ಆ್ಯಪ್ನಗರ

2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಸ್ಪರ್ಧೆ - ಅರವಿಂದ ಕೇಜ್ರಿವಾಲ್‌

ಉತ್ತರ ಪ್ರದೇಶ ಚುನಾವಣೆಗೆ ಒಂದೂವರೆ ವರ್ಷಗಳಿದ್ದು, ಎಎಪಿಯು ಉಚಿತ ವಿದ್ಯುತ್‌, ವಿಶ್ವ ದರ್ಜೆಯ ಶಾಲೆ ಮತ್ತು ಆಸ್ಪತ್ರೆಗಳ ನಿರ್ಮಾಣದ ಭರವಸೆಯನ್ನು ಯುಪಿ ಜನರ ಮುಂದಿಡುವ ಸಾಧ್ಯತೆ ಇದೆ.

Agencies 15 Dec 2020, 5:26 pm
ಹೊಸದಿಲ್ಲಿ: 2017ರ ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿನ ಹುಮ್ಮಸ್ಸಿನಲ್ಲಿದ್ದ ಎಎಪಿ ಫಲಿತಾಂಶ ಬಂದಾಗ ಮುಗ್ಗರಿಸಿತ್ತು. ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವುದರೊಂದಿಗೆ ಪೂರ್ಣ ಪ್ರಮಾಣದ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಆಮ್‌ ಆದ್ಮಿ ಪಕ್ಷದ ಕನಸು ನುಚ್ಚುನೂರಾಗಿತ್ತು. ಇದಾದ ಬಳಿಕವೂ ಸಣ್ಣ ರಾಜ್ಯಗಳು, ಮಹಾನಗರ ಪಾಲಿಕೆಗಳ ಮೇಲೆ ತನ್ನ ಗಮನ ಕೇಂದ್ರೀಕರಿಸಿದ್ದ ಎಎಪಿ ಈಗ ದೊಡ್ಡ ರಾಜ್ಯವೊಂದರಲ್ಲಿ ಅಗ್ನಿ ಪರೀಕ್ಷೆ ಎದುರಿಸಲು ಮುಂದಾಗಿದೆ.
Vijaya Karnataka Web Delhi Chief Minister Arvind Kejriwal


2022ರಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಸ್ಪರ್ಧೆ ಮಾಡಲಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮಂಗಳವಾರ ಘೋಷಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಉತ್ತಮ ಶಾಲೆ ಮತ್ತು ಆಸ್ಪತ್ರೆಗಳಿಲ್ಲ. ಜನರು ಅನಿಯಂತ್ರಿತ ವಿದ್ಯುತ್‌ ಕಡಿತವನ್ನು ಎದುರಿಸುತ್ತಿದ್ದಾರೆ ಎಂದಿರುವ ಕೇಜ್ರಿವಾಲ್‌, ರಾಜ್ಯವನ್ನು ಅಭಿವೃದ್ಧಿಗೊಳಿಸುವುದಾಗಿ ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ದಿಲ್ಲಿಯಲ್ಲಿ ಮತ್ತೆ ಅಧಿಕಾರಕ್ಕೇರುವ ಮೂಲಕ ಎಎಪಿ ರಾಷ್ಟ್ರ ರಾಜಧಾನಿಯಲ್ಲಿ ಗಟ್ಟಿಯಾಗಿ ತಳವೂರಿರುವುದನ್ನು ತೋರಿಸಿತ್ತು. 70ರಲ್ಲಿ 62 ಕ್ಷೇತ್ರಗಳಲ್ಲಿ ಗೆದ್ದು ಬೀಗಿತ್ತು. ಈ ಗೆಲುವಿನ ಬೆನ್ನಿಗೆ ಎಎಪಿ ಕಾರ್ಯಕರ್ತರ ಉತ್ಸಾಹ ಹೆಚ್ಚಾಗಿದ್ದು, ದೇಶದ ಬೇರೆ ಬೇರೆ ಭಾಗಗಳಲ್ಲೂ ಸ್ಪರ್ಧಿಸಲು ಪಕ್ಷ ಚಿಂತನೆ ನಡೆಸಿದೆ.

ಉತ್ತರ ಪ್ರದೇಶ ಚುನಾವಣೆಗೆ ಒಂದೂವರೆ ವರ್ಷಗಳಷ್ಟೆ ಉಳಿದುಕೊಂಡಿರುವ ಹಿನ್ನೆಲೆಯಲ್ಲಿ, ಅರವಿಂದ ಕೇಜ್ರಿವಾಲ್‌ ಉಚಿತ ವಿದ್ಯುತ್‌, ವಿಶ್ವ ದರ್ಜೆಯ ಶಾಲೆ ಮತ್ತು ಆಸ್ಪತ್ರೆಗಳ ನಿರ್ಮಾಣದ ಭರವಸೆಯನ್ನು ಯುಪಿ ಜನರ ಮುಂದಿಡುವ ಸಾಧ್ಯತೆ ಇದೆ. ದಿಲ್ಲಿ ಮಾದರಿಯನ್ನೇ ಮುಂದಿಟ್ಟು ಮತ ಕೇಳುವ ಲಕ್ಷಣಗಳು ಕಾಣಿಸುತ್ತಿವೆ.

2012ರಲ್ಲಿ ಪಕ್ಷ ಸ್ಥಾಪನೆಯಾದಾಗಲೇ ಉತ್ತರ ಪ್ರದೇಶ ಎಎಪಿ ಘಟಕವೂ ಅಸ್ತಿತ್ವಕ್ಕೆ ಬಂದಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅರವಿಂದ ಕೇಜ್ರಿವಾಲ್‌ ಎರಡನೇ ಸ್ಥಾನ ಪಡೆಯಲಷ್ಟೆ ಶಕ್ತರಾಗಿದ್ದರು.

2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಎಎಪಿ ಪ್ರಚಾರ ನಡೆಸಿತ್ತಷ್ಟೆ. ಆದರೆ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಎಎಪಿಯ ಪ್ರಚಾರದ ಹೊರತಾಗಿಯೂ ಬಿಜೆಪಿ 403ರಲ್ಲಿ 312 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ