ಆ್ಯಪ್ನಗರ

ಗೋವಾ ನೂತನ ಮಂತ್ರಿ ಹೆಸರು ಶೀಘ್ರ ಪ್ರಕಟ: ಬಿಜೆಪಿ ಮಿತ್ರಪಕ್ಷಗಳ ಜತೆ ಗಡ್ಕರಿ ಸಂಧಾನ

ನೂತನ ನಾಯಕನ ಆಯ್ಕೆಗಾಗಿ ನಡೆದ ಬಿಜೆಪಿ ಶಾಸಕರು ಮತ್ತು ಮಿತ್ರಪಕ್ಷಗಳ ಸಭೆಯಲ್ಲಿ ಕೆಂದ್ರ ಸಚಿವ ನಿತಿನ್ ಗಡ್ಕರಿ ಭಾಗವಹಿಸಿದ್ದರು ಎಂದು ಬಿಜೆಪಿ ಶಾಸಕ ಮೈಕೆಲ್ ಲೋಬೊ ತಿಳಿಸಿದರು. ಆದರೆ ನೂತನ ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಒಮ್ಮತಕ್ಕೆ ಬರಲಾಗಿಲ್ಲ.

Vijaya Karnataka Web 18 Mar 2019, 10:51 am
ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್‌ ನಿಧನದ ಬಳಿಕ ಬಿಜೆಪಿ ಮತ್ತು ಮಿತ್ರಪಕ್ಷಗಳು ನೂತನ ಮುಖ್ಯಮಂತ್ರಿಯ ಆಯ್ಕೆಗಾಗಿ ಭಾನುವಾರ ತಡರಾತ್ರಿ ವರೆಗೆ ಸಭೆ ನಡೆಸಿವೆ. ಆದರೆ ಮಾತುಕತೆಗಳು ಅಪೂರ್ಣವಾಗಿದ್ದು ಮತ್ತೆ ಮುಂದುವರಿಯಲಿವೆ.
Vijaya Karnataka Web Nitin Gadkari


ನಾಲ್ಕು ಬಾರಿ ಗೋವಾ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮನೋಹರ್ ಪರಿಕ್ಕರ್ ದೀರ್ಘಕಾಲದ ಅನಾರೋಗ್ಯದ ಬಳಿಕ ಪಣಜಿಯ ತಮ್ಮ ಖಾಸಗಿ ನಿವಾಸದಲ್ಲಿ ನಿನ್ನೆ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.

ನೂತನ ನಾಯಕನ ಆಯ್ಕೆಗಾಗಿ ನಡೆದ ಬಿಜೆಪಿ ಶಾಸಕರು ಮತ್ತು ಮಿತ್ರಪಕ್ಷಗಳ ಸಭೆಯಲ್ಲಿ ಕೆಂದ್ರ ಸಚಿವ ನಿತಿನ್ ಗಡ್ಕರಿ ಭಾಗವಹಿಸಿದ್ದರು ಎಂದು ಬಿಜೆಪಿ ಶಾಸಕ ಮೈಕೆಲ್ ಲೋಬೊ ತಿಳಿಸಿದರು. ಆದರೆ ನೂತನ ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಒಮ್ಮತಕ್ಕೆ ಬರಲಾಗಿಲ್ಲ.

ತಡರಾತ್ರಿ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಲೋಬೋ, ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ ಶಾಸಕ ಸುದಿನ್ ಧವಳೀಕರ್ ಮುಖ್ಯಮಂತ್ರಿ ಹುದ್ದೆ ಬಯಸಿದ್ದು, ಸಭೆ ಅರ್ಧಕ್ಕೆ ಅಂತ್ಯಗೊಳ್ಳಲು ಕಾರಣವಾಯಿತು ಎಂದು ತಿಳಿಸಿದರು.

'ಸುನಿಲ್ ಧವಳೀಕರ್‌ ಮುಖ್ಯಮಂತ್ರಿ ಹುದ್ದೆ ಬಯಸಿದ್ದಾರೆ. ಬಿಜೆಪಿಗೆ ಬೆಂಬಲಿಸುವ ಮೂಲಕ ಹಲವು ಬಾರಿ ತಾವು ತ್ಯಾಗ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ಬಿಜೆಪಿ ಅವರ ಬೇಡಿಕೆಗೆ ಒಪ್ಪಿಲ್ಲ' ಎಂದು ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಲೋಬೋ ತಿಳಿಸಿದರು.

ಶೀಘ್ರವೇ ಮಿತ್ರಪಕ್ಷಗಳ ಜತೆ ಮಾತನಾಡಿ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದೂ ಅವರು ತಿಳಿಸಿದರು.

ಸಭೆಯಲ್ಲಿ ಬಿಜೆಪಿ ಶಾಸಕರು ವಿಶ್ವಜಿತ್ ರಾಣೆ ಮತ್ತು ಪ್ರಮೋದ್ ಸಾವಂತ್‌ ಹೆಸರುಗಳನ್ನು ಪ್ರಸ್ತಾಪಿಸಿದರು ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ನಡುವೆ ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ) ಮುಖ್ಯಸ್ಥ ವಿಜಯ್ ಸರ್‌ದೇಸಾಯಿ ಪಕ್ಷದ ಶಾಸಕರಾದ ಜಯೇಶ್ ಸಲಗಾಂವ್ಕರ್ ಮತ್ತು ವಿನೋದ್ ಪಾಲೇಕರ್ ಹಾಗೂ ಪಕ್ಷೇತರ ಶಾಸಕರಾದ ರೋಹನ್ ಕೌಂಟೆ, ಗೋವಿಂದ್ ಗಾವಡೆ ಮತ್ತು ಪ್ರಸಾದ್ ಗಾಂವ್ಕರ್ ಕೂಡ ಭಾನುವಾರ ತಡರಾತ್ರಿ ನಿತಿನ್ ಗಡ್ಕರಿ ಅವರನ್ನು ಭೇಟಿಯಾದರು.

ನಿತಿನ್ ಗಡ್ಕರಿ ಅವರು ಒಬ್ಬೊಬ್ಬ ಶಾಸಕರ ಜತೆ ಪ್ರತ್ಯೇಕವಾಗಿ ಮಾತನಾಡಿದರು. ಅಂತಿಮ ತೀರ್ಮಾನವನ್ನು ನಿತಿನ್ ಗಡ್ಕರಿ ಅವರು ಪ್ರಕಟಿಸಲಿದ್ದು, ಶೀಘ್ರವೇ ನೂತನ ಮುಖ್ಯಮಂತ್ರಿ ಹೆಸರು ಘೋಷಣೆಯಾಗಲಿದೆ ಎಂದು ಎಂಜಿಪಿ ಶಾಸಕ ಸುದಿನ್ ಧವಳೀಕರ್‌ ತಿಳಿಸಿದರು.

ಪರಿಕ್ಕರ್ ನಿಧನದ ಬಳಿಕ ಗೋವಾ ವಿಧಾನಸಭೆಯಲ್ಲಿ ಒಟ್ಟು ಸಂಖ್ಯಾಬಲ 36ಕ್ಕೆ ಇಳಿದಿದೆ. ಬಿಜೆಪಿ ಶಾಸಕ ಫ್ರಾನ್ಸಿಸ್‌ ಡಿಸೋಜಾ ಕಳೆದ ತಿಂಗಳು ನಿಧನರಾಗಿದ್ದರು. ಇಬ್ಬರು ಕಾಂಗ್ರೆಸ್ ಶಾಸಕರು ಕಳೆದ ವರ್ಷವೇ ಪಕ್ಷ ತೊರೆದಿದ್ದರು.

ಇಂದು ಸಂಜೆ 5ಕ್ಕೆ ಪರಿಕ್ಕರ್ ಅಂತ್ಯಕ್ರಿಯೆ, ಗೋವಾದಲ್ಲಿ 7 ದಿನ ಶೋಕಾಚರಣೆ
ದಿಟ್ಟ, ಧೀಮಂತ ರಾಜಕಾರಣಿ ಪರಿಕ್ಕರ್ ಬಗೆಗಿನ 10 ಮಹತ್ವದ ಸಂಗತಿಗಳು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ