ಆ್ಯಪ್ನಗರ

ಅಣ್ಣಾ ಹಜಾರೆ ನಿರಶನ ಅಂತ್ಯ

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್‌, ಕೇಂದ್ರ ಸಚಿವರಾದ ರಾಧಾ ಮೋಹನ್‌ ಸಿಂಗ್‌, ಸುಭಾಷ್‌ ಭಾಮ್ರೆ ರಾಳೇಗಣಸಿದ್ಧಿಗೆ ದೌಡಾಯಿಸಿ ಮನವೊಲಿಕೆ ನಡೆಸಿದ ಬೆನ್ನಲ್ಲೇ ಹಜಾರೆ ನಿರಶನ ಕೈಬಿಟ್ಟಿದ್ದಾರೆ.

Vijaya Karnataka 6 Feb 2019, 5:00 am
ಸಿಎಂ ಫಡ್ನವೀಸ್‌ ಮನವಿಗೆ ಸ್ಪಂದಿಸಿದ ಗಾಂಧಿವಾದಿ
Vijaya Karnataka Web anna


ರಾಳೇಗಣಸಿದ್ಧಿ: ಕೇಂದ್ರದಲ್ಲಿ ಲೋಕಪಾಲ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತರ ನೇಮಕಕ್ಕೆ ಆಗ್ರಹಿಸಿ ತಮ್ಮ ಕರ್ಮಭೂಮಿ ರಾಳೇಗಣಸಿದ್ಧಿಯಲ್ಲಿ ಏಳು ದಿನಗಳಿಂದ ನಡೆಸುತ್ತಿದ್ದ ನಿರಶನವನ್ನು ಸಾಮಾಜಿಕ ಕಾರ‍್ಯಕರ್ತ ಅಣ್ಣಾ ಹಜಾರೆ ಮಂಗಳವಾರ ಅಂತ್ಯಗೊಳಿಸಿದ್ದಾರೆ.

ಏಳು ದಿನದಲ್ಲಿ ಹಜಾರೆ ಅವರ ದೇಹ ತೂಕ ಸುಮಾರು 7 ಕೆ.ಜಿ. ಕಡಿಮೆಯಾಗಿದೆ. ಅವರ ಆರೋಗ್ಯ ಸ್ಥಿತಿ ಕೊಂಚ ಬಿಗಡಾಯಿಸುತ್ತಿದ್ದಂತೆಯೇ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್‌, ಕೇಂದ್ರ ಸಚಿವರಾದ ರಾಧಾ ಮೋಹನ್‌ ಸಿಂಗ್‌, ಸುಭಾಷ್‌ ಭಾಮ್ರೆ ರಾಳೇಗಣಸಿದ್ಧಿಗೆ ದೌಡಾಯಿಸಿ ಮನವೊಲಿಕೆ ನಡೆಸಿದ ಬೆನ್ನಲ್ಲೇ ಹಜಾರೆ ನಿರಶನ ಕೈಬಿಟ್ಟಿದ್ದಾರೆ.

''ಫೆಬ್ರವರಿ 13ರಂದು ಲೋಕಪಾಲ ನೇಮಕ ವಿಚಾರದಲ್ಲಿ ಕೇಂದ್ರ ಸರಕಾರ ನಿರ್ಧಾರ ತೆಗೆದುಕೊಳ್ಳಲಿದೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ಲೋಕಾಯುಕ್ತರ ನೇಮಕ ಕುರಿತು ಜಂಟಿ ಸಮಿತಿ ರಚಿಸಲಾಗುವುದು.ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಈ ಸಂಬಂಧ ಕಾಯಿದೆ ಜಾರಿಗೆ ತರಲಾಗುವುದು ಎಂದು ಫಡ್ನವಿಸ್‌ ನನಗೆ ಭರವಸೆ ಕೊಟ್ಟಿದ್ದಾರೆ. ಹಾಗಾಗಿ ನಿರಶನ ಅಂತ್ಯಗೊಳಿಸಿದ್ದೇನೆ,'' ಎಂದು ಹಜಾರೆ ಹೇಳಿದ್ದಾರೆ. ಇದಕ್ಕೂ ಮುನ್ನ ಅವರು, 2014ರ ಲೋಕಸಭೆ ಚುನಾವಣೆಯಲ್ಲಿ ಮತ ಹಾಕಿದ ಜನರಿಗೆ ಬಿಜೆಪಿ ದ್ರೋಹ ಬಗೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಸೋಮವಾರವಷ್ಟೇ ಅವರು ಸರಕಾರ ಲೋಕಪಾಲ ಮತ್ತು ಲೋಕಾಯುಕ್ತ ನೇಮಕದ ವಿಚಾರವಾಗಿ ಸ್ಪಷ್ಟ ನಿರ್ಧಾರ ಕೈಗೊಳ್ಳದ ಹೊರತು ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇನ್ನೊಂದೆಡೆ ಶಿವಸೇನೆ, ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಕೂಡ ಅಣ್ಣಾ ಹೋರಾಟಕ್ಕೆ ಬೆಂಬಲ ನೀಡಿತ್ತು. ಈ ಹಿಂದೆ ದಿಲ್ಲಿಯ ರಾಮಲೀಲಾ ಮೈದಾನದಲ್ಲೂ ಇದೇ ರೀತಿಯ ಹೋರಾಟ ನಡೆಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ