ಆ್ಯಪ್ನಗರ

ಲೋಕಸಮರ ಕ್ಲೈಮಾಕ್ಸ್‌ ಇಂದು, ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ

17ನೇ ಲೋಕಸಭಾ ಚುನಾವಣೆ: ಇಂದು ಮತ ಎಣಿಕೆ, 9.30ರಿಂದಲೇ ಟ್ರೆಂಡ್‌ ಲಭ್ಯ ಪ್ರತಿಪಕ್ಷಗಳ ಬೇಡಿಕೆಗೆ ಆಯೋಗ ತಿರಸ್ಕಾರ* ಹಿಂಸಾಚಾರ ಭೀತಿ-ದೇಶದೆಲ್ಲೆಡೆ ಕಟ್ಟೆಚ್ಚರ

Vijaya Karnataka 23 May 2019, 5:30 am
ಹೊಸದಿಲ್ಲಿ: 17ನೇ ಲೋಕಸಭೆಗಾಗಿ 43 ದಿನಗಳ ಅವಧಿಯಲ್ಲಿ ನಡೆದ ಮಹಾ ಚುನಾವಣೆ ಕ್ಲೈಮಾಕ್ಸ್‌ ಹಂತ ತಲುಪಿದೆ. ಏಳು ಹಂತಗಳಲ್ಲಿ ನಡೆದ ಮತದಾನದ ಮತ ಎಣಿಕೆ ಗುರುವಾರ ನಡೆಯಲಿದ್ದು, ದೇಶದ ಚುಕ್ಕಾಣಿ ಯಾರ ಕೈಗೆ ಎನ್ನುವುದು ನಿರ್ಧಾರವಾಗಲಿದೆ.
Vijaya Karnataka Web ಫಲಿತಾಂಶ
ಫಲಿತಾಂಶ


ಎನ್‌ಡಿಎ, ಯುಪಿಎ, ಮಹಾಘಟಬಂಧನ್‌, ತೃಣಮೂಲ ಕಾಂಗ್ರೆಸ್‌ ಸೇರಿದಂತೆ ಪ್ರಮುಖ ಪಕ್ಷ, ಮಿತ್ರಕೂಟಗಳ ನಡುವೆ ಭಾರಿ ಸಂಘರ್ಷಕ್ಕೆ ಕಾರಣವಾದ ಚುನಾವಣೆಯ ಫಲಿತಾಂಶ ಎನ್‌ಡಿಎಗೆ ಸ್ಪಷ್ಟ ಬಹುಮತವನ್ನು ನೀಡುವುದೇ ಅಥವಾ ಪ್ರತಿಪಕ್ಷಗಳ ಪರಾರ‍ಯಯ ಸರಕಾರದ ಕನಸನ್ನು ಸಾಕಾರಗೊಳಿಸುವುದೇ ಎನ್ನುವ ಕುತೂಹಲದ ಪ್ರಶ್ನೆಗೆ ಉತ್ತರ ದೊರಕಲಿದೆ. ಮತಗಟ್ಟೆ ಸಮೀಕ್ಷೆಗಳು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಕೂಟಕ್ಕೆ 'ಬಹುಮತ'ವನ್ನು ನೀಡಿದ್ದರೂ ಪ್ರತಿಪಕ್ಷಗಳು ಜನಮತದ ಮೇಲೆ ನಂಬಿಕೆ ಕಳೆದುಕೊಳ್ಳದೆ ಫಲಿತಾಂಶಕ್ಕಾಗಿ ಕಾಯುವ ತಂತ್ರ ಅನುಸರಿಸಿವೆ.

ಕೊನೆ ಹೊಡೆತ: ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿರುವ ಪ್ರತಿಪಕ್ಷಗಳಿಗೆ ಮತ ಎಣಿಕೆಯ ಮುನ್ನಾದಿನ ಹಿನ್ನಡೆಯಾಗಿದೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಐದು ಇವಿಎಂ ಮತಗಳನ್ನು ವಿವಿ ಪ್ಯಾಟ್‌ ಚೀಟಿಗಳ ಜತೆ ಹೊಂದಾಣಿಕೆ ಮಾಡುವ ಪ್ರಕ್ರಿಯೆಯನ್ನು ಮತ ಎಣಿಕೆಯ ಆರಂಭದಲ್ಲೇ ನಡೆಸಬೇಕೆಂಬ ಕೊನೆಯ ಬೇಡಿಕೆಯನ್ನೂ ಚುನಾವಣಾ ಆಯೋಗ ಸಾರಾಸಗಟಾಗಿ ತಿರಸ್ಕರಿಸಿದೆ. ಹೀಗಾಗಿ ಪೂರ್ವ ನಿಗದಿಯಂತೆ ಮತ ಎಣಿಕೆ ಪೂರ್ಣಗೊಂಡ ಬಳಿಕ ತಾಳೆ ಪ್ರಕ್ರಿಯೆ ನಡೆಯಲಿದೆ.

542: ಮತದಾನ ನಡೆದ ಕ್ಷೇತ್ರ

272: ಮ್ಯಾಜಿಕ್‌ ನಂಬರ್‌

8,049: ಒಟ್ಟು ಅಭ್ಯರ್ಥಿಗಳು

67.11: ಮತದಾನ ಪ್ರಮಾಣ

ಫಲಿತಾಂಶ 4 ಗಂಟೆ ವಿಳಂಬ

ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭ. 9.30ರ ಹೊತ್ತಿಗೆ ಮೊದಲ ಟ್ರೆಂಡ್‌ ಸಾಧ್ಯತೆ. ಇದೇ ಮೊದಲ ಬಾರಿಗೆ ಲೋಕಸಭಾ ಕ್ಷೇತ್ರದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಐದು ಇವಿಎಂಗಳ ಮತಗಳನ್ನು ವಿವಿ ಪ್ಯಾಟ್‌ ಚೀಟಿಗಳೊಂದಿಗೆ ತಾಳೆ ಹಾಕಲು ಇರುವುದರಿಂದ ಅಂತಿಮ ಫಲಿತಾಂಶ ಘೋಷಣೆ 4 ಗಂಟೆ ತಡವಾಗಬಹುದು ಎಂದು ಆಯೋಗ ತಿಳಿಸಿದೆ. ಸಂಜೆ ಹೊತ್ತಿಗೆ ಫಲಿತಾಂಶ ನಿರೀಕ್ಷೆ.

ಹೈವೋಲ್ಟೇಜ್‌ ಕ್ಷೇತ್ರಗಳು

ಅಮೇಠಿ: ರಾಹುಲ್‌ ಗಾಂಧಿ ವರ್ಸಸ್‌ ಸ್ಮೃತಿ ಇರಾನಿ

ಭೋಪಾಲ್‌: ದಿಗ್ವಿಜಯ ಸಿಂಗ್‌ ವರ್ಸಸ್‌ ಪ್ರಜ್ಞಾ ಠಾಕೂರ್‌

ತಿರುವನಂತಪುರಂ: ಶಶಿ ತರೂರ್‌ ವರ್ಸಸ್‌ ಕುಮ್ಮನಂ ರಾಜಶೇಖರನ್‌

ರಾಜ್ಯ

ಮಂಡ್ಯ: ನಿಖಿಲ್‌ ಕುಮಾರಸ್ವಾಮಿ ವರ್ಸಸ್‌ ಸುಮಲತಾ

ತುಮಕೂರು: ದೇವೇಗೌಡ ವರ್ಸಸ್‌ ಜಿ.ಎಸ್‌. ಬಸವರಾಜು

ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ ವರ್ಸಸ್‌ ಉಮೇಶ್‌ ಜಾಧವ್‌

ನಕಲಿ ಮತಗಟ್ಟೆ ಸಮೀಕ್ಷೆ ನಂಬಿ ಸ್ಥೈರ್ಯ ಕಳೆದುಕೊಳ್ಳಬೇಡಿ. ಹಾಗೇನೂ ಆಗಲ್ಲ. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ, ಕಾಂಗ್ರೆಸ್‌ನ್ನು ನಂಬಿ. ಒಂದು ದಿನ ಕಳೆದ ನೈಜತೆ ಹೊರಬೀಳುತ್ತದೆ.
-ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ಸೋಲಿನ ಆತಂಕದಿಂದ ಪ್ರತಿಪಕ್ಷಗಳು ಇವಿಎಂ, ಚುನಾವಣಾ ಪ್ರಕ್ರಿಯೆಯನ್ನು ಪ್ರಶ್ನಿಸುತ್ತಿವೆ. ಮತಗಟ್ಟೆ ಸಮೀಕ್ಷೆಗಳು ಬಂದ ಬಳಿಕವೇ ಪ್ರತಿಪಕ್ಷಗಳು ಇವಿಎಂ ಬಗ್ಗೆ ಹೆಚ್ಚು ಆತಂಕಗೊಂಡಿರುವುದೇಕೆ?
- ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ