ಹೊಸದಿಲ್ಲಿ: ಪರಿಶಿಷ್ಟ ಜಾತಿ / ವರ್ಗ ಹಾಗೂ ಒಬಿಸಿ ನೌಕರರಿಗೆ ಸಂವಿಧಾನ ತಿದ್ದುಪಡಿ ಮೂಲಕ ಸರಕಾರಿ ಹುದ್ದೆಗಳ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಒಲವಿರುವುದಾಗಿ ಕೇಂದ್ರ ಸರಕಾರವು ಸಂಸತ್ಗೆ ತಿಳಿಸಿದೆ.
''ಈ ವಿಷಯದಲ್ಲಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಸಹಕಾರ ಬೇಕಿದೆ,'' ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ತವಾರ್ಚಂದ್ ಗೆಹ್ಲೋಟ್ ಅವರು ತಿಳಿಸಿದ್ದಾರೆ.
ಬಡ್ತಿ ಮೀಸಲಿಗೆ ಎನ್ಡಿಎ ಹಾಗೂ ಯುಪಿಎ ಮೈತ್ರಿಕೂಟಗಳೆರಡರಲ್ಲೂ ಕೆಲವಷ್ಟು ಮಂದಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ವಿರೋಧ ಬಗೆಹರಿದು ಒಮ್ಮತ ಮೂಡಿದರೆ ಬಡ್ತಿಯಲ್ಲೂ ಮೀಸಲು ಪದ್ದತಿ ಜಾರಿಗೆ ತರಲು ಸರಕಾರ ಸಿದ್ಧವಿದೆ ಎಂದು ಸಚಿವರು ತಿಳಿಸಿದರು.
ಲೋಕಸಭೆಯಲ್ಲಿ ಸೋಮವಾರ ಸಮಾಜ ಕಲ್ಯಾಣ ಮತ್ತು ಸಬಲೀಕರಣ ಖಾತೆಯ ಅನುದಾನ ಬೇಡಿಕೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಲೋಕಸಭೆಯಲ್ಲಿನ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಡ್ತಿಯಲ್ಲಿ ಮೀಸಲು ಜಾರಿಗೆ ಆಗ್ರಹಿಸಿದರು. ಖರ್ಗೆ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ''ಪರಿಶಿಷ್ಟ ಜಾತಿ/ವರ್ಗ ಹಾಗೂ ಓಬಿಸಿ ನೌಕರರಿಗೆ ಬಡ್ತಿ ಮೀಸಲು ನೀಡಲು ಸಂಪೂರ್ಣ ಸಮ್ಮತಿಯಿದೆ ಎಂದು ಕಾಂಗ್ರೆಸ್ ಲಿಖಿತವಾಗಿ ಕೊಟ್ಟರೆ ಮೀಸಲು ಪ್ರಸ್ತಾವನೆ ಮಂಡಿಸಲಾಗುವುದು,'' ಎಂದು ಸವಾಲು ಹಾಕಿದರು.
''ಯುಪಿಎ ಸಮಯದಲ್ಲಿ ಬಡ್ತಿ ಮೀಸಲು ಮಸೂದೆಯು ರಾಜ್ಯಸಭೆಯಲ್ಲಿ ಅಂಗೀಕಾರವಾಗಿತ್ತು. ಆದರೆ, ಯುಪಿಎ ಮೈತ್ರಿಕೂಟದಲ್ಲಿನ ಭಿನ್ನಮತದ ಕಾರಣ ಲೋಕಸಭೆಯಲ್ಲಿ ಅಂಗೀಕಾರಗೊಳ್ಳಲಿಲ್ಲ,'' ಎಂದು ಗೆಹ್ಲೋಟ್ ಹೇಳಿದರು.
''ಖಾಸಗಿ ಕ್ಷೇತ್ರದವರು ಒಪ್ಪಿಕೊಂಡರೆ ಅಲ್ಲಿ ಬಡ್ತಿ ಮೀಸಲು ಕಾನೂನು ಜಾರಿಗೆ ತರಲೂ ನಮ್ಮ ವಿರೋಧವಿಲ್ಲ,'' ಎಂದು ಸಚಿವರು ತಿಳಿಸಿದರು.
---------
ಪಂಚ ತೀರ್ಥಕ್ಕೆ ಬಿಜೆಪಿಯೇ ಬರಬೇಕಿತ್ತಾ?
''ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ಸ್ಥಳಗಳನ್ನು ಅಭಿವೃದ್ಧಿಪಡಿಸಲು ಕಾಂಗ್ರೆಸ್ ಏಕೆ ಪ್ರಯತ್ನಿಸಲಿಲ್ಲ. ಈ ಕೆಲಸ ಮಾಡಲು ಬಿಜೆಪಿಯೇ ಬರಬೇಕಿತ್ತಾ?,'' ಎಂದು ಗೆಹ್ಲೋಟ್ ಅವರು ಪ್ರಶ್ನಿಸಿದರು.
--------------
ಖಾಸಗಿ ವಲಯದಲ್ಲೂ ಬಡ್ತಿ ಮೀಸಲು ಬೇಕು
ಹಿಂದುಳಿದ ವರ್ಗಗಳ ಉದ್ಧಾರಕ್ಕಾಗಿ ಖಾಸಗಿ ವಲಯದಲ್ಲೂ ಮೀಸಲು ಹಾಗೂ ಬಡ್ತಿ ಮೀಸಲು ವ್ಯವಸ್ಥೆ ಜಾರಿಗೆಬರಬೇಕೆಂದು ಜೆಡಿಯು ಸದಸ್ಯ ಕೌಶಲೇಂದ್ರ ಕುಮಾರ್ ಅವರು ಲೋಕಸಭೆಯಲ್ಲಿ ಆಗ್ರಹಿಸಿದರು.