ಆ್ಯಪ್ನಗರ

ಗೋವಾ ಸಿಎಂ ಬದಲಿಲ್ಲ ಎಂದ ಬಿಜೆಪಿ

ಪರಿಕ್ಕರ್‌ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಗೋವಾದಲ್ಲಿ ಪಕ್ಷವನ್ನು ಮುನ್ನಡೆಸಲು ಅವರಷ್ಟೇ ಪ್ರಭಾವಿ ನಾಯಕರೊಬ್ಬರ ತಲಾಷೆಯಲ್ಲಿ ಬಿಜೆಪಿ ಇತ್ತಾದರೂ ಈ ವಿಚಾರದಲ್ಲಿ ಗೊಂದಲ ಮುಂದುವರಿದಿತ್ತು.

Vijaya Karnataka Web 23 Sep 2018, 8:59 pm
ಹೊಸದಿಲ್ಲಿ: ಮೆದೋಜೀರಕ ಗ್ರಂಥಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್‌ ಅವರೇ ಮೈತ್ರಿ ಸರಕಾರದ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಬಿಜೆಪಿ ಸ್ಪಷ್ಟಪಡಿಸಿದ್ದು, ಈ ಮೂಲಕ ಸರಕಾರ ಪತನಗೊಳಿಸಲು ಕಾಂಗ್ರೆಸ್‌ ನಡೆಸುತ್ತಿದ್ದ ಯತ್ನಗಳಿಗೆ ಬ್ರೇಕ್‌ ಹಾಕಿದೆ.
Vijaya Karnataka Web manohar-parrikar


ಪರಿಕ್ಕರ್‌ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಗೋವಾದಲ್ಲಿ ಪಕ್ಷವನ್ನು ಮುನ್ನಡೆಸಲು ಅವರಷ್ಟೇ ಪ್ರಭಾವಿ ನಾಯಕರೊಬ್ಬರ ತಲಾಷೆಯಲ್ಲಿ ಬಿಜೆಪಿ ಇತ್ತಾದರೂ ಈ ವಿಚಾರದಲ್ಲಿ ಗೊಂದಲ ಮುಂದುವರಿದಿತ್ತು. ಆದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಗೋವಾದಲ್ಲಿ ಪರಿಕ್ಕರ್‌ ಅವರೇ ಸಿಎಂ ಆಗಿ ಮುಂದುವರಿಯಲಿದ್ದು, ಅವರನ್ನು ಬದಲಿಸುವ ಮಾತೇ ಇಲ್ಲ. ಈ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಭಾನುವಾರ ಟ್ವೀಟ್‌ ಮಾಡಿ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ಅಲ್ಲದೇ ಸದ್ಯದಲ್ಲೇ ಸಂಪುಟ ಪುನಾರಚನೆಯಾಗಲಿದೆ ಎಂದೂ ಅವರು ಹೇಳಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಪರಿಕ್ಕರ್‌ ಅವರನ್ನು ಇತ್ತೀಚೆಗೆ ಹೊಸದಿಲ್ಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದು ಹಂತದಲ್ಲಿ ಬಿಜೆಪಿಯು 2019ರ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬ್ರಾಹ್ಮಣೇತರ ಮತಗಳನ್ನು ಸೆಳೆಯುವ ವರ್ಚಸ್ಸು ಹೊಂದಿರುವ ಕೇಂದ್ರ ಸಚಿವ ಶ್ರೀಪಾದ್‌ ನಾಯಕ್‌ ಅವರನ್ನು ರಾಜ್ಯಕ್ಕೆ ಕರೆತಂದು ಅವರನ್ನು ಸಿಎಂ ಆಗಿ ನೇಮಿಸುವ ಬಗ್ಗೆ ಚಿಂತಿಸಿತ್ತಾದರೂ ನಂತರದಲ್ಲಿ ಅದರಿಂದ ಹಿಂದೆ ಸರಿದಿದೆ.

ಇತ್ತೀಚೆಗಷ್ಟೇ ಶಾ ಅವರು ಪರಿಕ್ಕರ್‌ ಅವರ ಬದಲಿಗೆ ಬೇರೆಯವರನ್ನು ಸಿಎಂ ಆಗಿ ನೇಮಿಸುವ ವಿಚಾರದಲ್ಲಿ ಬಿಜೆಪಿ ಮಿತ್ರಪಕ್ಷಗಳ ವಿಶ್ವಾಸ ಪಡೆಯಲು ಹಾಗೂ ರಾಜಕೀಯ ಸ್ಥಿತಿಯ ಪರಾಮರ್ಶೆ ನಡೆಸಲು ರಾಮ್‌ಲಾಲ್‌, ಬಿ.ಎಲ್‌.ಸಂತೋಷ್‌ ಮತ್ತು ವಿನಯ್‌ ಪುರಾಣಿಕ್‌ ಒಳಗೊಂಡ ಕೇಂದ್ರ ನಾಯಕರ ತಂಡವನ್ನು ರಾಜ್ಯಕ್ಕೆ ಕಳುಹಿಸಿಕೊಟ್ಟಿದ್ದರು. ಈ ತಂಡವೂ ಸದ್ಯಕ್ಕೆ ಪರಿಕ್ಕರ್‌ ಬದಲಿಸುವ ಅಗತ್ಯವಿಲ್ಲ ಎಂದು ವರದಿ ನೀಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ