ಆ್ಯಪ್ನಗರ

ಹಿಂದಿ: ಹಿಂದೆ ಸರಿದ ಕೇಂದ್ರ

ಭಾಷಾ ನೀತಿ ಕರಡಿನಲ್ಲಿ 'ಹಿಂದಿ ಕಡ್ಡಾಯ' ಉಲ್ಲೇಖ ಅಳಿಸಿದ ಸರಕಾರ ಕರ್ನಾಟಕ ಸಹಿತ ದಕ್ಷಿಣ ರಾಜ್ಯಗಳ ತೀವ್ರ ವಿರೋಧಕ್ಕೆ ಬಾಗಿದ ಆಡಳಿತ

Vijaya Karnataka 4 Jun 2019, 5:00 am
ಹೊಸದಿಲ್ಲಿ: ತ್ರಿಭಾಷಾ ಸೂತ್ರದಡಿ ಹಿಂದಿ ಭಾಷಾ ಕಲಿಕೆಯನ್ನು ಕಡ್ಡಾಯಗೊಳಿಸಬೇಕೆಂಬ ವಿವಾದಾತ್ಮಕ ಸಲಹೆಯನ್ನು ಕೇಂದ್ರ ಸರಕಾರ ಕೈಬಿಟ್ಟಿದ್ದು, ಹಿಂದಿ ಭಾಷೆ ಒಂದು ಆಯ್ಕೆ ಮಾತ್ರ ಎಂದು ಸ್ಪಷ್ಟಪಡಿಸಿದೆ.
Vijaya Karnataka Web education-policy-new1559558445


ಇಸ್ರೋದ ಮಾಜಿ ಮುಖ್ಯಸ್ಥ ಡಾ. ಕಸ್ತೂರಿರಂಗನ್‌ ನೇತೃತ್ವದ ಸಮಿತಿ ಸಲ್ಲಿಸಿದ ರಾಷ್ಟ್ರೀಯ ಶಿಕ್ಷಣ ನೀತಿ 2019ರಲ್ಲಿ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಕಲಿಸಬೇಕೆಂಬ ಸಲಹೆ ಇದ್ದುದು ಭಾರಿ ವಿವಾದಕ್ಕೆ ಕಾರಣವಾಗಿದ್ದು, ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದಲ್ಲಿ ಪ್ರಬಲ ವಿರೋಧ ವ್ಯಕ್ತವಾಗಿತ್ತು. ಇದು ಹಿಂದಿ ಹೇರಿಕೆಯ ಹುನ್ನಾರ ಎಂಬ ಆಪಾದನೆಯೂ ಕೇಳಿಬಂದಿತ್ತು. ತಮಿಳುನಾಡಿನ ರಾಜಕೀಯ ಪಕ್ಷಗಳಂತೂ ಇದರ ವಿರುದ್ಧ ಸಮರವನ್ನೇ ಘೋಷಿಸಿದ್ದವು.

ದಕ್ಷಿಣದ ತೀವ್ರ ಆಕ್ರೋಶಕ್ಕೆ ಮಣಿದ ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿನ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ, 'ಹಿಂದಿ ಕಡ್ಡಾಯ' ಎಂಬ ವಿವಾದಾತ್ಮಕ ಭಾಗವನ್ನು ಕಿತ್ತು ಹಾಕಲಾಗಿದೆ.

ಹಿಂದಿನ ಅವಧಿಯಲ್ಲಿ ಕೇಂದ್ರದ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವರಾಗಿದ್ದ ಪ್ರಕಾಶ್‌ ಜಾವಡೇಕರ್‌ ಅವರು ಭಾಷಾ ನೀತಿ ರೂಪಿಸಲು ಡಾ. ಕಸ್ತೂರಿರಂಗನ್‌ ನೇತೃತ್ವದಲ್ಲಿ ಸಮಿತಿ ರಚಿಸಿದ್ದರು. ಈ ವಿಚಾರ ವಿವಾದವಾದಾಗ ಅವರೇ ಸ್ಪಷ್ಟೀಕರಣ ನೀಡಿ, ಯಾವುದೇ ಭಾಷೆಯನ್ನು ಹೇರುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದರು.

'ಹಿಂದಿ ಕಡ್ಡಾಯ' ಉಲ್ಲೇಖ ಕಿತ್ತು ಹಾಕಿದ ಕೇಂದ್ರ ಸರಕಾರದ ನಿರ್ಧಾರವನ್ನು ತಮಿಳುನಾಡು, ತೆಲಂಗಾಣ ಸೇರಿದಂತೆ ದಕ್ಷಿಣದ ರಾಜ್ಯಗಳು ಸ್ವಾಗತಿಸಿವೆ.

ಕರಡಿನ ಮೂಲದಲ್ಲಿ ಏನಿದೆ?
ಹಿಂದಿ ಭಾಷಿಕ ಪ್ರದೇಶದ ವಿದ್ಯಾರ್ಥಿಗಳು ಆರನೇ ತರಗತಿಯ ಬಳಿಕ ಹಿಂದಿ ಮತ್ತು ಇಂಗ್ಲಿಷ್‌ನ ಜತೆಗೆ ಭಾರತದ ಯಾವುದಾದರೂ ಭಾಗದ ಆಧುನಿಕ ಭಾರತೀಯ ಭಾಷೆಯನ್ನು ಕಲಿಕೆಗೆ ಆಯ್ಕೆ ಮಾಡಿಕೊಳ್ಳಬಹುದು. ಹಿಂದಿಯೇತರ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆ, ಹಿಂದಿ ಮತ್ತು ಇಂಗ್ಲಿಷ್‌ನ್ನು ಕಲಿಯಬೇಕು.


ಇದು ಕರಡು ಮಾತ್ರ: ಕೇಂದ್ರ
ಇದು ಕೇವಲ ಕರಡು ವರದಿ ಮಾತ್ರ. ಇದನ್ನು ನೀತಿಯಾಗಿ ರೂಪಿಸಿಲ್ಲ, ಜಾರಿಗೆ ನಿರ್ಧರಿಸಿಲ್ಲ. ನಾವು ನಾನಾ ವಲಯಗಳಿಂದ ಅಭಿಪ್ರಾಯಗಳನ್ನು ಬಯಸಿದ್ದೆವು. ಸಮಿತಿಯು ಹಿಂದಿನ ವರದಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.
- ಪ್ರಕಾಶ್‌ ಜಾವಡೇಕರ್‌, ಕೇಂದ್ರ ಸಚಿವ

ಹಿಂದಿ ಕಡ್ಡಾಯಕ್ಕೆ ರಾಜ್ಯದಲ್ಲಿ ವಿರೋಧ

ಹಿಂದಿ ಕಡ್ಡಾಯ ಪ್ರಸ್ತಾಪ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಳೆದೆರಡು ದಿನಗಳಿಂದ ಭಾರಿ ಅಭಿಯಾನ ನಡೆಯುತ್ತಿದ್ದು, ಇದಕ್ಕೆ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಪ್ರಮುಖರು ಧ್ವನಿಗೂಡಿಸಿದ್ದಾರೆ. ಜೂನ್‌ 6ರಂದು ಬೃಹತ್‌ ಪ್ರತಿಭಟನೆಗೂ ಸಿದ್ಧತೆ ನಡೆದಿತ್ತು. ಈ ನಡುವೆ, ತ್ರಿಭಾಷಾ ಸೂತ್ರಕ್ಕೆ ಕೆಲವು ನಾಯಕರು ಬೆಂಬಲವನ್ನೂ ನೀಡಿದ್ದಾರೆ.

ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಯಾವುದೇ ಭಾಷೆಯ ಹೇರಿಕೆ ಸರಿಯಲ್ಲ. ಶಿಕ್ಷಣ ನೀತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಕೇಂದ್ರಕ್ಕೆ ರಾಜ್ಯದ ನಿಲುವು ತಿಳಿಸಲಾಗುವುದು.
-ಎಚ್‌.ಡಿ.ಕುಮಾರಸ್ವಾಮಿ, ಸಿಎಂ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ