ಆ್ಯಪ್ನಗರ

ಬಿಜೆಪಿ ಎದುರು ಮಂಡಿಯೂರಿದ ಸೇನೆ

ಲೋಕಸಭೆ ಚುನಾವಣೆ ವೇಳೆ ರೂಪಿಸಲಾಗಿದ್ದ 'ಸಮಾನ ಸ್ಥಾನಗಳಲ್ಲಿಸ್ಪರ್ಧೆ' ಸೂತ್ರವನ್ನು ಕೈಬಿಡಲಾಗಿದ್ದು, ಬಿಜೆಪಿ ಹೆಚ್ಚಿನ ಸೀಟು ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Agencies 2 Oct 2019, 5:00 am
ಮುಂಬಯಿ: ಬಹುದಿನಗಳಿಂದ ಕಗ್ಗಂಟಾಗಿದ್ದ ಬಿಜೆಪಿ-ಶಿವಸೇನೆ ನಡುವಿನ ಚುನಾವಣೆ ಪೂರ್ವ ಮೈತ್ರಿ ಮಂಗಳವಾರ ಆಖೈರುಗೊಂಡಿದ್ದು, ಉಭಯ ಪಕ್ಷಗಳು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿವೆ.
Vijaya Karnataka Web shah-PTI


ಲೋಕಸಭೆ ಚುನಾವಣೆ ವೇಳೆ ರೂಪಿಸಲಾಗಿದ್ದ 'ಸಮಾನ ಸ್ಥಾನಗಳಲ್ಲಿಸ್ಪರ್ಧೆ' ಸೂತ್ರವನ್ನು ಕೈ ಬಿಡಲಾಗಿದ್ದು, ಬಿಜೆಪಿ ಹೆಚ್ಚಿನ ಸೀಟು ದಕ್ಕಿಸಿಕೊಳ್ಳುವಲ್ಲಿಯಶಸ್ವಿಯಾಗಿದೆ. ಬಿಜೆಪಿ 146 ಸ್ಥಾನಗಳನ್ನು ಉಳಿಸಿಕೊಂಡಿದ್ದು, 124 ಸ್ಥಾನಗಳನ್ನು ಮಿತ್ರಪಕ್ಷ ಶಿವಸೇನೆಗೆ ಬಿಟ್ಟುಕೊಟ್ಟಿದೆ. ಉಳಿದ 18 ಸ್ಥಾನಗಳನ್ನು ಸಣ್ಣಪುಟ್ಟ ಮಿತ್ರಪಕ್ಷಗಳಿಗೆ ಬಿಟ್ಟುಕೊಡಲು ನಿರ್ಧರಿಸಿವೆ. ಬಿಜೆಪಿ-ಶಿವಸೇನೆ ಮೈತ್ರಿ ಆರಂಭವಾಗಿದ್ದು 1989ರಲ್ಲಿ. 2014ರವರೆಗೂ ಇದ್ದ ಮೈತ್ರಿಯಲ್ಲಿಯಾವಾಗಲೂ ಶಿವಸೇನೆ ಹೆಚ್ಚು ಸ್ಥಾನಗಳಲ್ಲಿಸ್ಪರ್ಧೆ ಮಾಡುತ್ತಿತ್ತಲ್ಲದೇ, ಮೈತ್ರಿಕೂಟ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಹುದ್ದೆಯನ್ನು ತಾನೇ ಇರಿಸಿಕೊಳ್ಳುತ್ತಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ(2014) ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದವು. ಬಿಜೆಪಿ 122 ಸ್ಥಾನ ಗೆದ್ದರೆ, ಶಿವಸೇನೆ 63 ಸ್ಥಾನ ಗೆದ್ದಿತ್ತು, ಚುನಾವಣೆ ಬಳಿಕ ಪುನಃ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದ್ದವು.

ಈ ಬಾರಿ ಲೋಕಸಭೆ ಚುನಾವಣೆ ಮೈತ್ರಿ ಘೋಷಣೆ ಸಂದರ್ಭದಲ್ಲಿಯೇ ವಿಧಾನಸಭೆ ಚುನಾವಣೆಯನ್ನೂ ಒಟ್ಟಾಗಿ ಎದುರಿಸುವ ತೀರ್ಮಾನ ಮಾಡಲಾಗಿತ್ತು. ಆ ವೇಳೆ 'ಸಮಾನ ಕ್ಷೇತ್ರಗಳಲ್ಲಿಸ್ಪರ್ಧೆ' ಸೂತ್ರ ರೂಪಿಸಲಾಗಿತ್ತು. ಶಿವಸೇನೆ ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಮುಖ್ಯಮಂತ್ರಿ ಹುದ್ದೆಯನ್ನೂ ತಲಾ ಎರಡೂವರೆ ವರ್ಷ ಹಂಚಿಕೊಳ್ಳುವ ಮೂಲಕ 'ಸಮಾನ ಹೊಣೆಗಾರಿಕೆ'ಯನ್ನೂ ಪಾಲಿಸಬೇಕು ಎಂದು ಆಗ್ರಹಿಸಿತ್ತು. ಜಮ್ಮು-ಕಾಶ್ಮೀರದಲ್ಲಿ370ನೇ ವಿಧಿ ರದ್ದತಿ ತರುವಾಯ ತನ್ನ ಪರವಾದ ಅಲೆ ಸೃಷ್ಟಿಯಾಗಿರುವುದನ್ನು ಗುರುತಿಸಿದ ಬಿಜೆಪಿಯು ಹೆಚ್ಚು ಸ್ಥಾನಗಳಲ್ಲಿಸ್ಪರ್ಧಿಸುವುದಾಗಿ ತಿಳಿಸಿತ್ತು. ಮೈತ್ರಿ ಕಡಿದುಕೊಳ್ಳುವ ಸ್ಥಿತಿಯಲ್ಲಿಇಲ್ಲದ ಶಿವಸೇನೆ ಮೂರು ದಶಕಗಳ ಬಳಿಕ ಮೊದಲ ಬಾರಿಗೆ ಬಿಜೆಪಿಗೆ ಹೆಚ್ಚು ಸ್ಥಾನ ಬಿಟ್ಟುಕೊಟ್ಟಿದೆ.

ಸೀಟು ಹಂಚಿಕೆಯ ಹರಸಾಹಸ ಮುಗಿದ ಬಳಿಕ ಆ ಬಗ್ಗೆ ಅಧಿಕೃತ ಘೋಷಣೆ ಹೊರಡಿಸುವ ಮೊದಲೇ ಉಭಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿ ಅಚ್ಚರಿ ಮೂಡಿಸಿದವು. ನಂತರ ಮೈತ್ರಿ ಅಂತಿಮಗೊಂಡ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಲಾಯಿತು.

ಫಡ್ನವಿಸ್‌ ನೈರುತ್ಯ ನಾಗಪುರದಿಂದ ಸ್ಪರ್ಧೆ: ಬಿಜೆಪಿ 146 ಸ್ಥಾನಗಳ ಪೈಕಿ 125 ಅಭ್ಯರ್ಥಿಗಳ ಉಮೇದುವಾರಿಕೆಯನ್ನು ಮಂಗಳವಾರ ಘೋಷಣೆ ಮಾಡಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಅವರು ನಾಗಪುರ ನೈರುತ್ಯ ಕ್ಷೇತ್ರದಿಂದ ಪುನರಾಯ್ಕೆ ಬಯಸಿದ್ದಾರೆ. ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ ಪಾಟೀಲ್‌ ಅವರನ್ನು ಪುಣೆಯ ಕೋಥ್ರುಡ್‌ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಪಂಕಜಾ ಮುಂಡೆ ಸೇರಿದಂತೆ ಬಹುತೇಕ ಸಚಿವರಿಗೆ ಟಿಕೆಟ್‌ ನೀಡಲಾಗಿದೆ. ''ಹಾಲಿ ಶಾಸಕರಿಗೆ ಟಿಕೆಟ್‌ ನೀಡುವಾಗ ಅವರ ಸಾಧನೆಯನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ. ವಿವಿಧ ಕಾರಣಗಳಿಗಾಗಿ 12 ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಲಾಗಿದೆ,'' ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರ್ಜುನ್‌ ಸಿಂಗ್‌ ತಿಳಿಸಿದ್ದಾರೆ.

ಆದಿತ್ಯ ಠಾಕ್ರೆ ಸ್ಪರ್ಧೆ: ಶಿವಸೇನೆಯು ಮೊದಲ ಪಟ್ಟಿಯಲ್ಲಿ70 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ನಿರೀಕ್ಷೆಯಂತೆ ಪಕ್ಷದ ವರಿಷ್ಠ ಉದ್ಧವ್‌ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಹೆಸರು ಮೊದಲ ಪಟ್ಟಿಯಲ್ಲಿಯೇ ಕಾಣಿಸಿಕೊಂಡಿದೆ. ಅವರು ಮುಂಬಯಿನ ಪ್ರತಿಷ್ಠಿತ ವರ್ಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಶಿವಸೇನೆ ಬಹುತೇಕ ಎಲ್ಲಹಾಲಿ ಶಾಸಕರಿಗೆ ಟಿಕೆಟ್‌ ನೀಡಿದೆ. ಕೊನೆ ಹಂತದಲ್ಲಿನಿಷ್ಠೆ ಬದಲಿಸಿ ಕಾಂಗ್ರೆಸ್‌, ಎನ್‌ಸಿಪಿಯಿಂದ ಬಂದಿದ್ದ ಪಕ್ಷಾಂತರಿಗಳಿಗೂ ಟಿಕೆಟ್‌ ಘೋಷಿಸಲಾಗಿದೆ. ಆದರೆ, ಎನ್‌ಸಿಪಿ ತೊರೆದು ಪಕ್ಷ ಸೇರಿದ್ದ ಶಾಸಕ ಅವಧೂತ್‌ ತತ್ಕರೆ ಅವರನ್ನು ಮಾತ್ರ ಕೈಬಿಟ್ಟಿದ್ದು ಅಚ್ಚರಿ ಮೂಡಿಸಿದೆ. ಅವಧೂತ್‌ ಶ್ರೀವರ್ಧನ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಈ ಕ್ಷೇತ್ರದ ಟಿಕೆಟ್‌ ಅನ್ನು ವಿನೋದ್‌ ಘೋಸಾಲ್ಕರ್‌ ಅವರಿಗೆ ಘೋಷಿಸಲಾಗಿದೆ.

ಮೈತ್ರಿಯಲ್ಲಿಯಾರಿಗೆಷ್ಟು ಸೀಟು?

ಬಿಜೆಪಿ 146
ಶಿವಸೇನೆ 124
ಇತರ ಪಕ್ಷಗಳು 18

'ಮಹಾಯುತಿ' (ಮಹಾಮೈತ್ರಿ) ಪಾಲುದಾರ ಪಕ್ಷಗಳು
ಬಿಜೆಪಿ, ಶಿವಸೇನೆ, ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯ, ರಾಷ್ಟ್ರೀಯ ಸಮಾಜ ಪಕ್ಷ, ಶಿವ ಸಂಗ್ರಾಮ ಸಂಘಟನಾ, ರೈತ ಕ್ರಾಂತಿ ಸೇನಾ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ