ಆ್ಯಪ್ನಗರ

ನಿರ್ಧಾರ ಒಳ್ಳೆಯದೇ ಆಯಿತೆಂದ ಕಾಶ್ಮೀರಿಗಳು

ನಿಷೇಧಾಜ್ಞೆ ಮುಂದುವರಿದಿರುವುದರಿಂದ ಅಂಗಡಿಗಳು ಬಾಗಿಲು ಎಳೆದಿದ್ದವು. ಇಂಟರ್‌ನೆಟ್‌ ಕಡಿತಗೊಂಡಿತ್ತು. ಬಿಕೋ ಎನ್ನುತ್ತಿದ್ದ ರಸ್ತೆಗಳ ಮಧ್ಯೆಯೇ ಧೋವಲ್‌ ಒಂದಷ್ಟು ಸ್ಥಳೀಯರ ಮಾತುಕತೆ ನಡೆಸಿ, ಅವರಲ್ಲಿ ಮನೆ ಮಾಡಿರುವ ಆತಂಕ ನಿವಾರಿಸುವ ಪ್ರಯತ್ನ ಮಾಡಿದರು.

PTI 8 Aug 2019, 5:00 am
ಶ್ರೀನಗರ: ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರಕಾರ ಕೈಗೊಂಡ ದಿಟ್ಟ ನಡೆಯ ಬಳಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ಅವರು ಬುಧವಾರ ಕಾಶ್ಮೀರಕ್ಕೆ ಭೇಟಿ ನೀಡಿ ಸೇನೆ, ಗುಪ್ತಚರ ದಳ ಹಾಗೂ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ಭದ್ರತಾ ಪರಿಶೀಲನೆ ನಡೆಸಿದರು. ಸಭೆ ಬಳಿಕ ಉಗ್ರ ಪೀಡಿತ ಶೋಪಿಯಾನ್‌ ಜಿಲ್ಲೆಯಲ್ಲಿ ಸ್ಥಳೀಯ ನಿವಾಸಿಗಳ ಜತೆ ರಸ್ತೆ ಬದಿಯಲ್ಲೇ ತಿಂಡಿ ತಿನ್ನುತ್ತಾ ಮಾತುಕತೆ ನಡೆಸಿ, ಅವರಲ್ಲಿ ಮನೆ ಮಾಡಿರುವ ಆತಂಕ ನಿವಾರಿಸುವ ಪ್ರಯತ್ನ ಮಾಡಿದರು.
Vijaya Karnataka Web 26THRDDOVAL

ನಿಷೇಧಾಜ್ಞೆ ಮುಂದುವರಿದಿರುವುದರಿಂದ ಅಂಗಡಿಗಳು ಬಾಗಿಲು ಎಳೆದಿದ್ದವು. ಇಂಟರ್‌ನೆಟ್‌ ಕಡಿತಗೊಂಡಿತ್ತು. ಬಿಕೋ ಎನ್ನುತ್ತಿದ್ದ ರಸ್ತೆಗಳ ಮಧ್ಯೆಯೇ ಧೋವಲ್‌ ಒಂದಷ್ಟು ಸ್ಥಳೀಯರ ಜತೆ ಮಾತನಾಡುತ್ತಾ, ''ನೀವಿನ್ನು ಕಣಿವೆಯಲ್ಲಿ ನಿರ್ಭಯವಾಗಿ ಬದುಕಬಹುದು. ಉಗ್ರರ ಅಟ್ಟಹಾಸ ಇನ್ನು ನಡೆಯದು. ನಿಮ್ಮ ಹಾಗೂ ನಿಮ್ಮ ಮಕ್ಕಳ ಸುರಕ್ಷತೆಯ ಹೊಣೆ ಸರಕಾರದ್ದು. ಅವರಿಗೆ ಒಳ್ಳೆಯ ಶಿಕ್ಷಣ ಕೊಡಿಸಿ. ವಿಶ್ವ ಭೂಪಟದಲ್ಲಿ ಕಾಶ್ಮೀರಿಗಳೂ ದೊಡ್ಡ ಹೆಸರು ಮಾಡಲಿ,'' ಎಂದು ಹೇಳುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಿದರು.
ಒಳ್ಳೆಯದೇ ಆಯಿತು: ಕೇಂದ್ರದ ನಡೆ ಹೇಗೆನ್ನೆಸುತ್ತದೆ ಎಂದು ಧೋವಲ್‌ ಪ್ರಶ್ನಿಸಿದಾಗ ಸ್ಥಳೀಯರು, ''ಬಂದೂಕಿನ ಸದ್ದು ನೋಡಿ ನಮಗೆ ಸಾಕಾಗಿದೆ. ಬಡತನದಿಂದ ಮೇಲೆ ಬರಲು ಸಾಧ್ಯವಾಗುತ್ತಿಲ್ಲ. ಇವೆಲ್ಲವನ್ನೂ ನೋಡಿದರೆ 370ನೇ ವಿಧಿ ರದ್ದಾಗಿದ್ದು, ಜಮ್ಮು-ಕಾಶ್ಮೀರ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ್ದು ಒಳ್ಳೆಯ ನಿರ್ಧಾರವೇ. ಇದರಿಂದ ಕಣಿವೆಯಲ್ಲಿ ಅಭಿವೃದ್ಧಿ ಕಾರ್ಯಗಳು ಗರಿಗೆದರಲಿವೆ. ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದ್ದು, ನಮ್ಮ ಕೈಗಳಿಗೂ ಒಂದಷ್ಟು ಉದ್ಯೋಗಾವಕಾಶಗಳು ದೊರೆಯುತ್ತವೆ,'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರುಎಂದು ಮೂಲಗಳು ಹೇಳಿವೆ. ಶೋಪಿಯಾನ್‌ನಲ್ಲಿ ಪೊಲೀಸರನ್ನೂ ಭೇಟಿ ಮಾಡಿದ ಧೋವಲ್‌ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯಪಾಲರ ಭೇಟಿ: ಶ್ರೀನಗರದಲ್ಲಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರನ್ನು ಭೇಟಿಯಾಗಿ ಕಣಿವೆಯಲ್ಲಿ ಭದ್ರತಾ ಸ್ಥಿತಿಗತಿಯ ಕುರಿತು ಚರ್ಚೆ ನಡೆಸಿದರು. ಇದೇ ಹೊತ್ತಿನಲ್ಲಿ ಸತ್ಯಪಾಲ್‌ ಮಲಿಕ್‌ ಅವರು ಸಲಹೆಗಾರ ಕೆ.ವಿಜಯ್‌ ಕುಮಾರ್‌, ಮುಖ್ಯ ಕಾರ‍್ಯದರ್ಶಿ ಬಿ.ವಿ.ಆರ್‌. ಸುಬ್ರಮಣ್ಯಂ ಸೇರಿ ಕೆಲ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾನೂನು ಸುವ್ಯವಸ್ಥೆ ಕುರಿತು ಮಾಹಿತಿ ಪಡೆದುಕೊಂಡರು.

ಸಂಪೂರ್ಣ ಆಂತರಿಕ ವಿಷಯ
ವಾಷಿಂಗ್ಟನ್‌: ಜಮ್ಮು-ಕಾಶ್ಮೀರ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಕೈಗೊಂಡ ನಿರ್ಧಾರ ಭಾರತದ ಸಂಪೂರ್ಣ ಆಂತರಿಕ ವಿಷಯ. ಈ ದಿಟ್ಟ ನಿರ್ಧಾರವು ಅನ್ಯ ದೇಶಗಳ ಜತೆಗೆ ಭಾರತ ಹೊಂದಿರುವ ಬಾಂಧವ್ಯಕ್ಕೆ ಯಾವ ರೀತಿಯಿಂದಲೂ ಧಕ್ಕೆಯಾಗದು ಎಂದು ಅಮೆರಿಕಕ್ಕೆ ಭಾರತದ ರಾಯಭಾರಿಯಾಗಿರುವ ಹರ್ಷವರ್ಧನ್‌ ಹೇಳಿದ್ದಾರೆ. ''ಉಗ್ರರ ನಿಯಂತ್ರಣಕ್ಕೆ, ಕಾಶ್ಮೀರ ಕಣಿವೆಯ ಸಾಮಾಜಿಕ ಶ್ರಯೋಭಿವೃದ್ಧಿಯ ಕಳಕಳಿಯೊಂದಿಗೆ ಕೈಗೊಂಡ ನಿರ್ಧಾರ ಇದಾಗಿದೆ. ಇದರಿಂದ ಅಂತಾರಾಷ್ಟ್ರೀಯ ಗಡಿ ರೇಖೆ ಅಥವಾ ನಿಯಂತ್ರಣ ಗಡಿ ರೇಖೆಯ ವಿಚಾರದಲ್ಲಿ ಯಾವುದೇ ತಕರಾರುಗಳು ಉದ್ಭವಿಸದು,'' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ