ಆ್ಯಪ್ನಗರ

13 ವರ್ಷದ ಬಳಿಕ ಮತ್ತೆ ಧರಣಿ ರಾಜಕಾರಣಕ್ಕೆ ಇಳಿದ ಮಮತಾ ಬ್ಯಾನರ್ಜಿ!

ಚಿಟ್‌ ಫಂಡ್‌ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸ್‌ ಆಯುಕ್ತರ ಮೇಲೆ ಸಿಬಿಐ ಅಧಿಕಾರಿಗಳು ನಡೆಸಿದ ದಾಳಿ ಈಗ ರಾಜಕೀಯ ಕೆಸರೆರಚಾಟಕ್ಕೆ ನಾಂದಿ ಹಾಡಿದೆ.

TIMESOFINDIA.COM 4 Feb 2019, 11:30 am
ಕೋಲ್ಕತ್ತಾ: ಬರೋಬ್ಬರಿ 13 ವರ್ಷಗಳ ಹಿಂದೆ 26 ದಿನಗಳ ಉಪವಾಸ ಧರಣಿ ಕುಳಿತಿದ್ದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮತ್ತೀಗ ಪುನಃ ಧರಣಿ ರಾಜಕಾರಣಕ್ಕೆ ಇಳಿದಿದ್ದಾರೆ. ಸತತ ಎರಡು ಅವಧಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿರುವ ಅವರು ಈ ಬಾರಿ ಕೇಂದ್ರ ಸರಕಾರದ ವಿರುದ್ಧ ಸಮರ ಸಾರಿದ್ದಾರೆ.
Vijaya Karnataka Web mamatab


ಚಿಟ್‌ ಫಂಡ್‌ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸ್‌ ಆಯುಕ್ತರ ಮೇಲೆ ಸಿಬಿಐ ಅಧಿಕಾರಿಗಳು ನಡೆಸಿದ ದಾಳಿ ಈಗ ರಾಜಕೀಯ ಕೆಸರೆರಚಾಟಕ್ಕೆ ನಾಂದಿ ಹಾಡಿದೆ.

ಏನಿದು ಶಾರದಾ ಚಿಟ್‌ ಫಂಡ್‌ ಹಗರಣ?

ಪೊಲೀಸ್ ಆಯುಕ್ತರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ.

ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಬಂಗಾಳದಲ್ಲಿ ದಂಗೆ ಎಬ್ಬಿಸುತ್ತಿದ್ದಾರೆ ಎಂದು ಆರೋಪಿಸಿರುವ ಮಮತಾ, ಕೇಂದ್ರದಿಂದ ಸಿಬಿಐ 'ದೌರ್ಜನ್ಯ' ನಿಲ್ಲುವವರೆಗೂ ಈ ಧರಣಿ ಮುಂದುವರಿಯಲಿದೆ. ಪ್ರಧಾನಮಂತ್ರಿ ಸೂಚನೆಯಂತೆ ಸಿಬಿಐ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಇದು ತುರ್ತು ಪರಿಸ್ಥಿತಿಗಿಂತ ಅತ್ಯಂತ ಕೆಟ್ಟ ಪರಿಸ್ಥಿತಿ ಎಂದು ಮಮತಾ ಕಿಡಿಕಾರಿದರು.

ಪ್ರಕರಣವನ್ನು ಸಿಬಿಐಗೆ ವಹಿಸಿದ್ದ ಸುಪ್ರೀಂ

2014ರ ಮೇ ತಿಂಗಳಲ್ಲೇ ಸುಪ್ರೀಂ ಕೋರ್ಟ್‌ ಈ ಹಗರಣಗಳ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಿತ್ತು. ಆದರೆ ಮಮತಾ ಬ್ಯಾನರ್ಜಿ ಸರಕಾರ ತರಾತುರಿಯಿಂದ ಈ ಪ್ರಕರಣಗಳ ತನಿಖೆಯನ್ನು ಎಸ್‌ಐಟಿಗೆ ಒಪ್ಪಿಸಿತ್ತು. ಪ್ರಕರಣದ ಸಾಕ್ಷ್ಯಾಧಾರಗಳನ್ನು ನಾಶಪಡಿಸುತ್ತಿದ್ದಾರೆ ಎಂಬ ಆರೋಪದಲ್ಲಿ ಕೋಲ್ಕೊತ ಪೊಲೀಸ್ ಮುಖ್ಯ ಕಮಿಷನರ್ ರಾಜೀವ್ ಕುಮಾರ್ ವಿರುದ್ಧ ಸಿಬಿಐ ಆರೋಪ ಮಾಡಿತ್ತು. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮೂರು ಬಾರಿ ಸಮನ್ಸ್ ಜಾರಿ ಮಾಡಿತ್ತು. ಹಾಗಿದ್ದರೂ ರಾಜೀವ್ ಕುಮಾರ್ ಸಮನ್ಸ್‌ಗಳನ್ನು ಕಡೆಗಣಿಸಿದ್ದರು.

ಮಮತಾ ಬೆಂಬಲಕ್ಕೆ ನಾಯಕರ ದಂಡು

ಮೋದಿ ಮತ್ತು ಅಮಿತ್‌ ಶಾ ಅವರು ಪ.ಬಂಗಾಳಕ್ಕೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂಬ ಆರೋಪಕ್ಕೆ ಅಖಿಲೇಶ್‌ ಯಾದವ್‌, ಅರವಿಂದ ಕೇಜ್ರಿವಾಲ್‌ ಮತ್ತು ಇತರ ಹಲವು ನಾಯಕರು ಧ್ವನಿಗೂಡಿಸಿದ್ದಾರೆ. ಸೋಮವಾರ ತಾವೂ ಧರಣಿಗೆ ಕೈಜೋಡಿಸುವುದಾಗಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ