ಆ್ಯಪ್ನಗರ

ಬಾಹ್ಯಾಕಾಶ ಕಸ ಕುರಿತ ನಾಸಾ ಆರೋಪ ಹುರುಳಿಲ್ಲ

ಎಸ್ಯಾಟ್‌ ಹೊಡೆದುರುಳಿಸಿದ ಉಪಗ್ರಹದ ತುಣುಕುಗಳು ಉರಿದು ಬೂದಿಯಾಗಿ ಭೂಮಿಗೆ ಬೀಳಲಿವೆ ಎಂದು ಸೆಲ್ವಮೂರ್ತಿ ತಿಳಿಸಿದ್ದಾರೆ.

Vijaya Karnataka 4 Apr 2019, 5:00 am
ಚೆನ್ನೈ: ಭಾರತ ಕಳೆದ ವಾರ ನಡೆಸಿದ ಎಸ್ಯಾಟ್‌ ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆಯಿಂದ ಬಾಹ್ಯಾಕಾಶ ತ್ಯಾಜ್ಯಕ್ಕೆ ಸುಮಾರು 400 ಚೂರುಗಳು ಸೇರ್ಪಡೆಯಾಗಿದ್ದು, ಇದರಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಪಾಯ ಎದುರಾಗಿದೆ ಎಂಬ ನಾಸಾ ಆರೋಪವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ)ಯ ವಿಜ್ಞಾನಿಗಳು ತಳ್ಳಿಹಾಕಿದ್ದಾರೆ.
Vijaya Karnataka Web asat


''ಇದುವರೆಗೆ ಸುಮಾರು 60 ತುಂಡುಗಳ ತ್ಯಾಜ್ಯ ಪತ್ತೆಹಚ್ಚಿದ್ದು, ಈ ಪೈಕಿ 24 ತುಂಡುಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್‌ಎಸ್‌)ಕ್ಕೆ ಅಪಾಯಕಾರಿಯಾಗಿವೆ. ಭಾರತದ ಪರೀಕ್ಷೆಯ ನಂತರ ಅಪಾಯ ಮಟ್ಟ ಶೇ.44ರಷ್ಟು ಹೆಚ್ಚಿದೆ,'' ಎಂದು ನಾಸಾ ಆಡಳಿತ ಮುಖ್ಯಸ್ಥ ಜಿಮ್‌ ಬ್ರಿಡೆನ್‌ಸ್ಟೇನ್‌ ಮಂಗಳವಾರ ಹೇಳಿದ್ದರು.

''ನಾಸಾ ಆಡಳಿತ ಮುಖ್ಯಸ್ಥರ ಹೇಳಿಕೆ ತಾರತಮ್ಯದಿಂದ ಕೂಡಿದೆ. ಇದೇ ರೀತಿಯ ಪರೀಕ್ಷೆಗಳನ್ನು ಈ ಹಿಂದೆ ಅಮೆರಿಕ, ರಷ್ಯಾ ಮತ್ತು ಚೀನಾ ನಡೆಸಿದಾಗ ಉಂಟಾಗಿದ್ದ ತ್ಯಾಜ್ಯ ಚೂರುಗಳಿಗೆ ಹೋಲಿಸಿದರೆ ಭಾರತದ ಪರೀಕ್ಷೆಯಿಂದ ಉಂಟಾದ ತ್ಯಾಜ್ಯ ಕಡಿಮೆ,'' ಎಂದು ಡಿಆರ್‌ಡಿಒ ಮಾಜಿ ಚೀಫ್‌ ಕಂಟ್ರೋಲರ್‌ ಡಾ.ಡಬ್ಲ್ಯು. ಸೆಲ್ವಮೂರ್ತಿ ತಿಳಿಸಿದ್ದಾರೆ.

''ನಮ್ಮ ಎಸ್ಯಾಟ್‌ ಕ್ಷಿಪಣಿ ಪರೀಕ್ಷೆಯನ್ನು 300 ಕಿ.ಮೀ. ಎತ್ತರದಲ್ಲಿ ನಡೆಸಲಾಗಿದೆ. ಅಲ್ಲದೇ ಅದು ಭೂಮಿ ಸನಿಹದ ಕಕ್ಷೆಯಲ್ಲಿ ನಡೆದ ಕಾರಣ ಬಾಹ್ಯಾಕಾಶದಲ್ಲಿ ತ್ಯಾಜ್ಯದ ಸಮಸ್ಯೆ ಉಂಟಾಗದು. ಎಸ್ಯಾಟ್‌ ಹೊಡೆದುರುಳಿಸಿದ ಉಪಗ್ರಹದ ತುಣುಕುಗಳು ಉರಿದು ಬೂದಿಯಾಗಿ ಭೂಮಿಗೆ ಬೀಳಲಿವೆ,'' ಎಂದು ಸೆಲ್ವಮೂರ್ತಿ ತಿಳಿಸಿದ್ದಾರೆ.

ಇನ್ನೊಂದೆಡೆ ಅಮೆರಿಕ ವಿದೇಶಾಂಗ ಸಚಿವಾಲಯದ ಉಪ ವಕ್ತಾರ ರಾಬರ್ಟ್‌ ಪಲ್ಲಾಡಿನೊ ಪ್ರತಿಕ್ರಿಯಿಸಿ, ''ಬಾಹ್ಯಾಕಾಶದ ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಭಾರತ ಮತ್ತು ಅಮೆರಿಕ ಪರಸ್ಪರ ಸಹಕಾರ ಮುಂದುವರಿಸಲಿವೆ,''ಎಂದು ಹೇಳಿದ್ದಾರೆ.


ಭಾರತ ತಲೆತಗ್ಗಿಸುವಂತಹ ಕೆಲಸವನ್ನು ಭಾರತೀಯ ವಿಜ್ಞಾನಿಗಳು ಎಂದೂ ಮಾಡುವುದಿಲ್ಲ. ಎಸ್ಯಾಟ್‌ ಹೊಡೆದುರುಳಿಸಿದ ಉಪಗ್ರಹದ ತುಣುಕುಗಳು ಆರು ತಿಂಗಳೊಳಗೆ ಸಂಪೂರ್ಣ ಉರಿದು ಬೂದಿಯಾಗಿ ಭೂಮಿಗೆ ಬೀಳಲಿವೆ.

- ತಪನ್‌ ಮಿಶ್ರಾ, ಇಸ್ರೊ ಅಧ್ಯಕ್ಷರ ಹಿರಿಯ ಸಲಹೆಗಾರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ