ಆ್ಯಪ್ನಗರ

ಅಯೋಧ್ಯೆ ಸಂಧಾನ ಸಮಿತಿಗೂ ತಮಿಳುನಾಡಿಗೂ ನಂಟು!

ಖಲಿಫುಲ್ಲಾ ಅವರು ಶಿವಗಂಗಾ ಜಿಲ್ಲೆಯ ಕರೈಕುಡಿಯವರು. ತಮಿಳುನಾಡಿನಲ್ಲಿ ವಕೀಲಿಕೆ ವೃತ್ತಿ ಆರಂಭಿಸಿ, ಸರಕಾರಿ ಸ್ವಾಮ್ಯದ ಹಾಗೂ ಖಾಸಗಿ ಬ್ಯಾಂಕುಗಳ ಪರವಾಗಿ ಹಲವು ವ್ಯಾಜ್ಯಗಳಲ್ಲಿ ಪ್ರಖರ ವಾದ ಮಂಡಿಸಿ ಹೆಸರು ಮಾಡಿದವರು.

Vijaya Karnataka 9 Mar 2019, 10:22 am
ಹೊಸದಿಲ್ಲಿ/ಚೆನ್ನೈ: ಧರ್ಮ ಮತ್ತು ರಾಜಕೀಯದೊಂದಿಗೆ ತಳುಕು ಹಾಕಿಕೊಂಡಿರುವ ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ಜಾಗದ ಒಡೆತನದ ವಿವಾದ ಇತ್ಯರ್ಥಕ್ಕೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಫ್‌.ಎಂ. ಇಬ್ರಾಹಿಂ ಖಲಿಫುಲ್ಲಾ, ಆರ್ಟ್‌ ಆಫ್‌ ಲಿವಿಂಗ್‌ ಫೌಂಡೇಷನ್‌ ಸ್ಥಾಪಕ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಮತ್ತು ಹಿರಿಯ ವಕೀಲ ಶ್ರೀರಾಮ್‌ ಪಂಚು ಅವರನ್ನೊಳಗೊಂಡ ತ್ರಿ ಸದಸ್ಯ ಸಂಧಾನ ಸಮಿತಿ ರಚಿಸಿದೆ. ಈ ಮೂವರೂ ತಮಿಳುನಾಡು ಮೂಲದವರು ಎಂಬುದು ವಿಶೇಷ.
Vijaya Karnataka Web Ayodhya Mediators


ಖಲಿಫುಲ್ಲಾ ಅವರು ಶಿವಗಂಗಾ ಜಿಲ್ಲೆಯ ಕಾರೈಕುಡಿಯವರು. ತಮಿಳುನಾಡಿನಲ್ಲಿ ವಕೀಲಿಕೆ ವೃತ್ತಿ ಆರಂಭಿಸಿ, ಸರಕಾರಿ ಸ್ವಾಮ್ಯದ ಹಾಗೂ ಖಾಸಗಿ ಬ್ಯಾಂಕುಗಳ ಪರವಾಗಿ ಹಲವು ವ್ಯಾಜ್ಯಗಳಲ್ಲಿ ಪ್ರಖರ ವಾದ ಮಂಡಿಸಿ ಹೆಸರು ಮಾಡಿದವರು. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯಲ್ಲಿ ಸುಧಾರಣೆ ಕೈಗೊಳ್ಳುವಲ್ಲಿ ಐತಿಹಾಸಿಕ ತೀರ್ಪು ಪ್ರಕಟಿಸಿ ಗಮನ ಸೆಳೆದಿದ್ದರು.

ಚೆನ್ನೈನಲ್ಲಿ ಹುಟ್ಟಿ ಬೆಳೆದ ಶ್ರೀರಾಮ್‌ ಪಂಚು ಅವರು ಮದ್ರಾಸ್‌ ಹೈಕೋರ್ಟ್‌ನ ಹಿರಿಯ ವಕೀಲರು. ವ್ಯಾಜ್ಯಗಳ ಇತ್ಯರ್ಥಕ್ಕೆ ಸಂಧಾನ ಸೂತ್ರ ಉತ್ತಮ ಮಾರ್ಗ ಎಂಬ ನಂಬಿಕೆಯೊಂದಿಗೆ ಮದ್ರಾಸ್‌ ಹೈಕೋರ್ಟ್‌ನಲ್ಲಿ 2005ರಲ್ಲಿಯೇ ಸಂಧಾನ ಕೇಂದ್ರಗಳನ್ನು ತೆರೆದಿದ್ದರು. ಅಸ್ಸಾಂ ಮತ್ತು ನಾಗಾಲ್ಯಾಂಡ್‌ ಗಡಿ ವಿವಾದ ಪರಿಹಾರಕ್ಕೆ ಇವರು ಸಂಧಾನ ನಡೆಸಿದ್ದರು.

ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರ ಹುಟ್ಟೂರು ತಾಂಜಾವೂರು ಜಿಲ್ಲೆಯ ಕುಂಭಕೋಣಂ ಸಮೀಪದ ಪಾಪನಾಶಂ. ಇವರು ಆರ್ಟ್‌ ಆಫ್‌ ಲಿವಿಂಗ್‌ ಫೌಂಡೇಷನ್‌ ಸ್ಥಾಪಕರು. ಯೋಗ, ಧ್ಯಾನ, ಸತ್ಸಂಗ ಹೀಗೆ ನಾನಾ ಕಾರ್ಯಕ್ರಮಗಳ ಮೂಲಕ ಅಧ್ಯಾತ್ಮ ಗುರು ಎನಿಸಿರುವ ಇವರಿಗೆ ವಿಶ್ವದಾದ್ಯಂತ ಅನುಯಾಯಿಗಳುಂಟು. ಈ ಹಿಂದೆಯೇ ಅಯೋಧ್ಯೆ ವಿವಾದ ಪರಿಹಾರಕ್ಕೆ ಹಿಂದೂ ಹಾಗೂ ಮುಸ್ಲಿಂ ಕಕ್ಷಿದಾರರ ನಡುವೆ ಸಂಧಾನ ನಡೆಸುವ ಪ್ರಸ್ತಾವ ಇರಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ