ಆ್ಯಪ್ನಗರ

ಚುನಾವಣಾ ಆಯೋಗದಿಂದ ಮೋದಿಗೆ ಅಧಿಕಾರ: ಚಿದಂಬರಂ ಕಿಡಿ

ಗುಜರಾತ್‌ ವಿಧಾನಸಭೆಗೆ ಇನ್ನೂ ಚುನಾವಣೆ ದಿನಾಂಕ ನಿಗದಿಗೊಳಿಸದ ಕೇಂದ್ರ ಚುನಾವಣಾ ಆಯೋಗವನ್ನು ಕಾಂಗ್ರೆಸ್‌ ಮುಖಂಡ, ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

Agencies 21 Oct 2017, 10:01 am

ಹೊಸದಿಲ್ಲಿ/ಅಹಮದಾಬಾದ್‌: ಗುಜರಾತ್‌ ವಿಧಾನಸಭೆಗೆ ಇನ್ನೂ ಚುನಾವಣೆ ದಿನಾಂಕ ನಿಗದಿಗೊಳಿಸದ ಕೇಂದ್ರ ಚುನಾವಣಾ ಆಯೋಗವನ್ನು ಕಾಂಗ್ರೆಸ್‌ ಮುಖಂಡ, ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

Vijaya Karnataka Web after chidambaram dig over gujarat poll dates bjps riposte
ಚುನಾವಣಾ ಆಯೋಗದಿಂದ ಮೋದಿಗೆ ಅಧಿಕಾರ: ಚಿದಂಬರಂ ಕಿಡಿ


ಗುಜರಾತ್‌ನಲ್ಲಿ ಹಮ್ಮಿಕೊಂಡಿರುವ 'ಕೊನೆಯ ರ‍್ಯಾಲಿ'ಯಲ್ಲಿ ಚುನಾವಣಾ ವೇಳಾಪಟ್ಟಿ ಘೋಷಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣಾ ಆಯೋಗ ಅಧಿಕೃತ ಅಧಿಕಾರ ನೀಡಿರಬಹುದೇನೊ ಎಂದು ಅವರು ಲೇವಡಿ ಮಾಡಿದ್ದಾರೆ.

ಬಹುಶಃ ಗುಜರಾತ್‌ ಸರಕಾರದಿಂದ ಎಲ್ಲಾ ವಿಧದ ಉಚಿತ ಹಾಗೂ ರಿಯಾಯಿತಿ ಘೋಷಣೆಗಳು ಹೊರಬಿದ್ದ ಬಳಿಕ ಚುನಾವಣಾ ಆಯೋಗ ತನ್ನ 'ವಿಸ್ತರಿತ ರಜಾಕಾಲ'ದ ಮೂಡ್‌ನಿಂದ ಹೊರಬಹುದೇನೊ ಎಂದು ಯುಪಿಎ ಸರಕಾರದ ಅವಧಿಯಲ್ಲಿ ಗೃಹ ಸಚಿವರೂ ಆಗಿದ್ದ ಚಿದಂಬರಂ ತಮ್ಮ ಟ್ವಿಟರ್‌ ಖಾತೆಯಿಂದ ಸರಣಿಯೋಪಾದಿಯಲ್ಲಿ ಚುಚ್ಚುಮಾತುಗಳನ್ನು ಹರಿಯಬಿಟ್ಟಿದ್ದಾರೆ. ಪ್ರಧಾನಿ ಮೋದಿಯವರು ಭಾನುವಾರ ಗುಜರಾತ್‌ಗೆ ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ.

ಹಿಮಾಚಲ ಪ್ರದೇಶ ವಿಧಾನಸಭೆಗೆ ನವೆಂಬರ್‌ 9ರಂದು ಚುನಾವಣೆ ನಡೆಯಲಿದೆ ಎಂದು ಆಯೋಗ ಅಕ್ಟೋಬರ್‌ 12ರಂದು ಪ್ರಕಟಿಸಿತ್ತು. ಆದರೆ, ಗುಜರಾತ್‌ ವಿಧಾನಸಭೆ ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಗೋಜಿಗೇ ಆಯೋಗ ಇಲ್ಲಿಯ ತನಕ ಹೋಗಿಲ್ಲ. ಹಿಮಾಚಲ ಪ್ರದೇಶದಲ್ಲಿ ಮತ ಎಣಿಕೆ ನಡೆಯುವುದರೊಳಗೆ ಅಂದರೆ ಡಿಸೆಂಬರ್‌ 18ರೊಳಗೆ ಪಶ್ಚಿಮ ರಾಜ್ಯದಲ್ಲಿ (ಗುಜರಾತ್‌ನಲ್ಲಿ) ಚುನಾವಣೆ ನಡೆಯಲಿದೆ ಎಂದಷ್ಟೇ ಹೇಳಿತ್ತು.

ಚಿದು ವಿರುದ್ಧ ರೂಪಾನಿ ಗರಂ

ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿರುವ ಚಿದಂಬರಂ ವಿರುದ್ಧ ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ಗರಂ ಆಗಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಂಬರುವ ಚುನಾವಣೆಗಳ ಬಗೆ ಪ್ರತಿಪಕ್ಷ ಭಯಭೀತಗೊಂಡಿದೆ ಎಂಬುದಕ್ಕೆ ಚಿದಂಬರಂ ಅವರ ಹೇಳಿಕೆಯೇ ಸಾಕ್ಷಿ ಎಂದು ಅವರು ಪ್ರತ್ಯುತ್ತರ ನೀಡಿದ್ದಾರೆ.

ಇದಕ್ಕೂ ಮೊದಲು, 'ಗುಜರಾತ್‌ ಚುನಾವಣಾ ವೇಳಾಪಟ್ಟಿ ಘೋಷಣೆ ವಿಳಂಬ ಮಾಡುವಂತೆ ಚುನಾವಾಣಾ ಆಯೋಗದ ಮೇಲೆ ಸರಕಾರ ಒತ್ತಡ ಹೇರುತ್ತಿದೆ' ಎಂಬ ಕಾಂಗ್ರೆಸ್‌ ಆಪಾದನೆಗೆ, ರೂಪಾನಿ ಅವರು, '2012ರಲ್ಲಿ ಗುಜರಾತ್‌ ವಿಧಾನ ಸಭೆ ಚುನಾವಣಾ ವೇಳಾಪಟ್ಟಿ ನಿರ್ಧರಿಸುವಲ್ಲಿ ಅಂದಿನ ಕಾಂಗ್ರೆಸ್‌ ಸರಕಾರ (ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ) ಪ್ರಭಾವ ಬೀರಿತ್ತು' ಎಂದು ತಿರುಗೇಟು ನೀಡಿದ್ದರು.

'ಇದು ಅಕ್ಷರಶಃ ಅಸಂಬದ್ಧ. ಚುನಾವಣಾ ಆಯೋಗದ ವಿವೇಚನೆಯನ್ನೇ ಪ್ರಶ್ನಿಸಿದಂತಾಗುತ್ತದೆ ಇದು. ಗುಜರಾತ್‌ನಲ್ಲಿ ಬಿಜೆಪಿಯ ಅವಕಾಶಗಳ ಬಗ್ಗೆ ಅವರು ಭಯಗ್ರಸ್ತಗೊಂಡಿದ್ದಾರೆ ಎಂಬುದನ್ನೂ ಇದು ಸೂಚಿಸುತ್ತದೆ,'
- ರವಿಶಂಕರ್‌ ಪ್ರಸಾದ್‌| ಕೇಂದ್ರ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ