ಆ್ಯಪ್ನಗರ

ಮತದಾನೋತ್ತರ ಸಮೀಕ್ಷೆ: ದೀದಿ ಕೈ ಬಿಡದ ಬೆಂಗಾಲಿಗಳು, ಅಸ್ಸಾಂನಲ್ಲಿ ಅರಳುತ್ತೆ ಕಮಲ

ಪಶ್ಚಿಮ ಬಂಗಾಳದಲ್ಲಿ ಮತದಾರರು ದೀದಿ ಕೈಯನ್ನೇ ಮತ್ತೆ ಹಿಡಿಯುವುದು ಬಹುತೇಕ ಖಚಿತವಾಗಿದ್ದು, ಅಸ್ಸಾಂನಲ್ಲಿ ಕಮಲ ಅರಳುವುದೆಂದು ಸಿ-ವೋಟರ್ ಸಮೀಕ್ಷೆ ಭವಿಷ್ಯ ಹೇಳಿದೆ

ಏಜೆನ್ಸೀಸ್ 16 May 2016, 8:22 pm
ಹೊಸದಿಲ್ಲಿ: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೆರಿ ಮತ್ತು ಅಸ್ಸಾಂ ವಿಧಾನಸಭೆ ಚುನಾವಣೆ ಮುಗಿದಿದ್ದು, ಮತದಾನೋತ್ತರ ಸಮೀಕ್ಷೆ ಹೊರಬಿದ್ದಿದೆ. ಪಶ್ಚಿಮ ಬಂಗಾಳದಲ್ಲಿ ಮತದಾರರು ದೀದಿ ಕೈಯನ್ನೇ ಮತ್ತೆ ಹಿಡಿಯುವುದು ಬಹುತೇಕ ಖಚಿತವಾಗಿದ್ದು, ಅಸ್ಸಾಂನಲ್ಲಿ ಕಮಲ ಅರಳುವುದೆಂದು ಸಿ-ವೋಟರ್ ಸಮೀಕ್ಷೆ ಭವಿಷ್ಯ ಹೇಳಿದೆ.
Vijaya Karnataka Web assmby election exit poll
ಮತದಾನೋತ್ತರ ಸಮೀಕ್ಷೆ: ದೀದಿ ಕೈ ಬಿಡದ ಬೆಂಗಾಲಿಗಳು, ಅಸ್ಸಾಂನಲ್ಲಿ ಅರಳುತ್ತೆ ಕಮಲ


ಕೇರಳದಲ್ಲಿ ಆಡಳಿತ-ವಿರೋಧಿ ಅಲೆಯಿಂದ ಕಾಂಗ್ರೆಸ್‌ಗೆ ಹಿನ್ನೆಡೆಯಾಗುವ ಸಾಧ್ಯತೆ ಇದ್ದು, ಎಡ ಪಕ್ಷಗಳ ನೇತೃತ್ವದ ಎಲ್‌ಡಿಎಫ್ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ತಮಿಳುನಾಡಿನಲ್ಲಿ ಕರುಣಾನಿಧಿ ಹಾಗೂ ಜಯಲಲಿತಾ ನಡುವೆ ಬಿಗ್ ಫೈಟ್ ಇದ್ದು, ಜಯಲಲಿತಾ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗುವುದಿಲ್ಲ ಎನ್ನಲಾಗುತ್ತಿದೆ. ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಸಾಧಿಸುವ ನಿರೀಕ್ಷೆ ಇದೆ.

ಪ.ಬಂಗಾಳದಲ್ಲಿ ದೀದಿ ಪಾರಮ್ಯ:
ಒಟ್ಟು 294 ಸದಸ್ಯ ಬಲದ ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ಗೆ 167 ಸೀಟ್ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ದೀದಿ ಅಧಿಕಾರಕ್ಕೆ ಬರುವುದು ಅನುಮಾನವೇ ಇಲ್ಲ ಎಂದಿದೆ ಸಮೀಕ್ಷೆ. ಕಳೆದ ಬಾರಿ ದೀದಿ ಅಧಿಕಾರಕ್ಕೆ ಬರುವ ಮುಂಚೆನಿಂದಲೂ ರಾಜ್ಯವನ್ನು ಆಳಿದ ಎಡ ಪಕ್ಷಗಳು ಈ ಬಾರಿ ತುಸು ಸುಧಾರಿಸುವಂತೆ ಕಾಣುತ್ತಿದ್ದು, ಸುಮಾರು 120 ಸೀಟ್‌ಗಳು ಗೆಲ್ಲಬಹುದೆಂದು ಹೇಳಲಾಗುತ್ತಿದೆ.

ಅಸ್ಸಾಂನಲ್ಲಿ ಅರಳುತ್ತೆ ಕಮಲ
ಕಾಂಗ್ರೆಸ್ ಆಡಳಿತವಿದ್ದ ಅಸ್ಸಾಂನಲ್ಲಿ ಬಿಜೆಪಿ ಗೆಲ್ಲುವುದೆಂದು ಬಹುತೇಕ ಎಲ್ಲ ಸಮೀಕ್ಷೆಗಳು ಭವಿಷ್ಯ ನುಡಿಯುತ್ತಿದ್ದು, ಸುಮಾರು 52ರಿಂದ 61 ಕ್ಷೇತ್ರಗಳನ್ನು ಕಮಲ ತನ್ನ ತೆಕ್ಕೆಗೆ ಹಾಕಿ ಕೊಳ್ಳುವ ಸಾಧ್ಯತೆ ಇದೆ.

ಒಟ್ಟು 126 ಸದಸ್ಯ ಬಲದ ರಾಜ್ಯದ ವಿಧಾನಸಭೆಯಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಕಳೆದುಕೊಳ್ಳಲ್ಲಿದ್ದು, ಸುಮಾರು 37ರಿಂದ 45 ಕೇತ್ರಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಬಹುದೆನ್ನಲಾಗುತ್ತಿದೆ.

ಕೇರಳದಲ್ಲಿ ಆಡಳಿತ-ವಿರೋಧಿ ಅಲೆಯ ಮೋಡಿ
ಒಮ್ಮೆ ಕಾಂಗ್ರೆಸ್ ಮತ್ತೊಮ್ಮೆ ಎಡ ಪಕ್ಷಗಳು ಅಧಿಕಾರಕ್ಕೆ ಬರುವ ಕೇರಳದಲ್ಲಿ ಈ ಬಾರಿ ಎಡ ಪಕ್ಷಗಳು ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. 140 ಕ್ಷೇತ್ರಗಳ ಕೇರಳ ವಿಧಾನಸಭೆಯಲ್ಲಿ ಎಡ ಪಕ್ಷಗಳ ನೇತೃತ್ವದ ಎಲ್‌ಡಿಎಫ್‌ 82 ಕೇತ್ರಗಳನ್ನು ಗೆಲ್ಲಬಹುದೆನ್ನಲಾಗುತ್ತಿದೆ. ಕಳೆದ ಬಾರಿ ಈ ಫ್ರಂಟ್ 66 ಕ್ಷೇತ್ರಗಳನ್ನು ಗೆದ್ದಿತ್ತು. 72 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್‌ ಈ ಬಾರಿ 62 ಸೀಟ್‌ಗಳಿಗೆ ಕುಸಿಯುವ ಸಾಧ್ಯತೆ ಇದೆ.

ಈ ಬಾರಿ ಬಿಜೆಪಿ ಖಾತೆ ತೆರೆಯುವ ಸೂಚನೆಯೂ ಈ ರಾಜ್ಯದಲ್ಲಿ ಕಂಡು ಬಂದಿದ್ದು, ಎರಡು ಕ್ಷೇತ್ರಗಳಲ್ಲಿ ಕಮಲ ಅರಳಬಹುದೆಂದು ನಿರೀಕ್ಷಿಸಲಾಗುತ್ತಿದೆ.

ತಮಿಳುನಾಡಿನಲ್ಲಿ ಫೋಟೋ ಫಿನಿಶ್
ತಮಿಳುನಾಡಿನಲ್ಲಿ ಮತದಾನೋತ್ತರ ಸಮೀಕ್ಷೆಗಳು ಮಿಶ್ರ ಫಲಿತಾಂಶ ನೀಡುತ್ತಿದ್ದು, ಯಾವ ಪಕ್ಷ ಅಧಿಕಾರಕ್ಕೆ ಬರಬಹುದೆಂಬುವುದನ್ನು ನಿಖರವಾಗಿ ಹೇಳುವಲ್ಲಿ ಎಲ್ಲ ಸಮೀಕ್ಷೆಗಳು ವಿಫಲವಾಗಿವೆ.

ಜಯಲಲಿತಾ ನೇತೃತ್ವದ ಎಐಎಡಿಎಂಕೆ ಮತ್ತು ಕರುಣಾನಿಧಿ ನೇತೃತ್ವದ ಡಿಎಂಕೆ ನಡುವೆ ನೆಕ್ ಟು ನೆಕ್ ಪೈಟ್ ನಡೆದಿದ್ದು, ಒಂದು ಸಮೀಕ್ಷೆಯಲ್ಲಿ ಅಮ್ಮನ ಗೆಲವನ್ನು ನಿರೀಕ್ಷಿಸುತ್ತಿದ್ದರೆ, ಮತ್ತೊಂದು ಸಮೀಕ್ಷೆ ಕಷ್ಟವೆಂದು ಹೇಳುತ್ತಿದೆ.

ಪುದುಚೆರಿಯಲ್ಲಿ ಕಾಂಗ್ರೆಸ್ ಪತಾಕೆ
ಒಟ್ಟು 30 ಸದಸ್ಯ ಬಲದ ಪುದುಚೆರಿ ಕೇಂದ್ರಾಡಳಿತ ಪ್ರದೇಶದಲ್ಲಿ ಕಾಂಗ್ರೆಸ್ 14 ಸೀಟ್‌ಗಳನ್ನು ಗೆಲ್ಲುವ ನಿರೀಕ್ಷೆ ಇದ್ದು, ಇದುವರೆಗೆ ಅಧಿಕಾರದಲ್ಲಿದ್ದ ಎಐಎನ್‌ಆರ್‌ಸಿ 9 ಕ್ಷೇತ್ರಗಳಲ್ಲಿ ಮಾತ್ರ ಗೆಲವು ಸಾಧಿಸಬಹುದೆಂದು ನಿರೀಕ್ಷಿಸಲಾಗುತ್ತಿದೆ. ಅಮ್ಮನ ಪಕ್ಷ ಇಲ್ಲಿ 5 ಕ್ಷೇತ್ರಗಳನ್ನು ಗೆಲ್ಲಬಹುದೆಂದು ಹೇಳಲಾಗುತ್ತಿದೆ.

ಎಕ್ಲಿಟ್ ಪೋಲ್ ಹೀಗಿದೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ