ಆ್ಯಪ್ನಗರ

370ನೇ ವಿಧಿ ರದ್ದು: 5 ಭಾಷೆಗಳ ಮೂಲಕ ಜಮ್ಮು-ಕಾಶ್ಮೀರದ ಜನಮನ ತಲುಪಿದ ಪ್ರಧಾನಿ

ಭಾರತೀಯ ಸಂಸತ್ತು ಐತಿಹಾಸಿಕ ನಿರ್ಣಯದ ಮೂಲಕ ಜಮ್ಮು ಮತ್ತು ಕಾಶ್ಮೀರ ಪುನಾರಚನೆ ವಿಧೇಯಕಗಳನ್ನು ಅಂಗೀಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಜನರ ಮನಗೆಲ್ಲಲು 5 ಭಾಷೆಗಳ ಮೂಲಕ ಟ್ವೀಟ್ ಮಾಡಿದ್ದಾರೆ.

TIMESOFINDIA.COM 7 Aug 2019, 3:29 pm
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರ ಪುನಾರಚನೆ ವಿಧೇಯಕವನ್ನು ಲೋಕಸಭೆ ಅಂಗೀಕರಿಸಿದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರಿ ಜನರ ಮನಗೆಲ್ಲುವ ಪ್ರಯತ್ನ ಮಾಡಿದ್ದಾರೆ.
Vijaya Karnataka Web PM Modi


ಇಂಗ್ಲಿಷ್, ಹಿಂದಿ, ಉರ್ದು, ಪಂಕಾಬಿ ಮತ್ತು ಲಡಾಖಿ ಭಾಷೆಗಳಲ್ಲಿ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, 'ಪರಿಸ್ಥಿತಿ ಸುಧಾರಿಸಿದರೆ ಸೂಕ್ತ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತೆ ರಾಜ್ಯದ ಸ್ಥಾನಮಾನ ಪಡೆಯಬಹುದು. ಶಾಶ್ವತವಾಗಿ ಕೇಂದ್ರಾಡಳಿತ ಪ್ರದೇಶವಾಗಿಯೇ ಉಳಿಸಿಕೊಳ್ಳುವ ಇಚ್ಛೆ ನಮಗೂ ಇಲ್ಲ ಎಂಬ ಗೃಹಸಚಿವರ ಹೇಳಿಕೆಯನ್ನು ಸ್ಥಳೀಯ ಜನತೆ ಸ್ವಾಗತಿಸಿದ್ದಾರೆ' ಎಂದು ತಿಳಿಸಿದ್ದಾರೆ.

'ಜಮ್ಮು, ಕಾಶ್ಮೀರ ಮತ್ತು ಲಡಾಖ್‌ನ ನನ್ನ ಸೋದರಿಯರು ಮತ್ತು ಸೋದರರ ಧೈರ್ಯ ಮತ್ತು ಹೊಂದಾಣಿಕೆ ಗುಣವನ್ನು ನಾನು ಗೌರವಿಸುತ್ತೇನೆ. ದಶಕಗಳ ಕಾಲ ಸ್ಥಾಪಿತ ಹಿತಾಸಕ್ತಿ ಗುಂಪುಗಳು ಭಾವನಾತ್ಮಕವಾಗಿ ಬ್ಲಾಕ್‌ಮೇಲ್ ಮಾಡುತ್ತ, ಜನತೆಯ ಸಬಲೀಕರಣವನ್ನು ಕಡೆಗಣಿಸಿದರು. ಜಮ್ಮು ಮತ್ತು ಕಾಶ್ಮೀರ ಈಗ ಅವರ ಕಬಂಧ ಬಾಹುಗಳಿಂದ ಮುಕ್ತವಾಗಿದೆ. ಹೊಸ ಬೆಳಕು, ಉತ್ತಮ ನಾಳೆಗಳು ನಿಮಗಾಗಿ ಕಾಯುತ್ತಿವೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಭಾರತದ ಏಕತೆಯನ್ನು ಮತ್ತೊಮ್ಮೆ ಬಲಪಡಿಸಲಾಗಿದೆ. 'ನಾವೆಲ್ಲರೂ ಒಟ್ಟಾಗಿದ್ದೇವೆ, ಮುಂದೆಯೂ ಒಟ್ಟಾಗಿರಬೇಕು ಮತ್ತು ಒಟ್ಟಾಗಿಯೇ 130 ಕೋಟಿ ಭಾರತೀಯರ ಕನಸುಗಳನ್ನು ಈಡೇರಿಸಬೇಕಿದೆ. ನಮ್ಮ ಸಂಸದೀಯ ಪ್ರಜಾಸತ್ತೆಯಲ್ಲಿ ಅತ್ಯಂತ ಅವಿಸ್ಮರಣೀಯ ಕ್ಷಣವಿದು. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿಧೇಯಕಗಳನ್ನು ಅಭೂತಪೂರ್ವ ಬೆಂಬಲದೊಂದಿಗೆ ಅಂಗೀಕರಿಸಿದ ಕ್ಷಣವಿದು!' ಎಂದು ಮೋದಿ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಜಮ್ಮು- ಕಾಶ್ಮೀರ ಮತ್ತು ಲಡಾಖ್‌ಗೆ ಸಂಬಂಧಿಸಿದ ವಿಧೇಯಕಗಳು ಏಕತೆ ಮತ್ತು ಸಬಲೀಕರಣವನ್ನು ಖಾತ್ರಿಪಡಿಸುತ್ತವೆ ಎಂದು ಪ್ರಧಾನಿ ಹೇಳಿದ್ದಾರೆ.

'ಈ ಹೆಜ್ಜೆಗಳು ಯುವಕರನ್ನು ಮುಖ್ಯವಾಹಿನಿಗೆ ತರುತ್ತವೆ. ಅಲ್ಲದೆ ಅವರ ಕೌಶಲ್ಯಗಳು ಮತ್ತು ಪ್ರತಿಭೆಗಳನ್ನು ಪ್ರದರ್ಶಿಸಲು ಸಾಕಷ್ಟು ಅವಕಾಶಗಳನ್ನು ಒದಗಿಸುತ್ತವೆ. ಸ್ಥಳೀಯ ಮೂಲಸೌಕರ್ಯಗಳು ಗಣನೀಯ ಪ್ರಮಾಣದಲ್ಲಿ ವೃದ್ಧಿಸಲಿವೆ' ಎಂದು ಪ್ರಧಾನಿ ಬರೆದಿದ್ದಾರೆ.

'ನೂತನ ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್‌ ಜನತೆಗೆ ವಿಶೇಷ ಅಭಿನಂದನೆಗಳು. ಅವರ ದೀರ್ಘ ಕಾಲದ ಬೇಡಿಕೆ ಈಗ ಈಡೇರಿದೆ. ಪ್ರಾಂತ್ಯದ ಅಭಿವೃದ್ಧಿ ಹಾಗೂ ಒಟ್ಟಾರೆ ಸಮೃದ್ಧಿಗೆ ಇದರಿಂದ ನೆರವಾಗಲಿದೆ' ಎಂದು ಮೋದಿ ತಿಳಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ