ಆ್ಯಪ್ನಗರ

ಅಯೋಧ್ಯೆ ವಿವಾದ: ಸಂಧಾನದ ಮಾತೇ ಇಲ್ಲ ಎಂದ ಮುಸ್ಲಿಂ ಕಕ್ಷಿದಾರರು

ಸುನ್ನಿ ವಕ್ಫ್ ಮಂಡಳಿಯು ಸಂಧಾನ ಸಮಿತಿ ಮೂಲಕ ವಿವಾದಿತ ಸ್ಥಳದ ಮೇಲಿನ ಹಕ್ಕು ಪ್ರತಿಪಾದನೆಯಿಂದ ಹಿಂದೆ ಸರಿಯುವ ಪ್ರಸ್ತಾವನೆ ಸಲ್ಲಿಸಿದೆ ಎಂಬ ವರದಿಗಳ ಬೆನ್ನಲ್ಲೇ ಮುಸ್ಲಿಂ ಕಕ್ಷಿದಾರರ ಪರ ವಾದಿಸುತ್ತಿರುವ ವಕೀಲ ಇಜಾಜ್‌ ಮಕ್ಬೂಲ್‌ ಈ ಸ್ಪಷ್ಟೀಕರಣ ನೀಡಿದ್ದಾರೆ.

Agencies 18 Oct 2019, 8:46 pm
ಹೊಸದಿಲ್ಲಿ: ಅಯೋಧ್ಯೆಯ ವಿವಾದಿತ ಭೂ ಪ್ರದೇಶದ ಒಡೆತನವನ್ನು ಹಿಂದೂ ಸಂಘಟನೆಗಳಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಸುನ್ನಿ ವಕ್ಫ್ ಮಂಡಳಿ ಹೊರತುಪಡಿಸಿ ಇತರ ಮುಸ್ಲಿಂ ಕಕ್ಷಿದಾರರು ಖಡಾಖಂಡಿತ ನಿಲುವು ವ್ಯಕ್ತಪಡಿಸಿದ್ದಾರೆ.
Vijaya Karnataka Web ayodhya controversy muslim parties say there is no talk of negotiation
ಅಯೋಧ್ಯೆ ವಿವಾದ: ಸಂಧಾನದ ಮಾತೇ ಇಲ್ಲ ಎಂದ ಮುಸ್ಲಿಂ ಕಕ್ಷಿದಾರರು


ಸುನ್ನಿ ವಕ್ಫ್ ಮಂಡಳಿಯು ಸಂಧಾನ ಸಮಿತಿ ಮೂಲಕ ವಿವಾದಿತ ಸ್ಥಳದ ಮೇಲಿನ ಹಕ್ಕು ಪ್ರತಿಪಾದನೆಯಿಂದ ಹಿಂದೆ ಸರಿಯುವ ಪ್ರಸ್ತಾವನೆ ಸಲ್ಲಿಸಿದೆ ಎಂಬ ವರದಿಗಳ ಬೆನ್ನಲ್ಲೇ ಮುಸ್ಲಿಂ ಕಕ್ಷಿದಾರರ ಪರ ವಾದಿಸುತ್ತಿರುವ ವಕೀಲ ಇಜಾಜ್‌ ಮಕ್ಬೂಲ್‌ ಈ ಸ್ಪಷ್ಟೀಕರಣ ನೀಡಿದ್ದಾರೆ. "ಸುನ್ನಿ ವಕ್ಫ್ ಮಂಡಳಿ ಈ ಪ್ರಸ್ತಾವ ಮಂಡಿಸಿರಬಹುದು, ನಾವಂತೂ ಸಂಧಾನ ಸಮಿತಿ ಮುಂದೆ ಇಂತಹ ಯಾವುದೇ ಪ್ರಸ್ತಾವ ಇರಿಸಿಲ್ಲ. ವಿವಾದ ನ್ಯಾಯಾಲಯದಲ್ಲಿಯೇ ಇತ್ಯರ್ಥವಾಗಲಿ ಎಂಬುದು ನಮ್ಮ ಸ್ಪಷ್ಟ ನಿಲುವು,'' ಎಂದೂ ಇಜಾಜ್‌ ತಿಳಿಸಿದ್ದಾರೆ.

ಸಂಧಾನ ಸಮಿತಿಯ ಮುಂದೆ ಅಯೋಧ್ಯೆ ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸುವ ನಿಟ್ಟಿನಲ್ಲಿ ನಮ್ಮ ನಿಲುವುಗಳನ್ನು ಸಲ್ಲಿಸಲಾಗಿದೆ. ವಿವಾದಿತ ಸ್ಥಳದ ಮೇಲಿನ ಹಕ್ಕು ಪ್ರತಿಪಾದನೆಯಿಂದ ಸುನ್ನಿ ವಕ್ಫ್ ಬೋರ್ಡ್‌ ಹಿಂದೆ ಸರಿಯಲು ನಾಲ್ಕು ಷರತ್ತುಗಳನ್ನು ಮುಂದಿಟ್ಟಿದೆ ಎಂಬ ವರದಿಗಳು ನಮಗೆ ಅಚ್ಚರಿ ತರಿಸಿವೆ. ಈ ಪ್ರಸ್ತಾವನೆಯನ್ನು ಸುನ್ನಿ ವಕ್ಫ್ ಬೋರ್ಡ್‌ ಬಿಟ್ಟರೆ ಬೇರೆಲ್ಲಾ ಮುಸ್ಲಿಂ ಕಕ್ಷಿದಾರರು ವಿರೋಧಿಸಿದ್ದಾರೆ ಎಂದೂ ವಕೀಲ ಇಜಾಜ್‌ ಮಕ್ಬೂಲ್‌ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಇಂತಹದ್ದೊಂದು ಸೋರಿಕೆಯ ಹಿಂದೆ ನಿರ್ಮೋಹಿ ಅಖಾಡದ ಕೈವಾಡವಿದೆ ಎಂದೂ ಅವರು ಆರೋಪಿಸಿದ್ದಾರೆ. ಮುಸ್ಲಿಂ ಕಕ್ಷಿದಾರರಲ್ಲಿ ಪ್ರಮುಖರಾಗಿರುವ ಎಂ. ಸಿದ್ದಿಕಿ ಪರವಾಗಿ ಮಕ್ಬೂಲ್‌ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ.

ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠ ಅಕ್ಟೋಬರ್‌ 16ರಂದು ವಿಚಾರಣೆ ಪೂರ್ಣಗೊಳಿಸಿದ್ದು, ಇದಕ್ಕೂ ಮೊದಲೇ ನಿವೃತ್ತ ನ್ಯಾಯಮೂರ್ತಿ ಎಫ್‌.ಎಂ.ಐ ಖಲೀಫುಲ್ಲಾ ನೇತೃತ್ವದ ತ್ರಿಸದಸ್ಯ ಸಂಧಾನ ಸಮಿತಿ ತನ್ನ ವರದಿ ಸಲ್ಲಿಸಿತ್ತು. ಯಾವೆಲ್ಲ ವಿಚಾರಗಳನ್ನು ನ್ಯಾಯಾಲಯವು ಗಣನೆಗೆ ತೆಗೆದುಕೊಳ್ಳಬೇಕು ಮತ್ತು ತಮ್ಮ ಬೇಡಿಕೆ ಏನು ಎಂಬ ಬಗ್ಗೆ ಲಿಖಿತ ಟಿಪ್ಪಣಿ ಸಲ್ಲಿಸಲು ಕಕ್ಷಿದಾರರಿಗೆ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ಪೀಠವು ಮೂರು ದಿನಗಳ ಕಾಲಾವಕಾಶವನ್ನೂ ನೀಡಿದೆ.

ಸಂಧಾನ ಸಮಿತಿಯು ಮೊಹರಾದ ಲಕೋಟೆಯಲ್ಲಿ ಸಂವಿಧಾನ ಪೀಠಕ್ಕೆ ಈ ಹಿಂದೆಯೇ ಸಲ್ಲಿಸಿದ ವರದಿಯಲ್ಲಿ ಮುಸ್ಲಿಂ ಹಾಗೂ ಹಿಂದೂ ಕಕ್ಷಿದಾರರು ಅಯೋಧ್ಯೆ ವಿವಾದ ಸೌಹಾರ್ದಯುತವಾಗಿ ಇತ್ಯರ್ಥವಾಗಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸುನ್ನಿ ವಕ್ಫ್ ಮಂಡಳಿ, ನಿರ್ವಾಣಿ ಅಖಾಡ, ನಿರ್ಮೋಹಿ ಅಖಾಡ, ರಾಮ ಜನ್ಮಭೂಮಿ ಪುನರುದ್ಧಾರ ಸಮಿತಿಗಳು ಸಂಧಾನದ ಪರವಾಗಿವೆ ಎಂದೂ ಸಮಿತಿ ವರದಿಯಲ್ಲಿ ತಿಳಿಸಿದೆ ಎನ್ನಲಾಗಿದೆ. ಜಾಗದ ಒಡೆತನವನ್ನು ಹಿಂದೂಗಳಿಗೆ ಬಿಟ್ಟುಕೊಡುವುದು ಸೂಕ್ತ ಎಂದು ಶಿಯಾ ವಕ್ಫ್ ಮಂಡಳಿ ಬಹಿರಂಗವಾಗಿಯೇ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ