ಹೊಸದಿಲ್ಲಿ: ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಏರಿಕೆಯ ಹೊರೆಯನ್ನು ಕೇಂದ್ರ ಸರಕಾರ ರಾಜ್ಯಗಳಿಗೇ ಹೊರಿಸಿದ್ದು, ವೇತನ ಹೆಚ್ಚಳ ಮಾಡಲು ರಾಜ್ಯಗಳಿಗೆ ಮುಕ್ತ ಅವಕಾಶವಿದೆ ಎಂದು ಹೇಳುವ ಮೂಲಕ ಕೈತೊಳೆದುಕೊಂಡಿದೆ.
ರಾಜ್ಯಸಭೆಯಲ್ಲಿ ಈ ಕುರಿತು ಹೇಳಿಕೆ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಕೃಷ್ಣ ರಾಜ್ ಅವರು ‘‘ಅಂಗವನಾಡಿ ಕಾರ್ಯಕರ್ತೆಯರುಮತ್ತು ಸಹಾಯಕರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕ್ರಮವಾಗಿ 60:40 ಅನುಪಾತದಲ್ಲಿ ಗೌರವ ಧನ ನೀಡುತ್ತವೆ. ಅಂದರೆ ಶೇ. 60ರಷ್ಟು ಕೇಂದ್ರ ಸರಕಾರ ನೀಡಿದರೆ, ಉಳಿದ ಶೇ. 40ರಷ್ಟನ್ನು ರಾಜ್ಯ ಸರಕಾರಗಳು ಭರಿಸುತ್ತವೆ. 2011ರಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ 3,000 ರೂ. ಹಾಗೂ ಸಹಾಯಕರಿಗೆ 1,500 ರೂ. ಗೌರವಧನ ನೀಡಲಾಗುತ್ತಿದೆ. ಒಂದು ವೇಳೆ ರಾಜ್ಯ ಸರಕಾರಗಳು ತಮ್ಮ ಪಾಲಿನಲ್ಲಿ ಹೆಚ್ಚಳ ಮಾಡುವುದಾದರೆ, ಅದನ್ನು ಕೇಂದ್ರ ಸರಕಾರ ಸ್ವಾಗತಿಸುತ್ತದೆ,’’ ಎಂದು ಹೇಳಿದರು.
‘‘ಈಗಾಗಲೇ ಕೆಲವು ರಾಜ್ಯಗಳು ಗೌರವಧನವನ್ನು ಹೆಚ್ಚಿಸಿವೆ. ಇತರ ರಾಜ್ಯಗಳೂ ಇಂತಹ ಕ್ರಮಕ್ಕೆ ಮುಂದಾಗುವುದಾದರೆ, ಸ್ವಾಗತಾರ್ಹ,’’ ಎಂದರು.
ದೇಶಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಅಂಗನವಾಡಿ ಕಾರ್ಯತರ್ಕೆಯರು ಮತ್ತು ಸಹಾಯಕರ ಸೇವೆಯನ್ನು ಪರಿಗಣಿಸಿ, ಅವರ ಗೌರವಧನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆ ರಾಜ್ಯಸಭೆಯಲ್ಲಿ ಹಲವು ಪಕ್ಷಗಳು ಸರಕಾರವನ್ನು ಕೋರಿದವು. ಇದಕ್ಕೆ ಪ್ರತಿಕ್ರಿಯೆಯಾಗಿ ಸಚಿವರು ಈ ಹೇಳಿಕೆ ನೀಡಿದರು.
ಖರ್ಗೆ ಆಗ್ರಹ: ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ ಸಿ ವೇಣುಗೋಪಾಲ್, ಟಿಎಂಸಿಯ ಅರ್ಪಿತಾ ಘೋಷ್, ಬಿಜೆಪಿಯ ಸಂಜಯ್ ಜೈಸ್ವಾಲ್ ಅವರು ಗೌರವಧನ ಹೆಚ್ಚಳಕ್ಕೆ ಸದನದಲ್ಲಿ ಆಗ್ರಹ ಮಾಡಿದರು.
ಇತರ ಸೌಲಭ್ಯಗಳು ನೀಡಲಾಗಿದೆ: ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘‘ಅಂಗನವಾಡಿ ಕಾರ್ಯಕರ್ತೆಯರು ಸಮಾಜಕ್ಕೆ ಸಲ್ಲಿಸುವ ಸೇವೆಯ ಬಗ್ಗೆ ಸರಕಾರಕ್ಕೆ ಅರಿವಿದ್ದು, ಅವರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ,’’ ಎಂದರು.
ಗೌರವಧನದ ಜತೆಗೆ 20 ದಿನಗಳ ವಾರ್ಷಿಕ ರಜೆ, ಎರಡು ಬಾರಿ 135 ದಿನಗಳ ವೇತನ ಸಹಿತ ಹೆರಿಗೆ ರಜೆ, ಉತ್ತಮ ಕೆಲಸಕ್ಕಾಗಿ ಪ್ರಶಸ್ತಿ, ಮೇಲ್ವಿಚಾರಕರ ಹುದ್ದೆಗೆ ನೇಮಕಾತಿಯಲ್ಲಿ ಮೀಸಲು ಹಾಗೂ ವಿಮೆ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.