ಆ್ಯಪ್ನಗರ

ಮಧ್ಯಪ್ರದೇಶದ 16 ಸಚಿವರ ರಾಜೀನಾಮೆ, ಸರಕಾರ ಉಳಿಸಿಕೊಳ್ಳಲು ಕಮಲ್‌ನಾಥ್‌ ಶತಪ್ರಯತ್ನ

ಮಹತ್ವದ ಬೆಳವಣಿಗೆಯೊಂದರಲ್ಲಿ ಮಧ್ಯಪ್ರದೇಶದ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಕಮಲ್‌ನಾಥ್‌ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಎಲ್ಲಾ ಸಚಿವರು ಸಿಎಂಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸಂಪುಟ ಪುನರಚಿಸುವ ಸಲುವಾಗಿ ಎಲ್ಲರ ರಾಜೀನಾಮೆ ಪಡೆದಿದ್ದಾರೆ ಎನ್ನಲಾಗಿದೆ.

Vijaya Karnataka Web 10 Mar 2020, 12:06 am
ಭೋಪಾಲ್‌: ಮಹತ್ವದ ಬೆಳವಣಿಗೆಯೊಂದರಲ್ಲಿ ಮಧ್ಯಪ್ರದೇಶದ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಕಮಲ್‌ನಾಥ್‌ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಎಲ್ಲಾ ಸಚಿವರು ಸಿಎಂಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸರಕಾರ ಉಳಿಸಿಕೊಳ್ಳುವ ಸಲುವಾಗಿ ಸಿಎಂ ಕಮಲ್‌ನಾಥ್‌ ಈ ತಂತ್ರ ಅನುಸರಿಸಿದ್ದಾರೆ ಎನ್ನಲಾಗಿದೆ.
Vijaya Karnataka Web KAMALNATH


ಸಚಿವ ಸಂಪುಟ ಸಭೆಯಲ್ಲಿ ಭಾಗಿಯಾಗಿದ್ದ 16 ಸಚಿವರು ರಾಜೀನಾಮೆ ನೀಡಿದ್ದಾರೆ. ಸಚಿವರ ರಾಜೀನಾಮೆ ಪಡೆದು ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದ್ದು, ಮಧ್ಯಪ್ರದೇಶದ ರಾಜಕೀಯ ತೂಗುಯ್ಯಾಲೆಯಲ್ಲಿ ಇದೆ.ಇನ್ನು, ಈ ಬಗ್ಗೆ ಕಾಂಗ್ರೆಸ್‌ ನಾಯಕ ಪಿ.ಸಿ.ಶರ್ಮಾ ಪ್ರತಿಕ್ರಿಯಿಸಿದ್ದು, ಸಚಿವ ಸಂಪುಟ ಸಭೆಯಲ್ಲಿದ್ದ ಎಲ್ಲಾ ಸಚಿವರು ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಕಮಲ್‌ನಾಥ್‌ ಅವರಿಗೆ ನೀಡಿದ್ದೇವೆ. ಸಂಪುಟ ಪುನರ್‌ರಚಿಸಿ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಬಿಜೆಪಿಯಿಂದ ಸೃಷ್ಟಿಯಾಗಿರುವ ಗೊಂದಲ ಸರಿಪಡಿಸಿ ಎಂದು ಮನವಿ ಸಲ್ಲಿಸಿದ್ದೇವೆ. ಸರಕಾರ 5 ವರ್ಷ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ. ಜ್ಯೋತಿರಾಧಿತ್ಯ ಸಿಂಧ್ಯಾ ಕೂಡ ಕಾಂಗ್ರೆಸ್‌ ಜೊತೆ ಇದ್ದಾರೆ. ನಾವು 16 ಜನ ಸಚಿವರು ಸಿಎಂಗೆ ರಾಜೀನಾಮೆ ಸಲ್ಲಿಸಿದ್ದೇವೆ. ಮುಖ್ಯಮಂತ್ರಿ ಕಮಲ್‌ನಾಥ್‌ ಈಗ ಸಚಿವ ಸಂಪುಟ ಪುನರ್‌ರಚಿಸಬಹುದು. ಮಂತ್ರಿ ಮಂಡಲ ರಚಿಸಿದರೆ, ಸರಕಾರ ಉಳಿಯುತ್ತದೆ ಎಂದು ಕಾಂಗ್ರೆಸ್‌ ನಾಯಕ ಉಮರ್‌ ಸಿಂಗಾರ್‌ ಹೇಳಿದ್ದಾರೆ. ಇನ್ನು, ತಕ್ಷಣದ ಬೆಳವಣಿಗೆಯಿಂದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸಚಿವರ ರಾಜೀನಾಮೆ ಬೆನ್ನಲ್ಲೇ ಮಂಗಳವಾರ ಸಂಜೆ ಮಧ್ಯಪ್ರದೇಶ ಕಾಂಗ್ರೆಸ್‌ ಶಾಸಕಾಂಗ ಸಭೆಯನ್ನು ಕರೆಯಲಾಗಿದ್ದು, ಮುಂದಿನ ನಡೆ ಬಗ್ಗೆ ಮಾತುಕತೆ ನಡೆಯಲಿದೆ. ಸಚಿವ ಸಂಪುಟಕ್ಕೂ ಮುಂಚೆ ಪ್ರತಿಕ್ರಿಯೆ ನೀಡಿರುವ ಸಿಎಂ ಕಮಲ್‌ನಾಥ್‌, ಯಾವುದೇ ಕಾರಣಕ್ಕೂ ಸರಕಾರ ಅಸ್ಥಿರಗೊಳಿಸಲು ಬಿಡುವುದಿಲ್ಲ. ಇದು ಮಧ್ಯಪ್ರದೇಶದ ಜನರಿಂದ ರಚಿತವಾಗಿರುವ ಸರಕಾರ. ನನ್ನ ಅತಿದೊಡ್ಡ ಶಕ್ತಿ ಇಲ್ಲಿನ ಜನರ ನಂಬಿಕೆ ಮತ್ತು ಪ್ರೀತಿ ಎಂದು ಹೇಳಿ, ಸರಕಾರ ಉಳಿಸಿಕೊಳ್ಳುವ ಬಗ್ಗೆ ಮಾತನಾಡಿದ್ದರು.


ಮದ್ಯಪ್ರದೇಶದ ಕಮಲನಾಥ್ ಸರ್ಕಾರಕ್ಕೆ ಆಪರೇಷನ್ ಕಮಲ ಭೀತಿ ಎದುರಾಗಿದ್ದು, ಭಾನುವಾರವಷ್ಟೇ ಸಿಎಂ ಜೊತೆ ನಿಂತು ಬೆಂಬಲ ಸೂಚಿಸಿದ್ದ ಕಾಂಗ್ರೆಸ್ ಸಚಿವರು, ಶಾಸಕರು ಇದೀಗ ಉಲ್ಟಾ ಹೊಡೆದಿದ್ದಾರೆ. ಕಾಂಗ್ರೆಸ್‌ನ ಸುಮಾರು 16 ಸಚಿವರು ಮತ್ತು ಶಾಸಕರು ಸೋಮವಾರ ಬೆಂಗಳೂರಿಗೆ ಬಂದಿಳಿದಿದ್ದಾರೆ. ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಬಂದ ಈ ರಾಜಕೀಯ ನಾಯಕರು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಇಳಿದಿದ್ದಾರೆ ಎನ್ನಲಾಗಿದೆ.

ಮಧ್ಯಪ್ರದೇಶ ಸರಕಾರ ಪತನ?: ಕಾಂಗ್ರೆಸ್‌ನ 16 ಶಾಸಕರು ಬೆಂಗಳೂರಿಗೆ ದೌಡು!

16 ಶಾಸಕರು ಬೆಂಬಲ ವಾಪಾಸ್ ಪಡೆಯುವ ಸಾಧ್ಯತೆ ಇರುವುದರಿಂದ ಸದ್ಯದ ಸಚಿವರ ರಾಜೀನಾಮೆ ಪಡೆದು, ಅತೃಪ್ತರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂದು ಬೋಪಾಲ್ ನಿಂದ ಮೂರು ಖಾಸಗಿ ವಿಮಾನದಲ್ಲಿ ಎಚ್.ಎ.ಎಲ್ ವಿಮಾನನಿಲ್ದಾಣಕ್ಕೆ 10 ಮಂದಿ ಶಾಸಕರು ಹಾಗೂ 6 ಮಂದಿ ಸಚಿವರು ಬಂದಿಳಿದಿದ್ದಾರೆ. ಈ ಎಲ್ಲ ಶಾಸಕರಿಗೂ ಮಾರತ್ ಹಳ್ಳಿಯ ಖಾಸಗಿ ಹೊಟೇಲ್ ನಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ.

ಮಧ್ಯ ಪ್ರದೇಶ ಬಂಡಾಯದ ಹಿಂದೆ ಸಿಂಧ್ಯಾ ಕೈವಾಡ, ಬ್ಲ್ಯಾಕ್‌ಮೇಲ್‌ಗೆ ಇಳಿದ್ರಾ ಗ್ವಾಲಿಯರ್‌ ರಾಜ ಕುವರ?

ಕಳೆದ ಕೆಲ ದಿನಗಳ ಹಿಂದೆ ಮೂವರು ಶಾಸಕರು ಬೆಂಗಳೂರಿಗೆ ಧಾವಿಸಿ, ರಹಸ್ಯವಾಗಿ ಹೊಟೇಲ್ ವೊಂದರಲ್ಲಿ ತಂಗಿದ್ದರು. ಇದೀಗ 10 ಮಂದಿ ಕಾಂಗ್ರೆಸ್ ಶಾಸಕರು ಹಾಗೂ 6 ಸಚಿವರು ಕಮಲ್ ನಾಥ್ ಸರ್ಕಾರವನ್ನು ಧಿಕ್ಕರಿಸಿ ಬೆಂಗಳೂರಿಗೆ ಬಂದಿದ್ದಾರೆ. ಈ ಎಲ್ಲ ಶಾಸಕರನ್ನು ನೋಡಿಕೊಳ್ಳುವ ಉಸ್ತುವಾರಿಯನ್ನು ರಾಜ್ಯ ಬಿಜೆಪಿಯ ನಾಯಕರಾದ ಅರವಿಂದ ಲಿಂಬಾವಳಿ ಹಾಗೂ ಡಿಸಿಎಂ ಅಶ್ವತ್ಥ್ ನಾರಾಯಣ್ ವಹಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ