ಆ್ಯಪ್ನಗರ

ಸಲಿಂಗ ಕಾಮಕ್ಕೆ ಒತ್ತಾಯಿಸಿದ ಆಪ್‌ ನಾಯಕನ ಸಜೀವದಹನ

ಸಲಿಂಗ ಕಾಮದ ಸಂಬಂಧ ವಿಚಾರದಲ್ಲಿ ದಿಲ್ಲಿಯ ಆಮ್‌ ಆದ್ಮಿ ಪಾರ್ಟಿ ನಾಯಕ ನವೀನ್‌ ದಾಸ್‌ನನ್ನು ತಯ್ಯಬ್‌ ಖುರೇಷಿ ಎಂಬಾತ ಹತ್ಯೆ ಮಾಡಿ ಸುಟ್ಟು ಹಾಕಿದ್ದಾನೆ. ವೀಡಿಯೋ ಒಂದನ್ನು ಹಿಡಿದುಕೊಂಡು ನವೀನ್ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಎನ್ನಲಾಗಿದ್ದು, ಇದರಿಂದ ಬೇಸತ್ತ ಖುರೇಷಿ ಕೊಲೆ ಮಾಡಿದ್ದಾನೆ.

Vijaya Karnataka 12 Oct 2018, 10:33 am
ಹೊಸದಿಲ್ಲಿ: ದಿಲ್ಲಿಯ ಆಮ್‌ ಆದ್ಮಿ ಪಾರ್ಟಿ ನಾಯಕ ನವೀನ್‌ ದಾಸ್‌ (44)ನ ಶವ ಅಕ್ಟೋಬರ್‌ 5ರಂದು ಗಾಜಿಯಾಬಾದ್‌ನಲ್ಲಿ ಕಾರಿನ ಒಳಗೆ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹಣಕ್ಕಾಗಿ ಯಾರೋ ಅಪಹರಿಸಿ, ಕೊಲೆ ಮಾಡಿದ್ದಾರೆ ಎಂದು ಆರಂಭದಲ್ಲಿ ನಂಬಲಾಗಿದ್ದ ಈ ಪ್ರಕರಣಕ್ಕಿರುವ ಸಲಿಂಗ ಕಾಮದ ಸಂಬಂಧವೀಗ ಬಯಲಾಗಿದೆ.
Vijaya Karnataka Web naveen das


ಪ್ರಧಾನ ಆರೋಪಿ ತಯ್ಯಬ್‌ ಖುರೇಷಿ ಮತ್ತು ನವೀನ್‌ ದಾಸ್‌ ಸಲಿಂಗ ಸಂಬಂಧ ಹೊಂದಿದ್ದರು. ಖುರೇಷಿಯನ್ನು ತುಂಬ ಹಚ್ಚಿಕೊಂಡಿದ್ದ ನವೀನ್‌, ತನ್ನೊಂದಿಗೇ ಬಂದು ಸಹಜೀವನ ನಡೆಸಬೇಕು ಎಂದು ಒತ್ತಡ ಹೇರುತ್ತಿದ್ದ ಎನ್ನಲಾಗಿದೆ. ಕೊನೆಗೊಮ್ಮೆ ವೀಡಿಯೋ ಒಂದನ್ನು ಹಿಡಿದುಕೊಂಡು ಬ್ಲ್ಯಾಕ್‌ಮೇಲ್‌ಗೆ ಶುರುವಿಟ್ಟಾಗ ಖುರೇಷಿ ಕೊಲೆಯನ್ನೇ ಮಾಡಿಬಿಟ್ಟಿದ್ದಾನೆ ಎನ್ನುವುದು ತನಿಖೆ ವೇಳೆ ಬಯಲಾಯಿತು.

ಅಕ್ಟೋಬರ್‌ 5ರ ಬೆಳಿಗ್ಗೆ 3 ಗಂಟೆಗೆ ಲೋನಿ-ಭೋಪ್ರಾ ರಸ್ತೆಯಲ್ಲಿ ವಿತಾರಾ ಬ್ರೀಜಾ ಕಾರಿನಲ್ಲಿ ನವೀನ್‌ ದಾಸ್‌ ಶವ ಪತ್ತೆಯಾದಾಗಲೇ ಗೆಳೆಯ ಖುರೇಷಿ ಮೇಲೆ ಸಂಶಯ ಬಂದಿತ್ತು. ಆದರೆ, ಇದು ಹಣಕ್ಕಾಗಿ ನಡೆದ ಕೊಲೆ ಎಂದು ಭಾವಿಸಲಾಗಿತ್ತು. ಪೊಲೀಸರು ತಯ್ಯಬ್‌ ಖುರೇಷಿ, ಅವನ ಸಹೋದ ತಾಲಿಬ್‌ ಖುರೇಷಿ, ಅವರಿಬ್ಬರ ಗೆಳೆಯ ಸಮರ್‌ ಖಾನ್‌ನನ್ನು ಬಂಧಿಸಿ ವಿಚಾರಣೆ ನಡೆಸಿದರು. ಆದರೆ, ಪ್ರಕರಣದ ಇನ್ನೊಂದು ಆಯಾಮ ತೆರೆದುಕೊಂಡಿದೆ.

ನವೀನ್‌ ದಿಲ್ಲಿಯಲ್ಲಿ ಕಾರ್ಯಕ್ರಮ ಆಯೋಜನೆಯ ಉದ್ಯೋಗ ಮಾಡಿಕೊಂಡಿದ್ದ. ಹೋಟೆಲ್‌ಗಳಲ್ಲಿ ಸಲಿಂಗ ಕಾಮಿಗಳ ಪಾರ್ಟಿ ಕೂಡಾ ಆಯೋಜಿಸುತ್ತಿದ್ದ. ಕಳೆದ ನವೆಂಬರ್‌ನಲ್ಲಿ ನವೀನ್‌ ಮತ್ತು ಖುರೇಷಿ ಸ್ನೇಹಿತರಾದರು. ನಾಲ್ಕೈದು ತಿಂಗಳ ಹಿಂದೆ ಅವರಿಬ್ಬರೂ ಹೃಷಿಕೇಶಕ್ಕೆ ಹೋಗಿದ್ದರು.

ಅಲ್ಲಿಂದ ಮರಳಿದ ಕೆಲವು ದಿನಗಳ ನಂತರ, ದಿಲ್ಲಿಯ ಛತ್ತಾರ್ಪುರ್‌ನ ಬಾಡಿಗೆ ಫ್ಲ್ಯಾಟ್‌ಗೆ ಬಂದು ಜತೆಗೆ ಇರುವಂತೆ ನವೀನ್‌ ಖುರೇಷಿಗೆ ಹೇಳಿದ್ದಾನೆ. ಆದರೆ, ಖುರೇಷಿ ಇದಕ್ಕೆ ಒಪ್ಪಿಲ್ಲ. ಆಗ ನವೀನ್‌ ಒಂದು ವೀಡಿಯೋವನ್ನು ಬಳಸಿ ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ.

ಅದು ಹೃಷಿಕೇಶದಲ್ಲಿ ಒಂದು ರಾತ್ರಿ ಅವರು ಜತೆಗಿದ್ದಾಗ ಮಾಡಿದ ವೀಡಿಯೋ. ಮನೆಗೆ ಬರದಿದ್ದರೆ ವಿಡಿಯೋವನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಜತೆಗೆ, ಒಮ್ಮೆ ಕೈಯ ನರ ಕತ್ತರಿಸಿಕೊಂಡಿದ್ದಾನೆ, ಇನ್ನೊಮ್ಮೆ ಕಾಲುವೆಗೆ ಹಾರಿ ಸಾಯಲೂ ಮುಂದಾಗಿದ್ದಾನೆ. ನವೀನ್‌ನ ಕಿರಿಕಿರಿ ತಾಳದೆ ಖುರೇಷಿ ಕೊಲೆ ಮಾಡಲು ನಿರ್ಧರಿಸಿದ್ದಾನೆ ಎನ್ನಲಾಗುತ್ತಿದೆ.

ಆದರೆ, ನವೀನ್‌ ದಾಸ್‌ ಮನೆಯವರು ಈ ಆರೋಪವನ್ನು ನಿರಾಕರಿಸುತ್ತಾರೆ. ಇದು ಹಣಕ್ಕಾಗಿ ನಡೆಸಿದ ಕೊಲೆ, ಅವರ ನಡುವೆ ಯಾವುದೇ ಸಲಿಂಗ ಸಂಬಂಧ ಇರಲಿಲ್ಲ ಎನ್ನುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ