ಹೊಸದಿಲ್ಲಿ: ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕ್ಯಾಪ್ಟರ್ ಹಗರಣದ ಆರೋಪಿ ವಾಯುಪಡೆ ಮಾಜಿ ಮುಖ್ಯಸ್ಥ ಎಸ್.ಪಿ ತ್ಯಾಗಿಯವರನ್ನು ಡಿ.30 ರವರೆಗೆ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಸಿಬಿಐ ಕಸ್ಟಡಿಯಲ್ಲಿದ್ದ ತ್ಯಾಗಿ ಮತ್ತು ಇತರ ಇಬ್ಬರು ಆರೋಪಿಗಳನ್ನು ಶನಿವಾರ ಪಟಿಯಾಲಾ ಹೌಸ್ ಕೋರ್ಟ್ಗೆ ಹಾಜರು ಪಡಿಸಲಾಯಿತು. ಆರೋಪಿಗಳನ್ನು 10 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕೆಂದು ಸಿಬಿಐ ಮನವಿ ಮಾಡಿಕೊಂಡಿದ್ದ ಹಿನ್ನಲೆಯಲ್ಲಿ ಡಿ. 17 ರವೆರೆಗೆ ಇಬ್ಬರು ಆರೋಪಿಗಳು ಸಿಬಿಐ ವಶದಲ್ಲಿದ್ದರು. ಈ ಮಧ್ಯೆ ಆರೋಪಿಗಳ ಜಾಮೀನು ಅರ್ಜಿಯನ್ನು ಡಿ. 21 ರಂದು ಪರಿಗಣಿಸಲಾಗುವುದು ಎಂ ದು ನ್ಯಾಯಾಲಯ ತಿಳಿಸಿದೆ.
12 ವಿವಿಐಪಿ ಹೆಲಿಕ್ಯಾಪ್ಟರ್ ಖರೀದಿಸುವಲ್ಲಿ 3600 ಕೋಟಿ ಮೌಲ್ಯದ ಡೀಲನ್ನು ಅಂದಿನ ವಾಯುಸೇನೆಯ ಮುಖ್ಯಸ್ಥ ತ್ಯಾಗಿ ಇಟಲಿ ಮೂಲದ ಅಗಸ್ಟಾ ವೆಸ್ಟಲ್ಯಾಂಡ್ ಕಂಪನಿಯಿಂದ ಲಂಚ ಪಡೆದು ಕುದುರಿಸಿದ್ದರು ಎಂದು ಕಂಪನಿ ಆರೊಪಿಸಿತ್ತು. ತ್ಯಾಗಿ ಆರೋಪವನ್ನು ನಿರಾಕರಿಸಿದ್ದರೂ, ಇಟಲಿ ಮತ್ತು ಮಾರಿಷಸ್ನ ಅಧಿಕಾರಿಗಳಿಂದ ಸೂಕ್ತ ಸಾಕ್ಷಿಗಳನ್ನು ಪಡೆದಿರುವುದಾಗಿ ಸಿಬಿಐ ತಿಳಿಸಿದೆ.
ಪ್ರಕರಣದ ವಿಚಾರಣೆಗಾಗಿ ತ್ಯಾಗಿ ಮತ್ತವರ ಸಹೋದರ ಸಂಬಂಧಿ ಮತ್ತು ವಕೀಲ ಗೌತಮ್ ಖೇತಾನ್ರನ್ನು ಸಿಬಿಐ ಅಧಿಕಾರಿಗಳು ಕಳೆದ ಶುಕ್ರವಾರ ಬಂಧಿಸಿದ್ದರು.