ಅಂದಿನಿಂದ ಇಂದಿನವರೆಗೂ ಆದ ಕಾನೂನು ಹೋರಾಟಗಳೇ ಅಯೋಧ್ಯೆಯ ದೊಡ್ಡದೊಂದು ಐತಿಹಾಸಿಕ ಪ್ರಾಮುಖ್ಯತೆಯನ್ನು ಬಿಚ್ಚಿಡುತ್ತದೆ. ಅಯೋಧ್ಯೆ ವಿವಾದ ಬೆಳೆದುಬಂದದ್ದು ಹೇಗೆ? ಸಿಕ್ಕ ರಾಜಕೀಯ ತಿರುವುಗಳೇನು? ಕಾನೂನಾತ್ಮಕ ಹೋರಾಟಗಳೇನು ಎಂಬುದನ್ನು ಬಿಚ್ಚಿಡುವ ಪುಟ್ಟ ಪ್ರಯತ್ನ ಇಲ್ಲಿದೆ. ಇತಿಹಾಸ ಕಾಲದಲ್ಲಿ ನಡೆದ 10 ಅತಿಮುಖ್ಯ ಘಟನೆಗಳು, ಸನ್ನಿವೇಶ, ಸಂದರ್ಭಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ಸ್ಮರಿಸಲಾಗಿದೆ.
1 - ಹೋರಾಟದಲ್ಲಿ ರಾಜಕೀಯವಾಗಿ ಯಾರಿಗೆ ಲಾಭ? ಯಾರಿಗೆ ನಷ್ಟ?
ಶತಮಾನಗಳಿಂದ ಜಾರಿಯಲ್ಲಿದ್ದ ಅಯೋಧ್ಯಾ ಶ್ರೀರಾಮಮಂದಿರ ವಿವಾದ, ಸ್ವಾತಂತ್ರ್ಯಾ ನಂತರ ತೀವ್ರ ಸ್ವರೂಪವನ್ನೇ ಪಡೆದುಕೊಳ್ತು. ಭಾರತದ ಈವರೆಗಿನ ರಾಜಕೀಯದಲ್ಲಿ ಅತಿ ಹೆಚ್ಚು ಪರಿಣಾಮ ಬೀರಿರೋದೇ ಅಯೋಧ್ಯಾ ವಿವಾದ. ರಾಷ್ಟ್ರ ರಾಜಕಾರಣದಲ್ಲಿ ಅಂದಿನಿಂದ ಇಂದಿನವರೆಗೂ ಅಯೋಧ್ಯೆ ಕೇಂದ್ರ ಬಿಂದುವಾಗಿದೆ.
ಹಾಗೆ ನೋಡಿದ್ರೆ ಅಯೋಧ್ಯಾ ವಿವಾದದಲ್ಲಿ ರಾಜಕೀಯವಾಗಿ ಹೆಚ್ಚು ನಷ್ಟ ಅನುಭವಿಸಿದ್ದೇ ಕಾಂಗ್ರೆಸ್ ಅನ್ನೋದು ನಿರ್ವಿವಾದದ ಸಂಗತಿ. ಅದೇ ರೀತಿ ಅಯೋಧ್ಯಾ ವಿವಾದದಿಂದ ಅತಿ ಹೆಚ್ಚು ಲಾಭವಾಗಿದ್ದು ಬಿಜೆಪಿಗೆ..! 1984ರಲ್ಲಿ ಕೇವಲ ಇಬ್ಬರು ಲೋಕಸಭಾ ಸದಸ್ಯರನ್ನು ಹೊಂದಿದ್ದ ಬಿಜೆಪಿ, ಇಂದು ತಲುಪಿರುವ ಹಂತವನ್ನು ಗಮನಿಸಿದ್ರೆ, ಇದರಲ್ಲಿ ರಾಮಮಂದಿರದ ಕಾಣಿಕೆ ಅಪಾರವಾಗಿ ಎದ್ದು ಕಾಣುತ್ತೆ.
2 - ಬಾಬ್ರಿ ಮಸೀದಿ ನಿರ್ಮಾಣದೊಂದಿಗೇ ವಿವಾದ ಆರಂಭ..!
1528ನೇ ಇಸ್ವಿಯಲ್ಲಿ ಅಯೋಧ್ಯೆಯಲ್ಲಿ ಮೂಲ ರಾಮಮಂದಿರವನ್ನು ಕೆಡವಿಸಿದ್ದ ಮೊಗಲ್ ದೊರೆ ಬಾಬರ್, ಆ ಸ್ಥಳದಲ್ಲಿ ಬಾಬರಿ ಮಸೀದಿ ನಿರ್ಮಿಸಿದ ಎನ್ನುತ್ತದೆ ಇತಿಹಾಸ. ಆದ್ರೆ, ಈ ವಿವಾದದ ಕಾನೂನು ಹೋರಾಟ ಅಧಿಕೃತವಾಗಿ ಆರಂಭವಾಗಿದ್ದು ಮಾತ್ರ 1885ರಲ್ಲಿ. ಮಹಾನ್ ರಘುಬೀರ್ ದಾಸ್ ಎಂಬುವರು ಫೈಜಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡುವ ಮೂಲಕ, ಈ ಕಾನೂನು ಹೋರಾಟ ಶುರುವಾಯ್ತು.
ಆದ್ರೆ, ಆ ನಂತರದ ದಿನಗಳಲ್ಲಿ ಕಾನೂನು ಹೋರಾಟಕ್ಕಿಂತಾ ಹೆಚ್ಚಾಗಿ ಇದು ಧಾರ್ಮಿಕ ಹೋರಾಟ, ಕೋಮು ಸಾಮರಸ್ಯ ಕದಡುವ ಸನ್ನಿವೇಶವಾಗಿ ಮಾರ್ಪಡುತ್ತಿತ್ತೇ ಹೊರತು ಒಂದು ತಾರ್ತಿಕ ಅಂತ್ಯ ಕಂಡಿರಲಿಲ್ಲ. ಅಯೋಧ್ಯೆ ವಿವಾದ ತಲೆ ಎತ್ತಿದಾಗಲೆಲ್ಲಾ ಕಾನೂನು ಸುವ್ಯವಸ್ಥೆ ಕದಡುವ ಸನ್ನಿವೇಶಗಳು ಸೃಷ್ಟಿಯಾಗುತ್ತಿದ್ದವು.
3 - ಬಾಬರಿ ಮಸೀದಿ ರಕ್ಷಣೆಗೆ ಸಜ್ಜಾದ ಕ್ಷಣ..!
ಅಯೋಧ್ಯಾ ವಿವಾದದ ಕಾನೂನು ಸಮರ ಆರಂಭವಾದ ಬರೋಬ್ಬರಿ 100 ವರ್ಷಗಳ ಬಳಿಕ, ಅಂತೂ ಇಂತೂ ಬಾಬ್ರಿ ಮಸೀದಿ ಕಾರ್ಯ ಸಮಿತಿ ಅಸ್ಥಿತ್ವಕ್ಕೆ ಬಂತು..! 1986ರಲ್ಲಿ ಮೌಲ್ವಿಯೊಬ್ಬರು 2 ಸಾವಿರ ರೂ. ದೇಣಿಗೆ ನೀಡುವ ಮೂಲಕ ಈ ಸಮಿತಿ ಅಸ್ಥಿತ್ವಕ್ಕೆ ಬಂತು.
ಲಖನೌನ ಮುಸ್ಲಿಂ ಚಿಂತಕ ಅಲಿ ಮಿಯಾ ಅವರು ಮೊಟ್ಟ ಮೊದಲ ಬಾರಿಗೆ ಬಾಬ್ರಿ ಮಸೀದಿ ಉಳಿಸಿಕೊಳ್ಳುವ ಸಲುವಾಗಿ ಸಮಿತಿಯೊಂದನ್ನ ರಚಿಸಲು ಅಡಿಗಲ್ಲು ಹಾಕಿದರು. ಈ ಸಮಿತಿ ಬಾಬ್ರಿ ಮಸೀದಿಯನ್ನು ಉಳಿಸಿಕೊಳ್ಳುವ ಕಾನೂನು ಹೋರಾಟವನ್ನು ನಡೆಸುತ್ತಾ ಬಂತು.
4 - ರಾಮಮಂದಿರಕ್ಕಾಗಿ ಶುರುವಾಯ್ತು ಚಳವಳಿ..!
ಒಂದೆಡೆ ಕಾನೂನು ಹೋರಾಟ ನಡೆಯುತ್ತಿರುವ ಬೆನ್ನಲ್ಲೇ, ಮತ್ತೊಂದೆಡೆ, ರಾಜಕೀಯ ಹೋರಾಟ ಕೂಡಾ ನಡೆಯುತ್ತಿತ್ತು. ಅದು ಬ್ರಿಟಿಷ್ ಕಾಲದಿಂದ ಆರಂಭಗೊಂಡು ತೀರಾ ಇತ್ತೀಚಿನವರೆಗೂ ನಡೆಯುತ್ತಲೇ ಇತ್ತು.
ಆ ಹೋರಾಟದ ನೇತೃತ್ವ ವಹಿಸಿದ್ದವರು, ರಾಮಚಂದ್ರ ದಾಸ್, ಅಶೋಕ್ ಸಿಂಘಾಲ್ ಹಾಗೂ ಎಲ್. ಕೆ. ಅಡ್ವಾಣಿ. ಇದು ಕೇವಲ ಭೂ ವಿವಾದ ಮಾತ್ರವಲ್ಲ, ಧಾರ್ಮಿಕ ವಿವಾದದ ರೂಪವನ್ನೂ ಪಡೆಯಿತು.
5 - ದೇಶದ ಅತಿದೊಡ್ಡ ಕಾನೂನು ಸಮರವಿದು..!
ಬರೋಬ್ಬರಿ 160 ವರ್ಷಗಳ ಕಾಲ ನಡೆದ ಕಾನೂನು ಸಮರ ಇದು..! ಬ್ರಿಟಿಷರ ಆಳ್ವಿಕೆಯಲ್ಲಿ 90 ವರ್ಷ, ಸ್ವತಂತ್ರ್ಯ ಭಾರತದಲ್ಲಿ 70 ವರ್ಷಗಳ ಕಾಲ ಈ ಕಾನೂನು ಹೋರಾಟ ನಡೆದಿದೆ.
ಒಂದು ಸಣ್ಣ ಭೂಮಿಗಾಗಿ ನಡೆದ ಈ ಹೋರಾಟ, ಇಡೀ ದೇಶದ ಧಾರ್ಮಿಕ ಅಸ್ಮಿತೆಯ ಭಾಗವಾಗಿ, ರಾಜಕೀಯ ದಾಳವಾಗಿ ಪರಿವರ್ತನೆಯಾದ ಸನ್ನಿವೇಶವಿದು. ಈ ಎಲ್ಲಾ ಸಮರಕ್ಕೆ ಬ್ರೇಕ್ ಬಿದ್ದಿದ್ದು, 2019 ನವೆಂಬರ್ನಲ್ಲಿ..!
6 - ಬಾಬ್ರಿ ಮಸೀದಿ ಕೆಡವಿದವರಿಗೆ ಏನು ಶಿಕ್ಷೆ..?
ಇದೀಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಕಾನೂನು ಅವಕಾಶ ಕೊಟ್ಟಿದೆ. ಭೂಮಿ ಪೂಜೆಗೂ ಕ್ಷಣಗಣನೆ ಆರಂಭವಾಗಿದೆ. ಆದ್ರೆ, 27 ವರ್ಷಗಳ ಹಿಂದೆ ಇದೇ ಭೂಮಿಯಲ್ಲಿದ್ದ ಬಾಬ್ರಿ ಮಸೀದಿಯನ್ನು ಕೆಡವಿದವರಿಗೆ ಏನು ಶಿಕ್ಷೆ..?
ವಿಶೇಷ ಸಿಬಿಐ ಕೋರ್ಟ್ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಪ್ರಕರಣದ 49 ಆರೋಪಿಗಳ ಪೈಕಿ, ಈಗಾಗಲೇ ಹಲವರು ಮೃತಪಟ್ಟಿದ್ಧಾರೆ. ಬದುಕಿರುವ ಕೆಲವರು ಸಮಾಜದಲ್ಲಿ, ರಾಜಕೀಯವಾಗಿ ಖ್ಯಾತನಾಮರಾಗಿದ್ದಾರೆ..
7 - ರಾಮಮಂದಿರಕ್ಕೆ ಮೊದಲ ಅಡಿಗಲ್ಲು ಹಾಕಿದ್ದ ದಲಿತ ವ್ಯಕ್ತಿ..!
ಬಾಬ್ರಿ ಮಸೀದಿ ಧ್ವಂಸವಾಗುವ ಮೂರು ವರ್ಷಗಳ ಮುನ್ನ ಅಂದರೆ, 1989 ನವೆಂಬರ್ 9ರಂದೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದಲಿತ ವ್ಯಕ್ತಿಯೊಬ್ಬ ಮೊದಲು ಅಡಿಗಲ್ಲು ಹಾಕಿದ್ದ..! ಆತನ ಹೆಸರು ಕಮಲೇಶ್ವರ್ ಚೌಪಾಲ್.
ಆತ ಮೊದಲ ಅಡಿಗಲ್ಲು ಹಾಕಿದ ಮೂರು ವರ್ಷದ ಬಳಿಕ ಬಾಬ್ರಿ ಮಸೀದಿ ಧ್ವಂಸವಾಗಿ ಎಲ್ಲೆಡೆ ಅಶಾಂತಿ ನೆಲೆಸಿತು. ಪರಿಸ್ಥಿತಿಯೇ ಅಯೋಮಯವಾಯ್ತು. ಇದೀಗ ಕಾನೂನು ಹೋರಾಟ ಮುಗಿದಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಕಲವೂ ಸಜ್ಜಾಗಿದೆ.
8 - ‘ರಾಮ’ನ ಪರ ವಾದಿಸಿದ್ದ ಪರಾಶರನ್..!
ರಾಮ ತನ್ನ ಜನ್ಮಭೂಮಿಯನ್ನ ತನಗೆ ನೀಡುವಂತೆ ನ್ಯಾಯಾಲಯದಲ್ಲಿ ವಾದಿಸಿದ್ದ ಸಂದರ್ಭವದು..! ರಾಮನ ಪರವಾಗಿ ವಾದಿಸಿದ್ದು, 93 ವರ್ಷ ವಯಸ್ಸಿನ ಹಿರಿಯ ನ್ಯಾಯವಾದಿ ಪರಾಶರನ್..!
ರಾಮನ ಪರವಾಗಿ, ಆತನ ಜನ್ಮಭೂಮಿಯ ಪರವಾಗಿ, ಹಿಂದೂಗಳ ಪರವಾಗಿ ನಿವೃತ್ತ ಅಟಾರ್ನಿ ಜನರಲ್ ಪರಾಶರನ್ ವಾದಿಸಿದ್ದರು. ದೇಶದ ಕಾನೂನು ಇತಿಹಾಸದಲ್ಲಿ ವಾದ-ಪ್ರತಿವಾದ ಆರಂಭವಾದ ಕಾಲದಿಂದಲೂ ಹಿಂದೂಗಳ ಪರವಾಗಿ ಮೇಲುಗೈ ಸಾಧಿಸಿದ ವಕೀಲ ಪರಾಶರನ್..!
9 - ಬಾಬ್ರಿ ಮಸೀದಿ ಪರ 45 ವರ್ಷ ವಾದಿಸಿ ಸೋತಿದ್ದಕ್ಕೆ ಬೇಸರವಿಲ್ಲ..!
ವಕೀಲ ಝಫರ್ಯಾಬ್ ಗಿಲಾನಿ ಅವರು ಸುನ್ನಿ ವಕ್ಫ್ ಬೋರ್ಡ್ ಪರವಾಗಿ, ಬಾಬ್ರಿ ಮಸೀದಿ ಪರವಾಗಿ ಸತತ 45 ವರ್ಷಗಳ ಕಾಲ ಕಾನೂನೂ ಹೋರಾಟ ನಡೆಸಿದರು. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಕಣ್ಣು ಹಾಗೂ ಕಿವಿಯಾಗಿ ಗಿಲಾನಿಯವರು ಕೆಲಸ ಮಾಡಿದರು.
ಇಷ್ಟ ವರ್ಷಗಳ ಕಾಲ ಹೋರಾಟ ಮಾಡಿದರೂ ಕೂಡಾ ತೀರ್ಪು ರಾಮಮಂದಿರ ಪರವಾಗಿ ಬಂತು. ಆದ್ರೆ, ತಮ್ಮ ಕಾನೂನು ಹೋರಾಟ ವ್ಯರ್ಥವಾಗಲಿಲ್ಲ. ನನಗೆ ಬೇಸರವೂ ಇಲ್ಲ ಎನ್ನುತ್ತಾರೆ ಗಿಲಾನಿ.
10 - ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಕೊಟ್ಟ ಆ ದಿನ..!
ಅಯೋಧ್ಯೆಯ ವಿವಾದಿತ ಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು, ಅಯೋಧ್ಯೆಯಲ್ಲೇ ಪ್ರಮುಖ ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕೆ ಭೂಮಿ ನೀಡಬೇಕು ಎಂದು ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪಂಚ ನ್ಯಾಯಮೂರ್ತಿಗಳ ಪೀಠ ತೀರ್ಪು ನೀಡಿತು.
ನವೆಂಬರ್ 9, 2019ರಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ಅಂದಿನ ನ್ಯಾಯಮೂರ್ತಿಗಳಾಗಿದ್ದ ಎಸ್ಎ ಬೊಬ್ಡೆ, ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಎಸ್ಎ ನಝೀರ್ ಅವರಿದ್ದ ಪೀಠ ರಾಮಮಂದಿರ ನಿರ್ಮಾಣಕ್ಕೆ ಹಸಿರುನಿಶಾನೆ ತೋರಿತು. ಆನಂತರ ಸಲ್ಲಿಕೆಯಾದ ಮೇಲ್ಮನವಿ ಅರ್ಜಿಗಳೂ ತಿರಸ್ಕಾರವಾಗಿದ್ದವು. ಈ ಮೂಲಕ, ರಾಮಮಂದಿರ ನಿರ್ಮಾಣಕ್ಕೆ ಇದ್ದ ಎಲ್ಲ ಅಡೆತಡೆಗಳೂ ನಿವಾರಣೆಯಾಗಿದ್ದವು.