ ಸಂಖ್ಯೆ ನೋಂದಣಿಗೆ),'' ಎಂದು ಸುಪ್ರೀಂ ಕೋರ್ಟ್‌ನ ಮಧ್ಯಾಂತರ ಆದೇಶದ ಬಳಿಕ ಯುಐಡಿಎಐ ಸಿಇಒ ಅಜಯ್‌ ಭೂಷಣ್‌ ಪಾಂಡೆ ತಿಳಿಸಿದರು.

ದೇಶಾದ್ಯಂತ ಬ್ಯಾಂಕ್‌ ಶಾಖೆಗಳಲ್ಲಿ ಇಲ್ಲಿಯವರೆಗೆ 3 ಸಾವಿರಕ್ಕೂ ಹೆಚ್ಚು ಆಧಾರ್‌ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ. ಅವರು (ಬ್ಯಾಂಕ್‌ನವರು) ಒಟ್ಟಾರೆ 14 ಸಾವಿರ ಬ್ಯಾಂಕ್‌ ಶಾಖೆಗಳಲ್ಲಿ ನೋಂದಣಿ ಕೇಂದ್ರಗಳನ್ನು ತೆರೆಯಬೇಕಿದೆ,'' ಎಂದು ಪಾಂಡೆ ಹೇಳಿದರು.

ಆಧಾರ್‌ ಜೋಡಣೆಯ ವಿವಿಧ ಗಡುವನ್ನು ವಿಸ್ತರಿಸಿರುವ ಕುರಿತು ಕೇಳಿದ ಪ್ರಶ್ನೆಗೆ, ಆಧಾರ್‌ ಕಾಯ್ದೆ ಹಾಗೂ ಪಿಎಂಎಲ್‌ಎ (ಅಕ್ರಮ ಹಣ ಹೂಡಿಕೆ ತಡೆ ಕಾಯ್ದೆ) ನಿಯಮಗಳ ಅನುಸಾರ ಸರಕಾರ ಹೊರಡಿಸಿದ ಅಧಿಸೂಚನೆಗಳು ಸುಪ್ರೀಂ ಕೋರ್ಟ್‌ನ ಇಂದಿನ (ಶುಕ್ರವಾರ) ಆದೇಶಕ್ಕೆ ಸಂಬಂಧಿಸಿದ್ದಾಗಿರುತ್ತವೆ ಎಂದು ಅವರು ಉತ್ತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ