ಆ್ಯಪ್ನಗರ

ಪ್ರವಾಹಪೀಡಿತ ಕೇರಳದಲ್ಲಿ ದೇಗುಲ ಸ್ವಚ್ಛಗೊಳಿಸಿದ ಮುಸ್ಲಿಂ ಯುವಕರು

ವಯನಾಡು ಮತ್ತು ಮಲಪ್ಪುರಂಗಳಲ್ಲಿ ಪ್ರವಾಹಕ್ಕೆ ಸಿಲುಕಿ ಹಾನಿಗೊಂಡಿರುವ ದೇವಸ್ಥಾನಗಳನ್ನು ಮುಸ್ಲಿಂ ಯುವಕರ ತಂಡವು ಸ್ವಚ್ಛಗೊಳಿಸಿದೆ. ಈ ತಂಡದಲ್ಲಿರುವ ಯುವಕರಲ್ಲಿ ಹಲವರು ದೇವಸ್ಥಾನ ಶುಚಿಗೊಳಿಸುವ ದಿನ ಅರಾಫ್‌ ಉಪವಾಸ ವ್ರತದಲ್ಲಿದ್ದರು.

TIMESOFINDIA.COM 22 Aug 2018, 1:40 pm
ಮೂಲ ಸುದ್ದಿ: ಟೈಮ್ಸ್‌ ಆಫ್‌ ಇಂಡಿಯಾ, 22,ಆಗಸ್ಟ್‌ 2018
Vijaya Karnataka Web 1


ವಯನಾಡು:
ಕೇರಳದ ವಯನಾಡು ಮತ್ತು ಮಲಪ್ಪುರಂಗಳಲ್ಲಿ ಪ್ರವಾಹಕ್ಕೆ ಸಿಲುಕಿ ಹಾನಿಗೊಂಡಿರುವ ದೇವಸ್ಥಾನಗಳನ್ನು ಮುಸ್ಲಿಂ ಯುವಕರ ತಂಡವು ಸ್ವಚ್ಛಗೊಳಿಸಿದೆ. ಈ ತಂಡದಲ್ಲಿರುವ ಯುವಕರಲ್ಲಿ ಹಲವರು ದೇವಸ್ಥಾನ ಶುಚಿಗೊಳಿಸುವ ದಿನ ಅರಾಫ್‌ ಉಪವಾಸ ವ್ರತದಲ್ಲಿದ್ದರು.

ವೆನ್ನಿಯೋಡೆ ಶ್ರೀ ಮಹಾವಿಷ್ಣು ದೇಗುಲವು ವೆನ್ನಿಯೋಡಿ ನದಿಯ ಪ್ರವಾಹ ನುಗ್ಗಿ ನಲುಗಿತ್ತು. ಮುಕ್ಕಂನ ಮುಸ್ಲಿಮ್‌ ಯುವಕರ ತಂಡವು ದೇಗುಲದ ಕೆಸರು ತೆಗೆದು ಇಡೀ ಗೋಡೆ ಆವರಣ ಸಮೇತ ಸ್ವಚ್ಛಗೊಳಿಸಿದೆ. ದೇಗುಲ ಆಡಳಿತ ಸಮಿತಿಯ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಮುಸ್ಲಿಮ್‌ ಯುವಕರ ಈ ಕಾರ್ಯಕ್ಕೆ ಬಹಳಷ್ಟು ಮೆಚ್ಚುಗೆ ಸೂಚಿಸಿದ್ದಾರೆ.

ನಾವು ಮುಸ್ಲಿಮರು, ದೇವಸ್ಥಾನವನ್ನು ಸ್ವಚ್ಛಗೊಳಿಸಲು ನೆರವಾಗಬಹುದೇ ಎಂದು ದೇಗುಲದ ಆಡಳಿತಾಧಿಕಾರಿಗಳಲ್ಲಿ ಕೇಳಿದೆವು, ಅವರು ಒಪ್ಪಿದರು. ಯುದ್ಧ ಕಾಲ ಸೇರಿದಂತೆ ಪ್ರಾರ್ಥನಾ ಸ್ಥಳಗಳ ರಕ್ಷಣೆಗೆ ನೆರವಾಗುವುದು ಎಲ್ಲರ ಕರ್ತವ್ಯ ಎಂದು ಇಸ್ಲಾಂ ಹೇಳುತ್ತದೆ. ಈ ಪ್ರವಾಹವು ನಮ್ಮ ಪರೀಕ್ಷೆಯ ಕಾಲ ಎಂದು ತಂಡದಲ್ಲಿರುವ ಯುಎಇನಲ್ಲಿ ಎಂಜಿನಿಯರ್‌ ಆಗಿರುವ ಯುವಕ ನಜುಮುದ್ದೀನ್‌ ಹೇಳಿದ್ದಾರೆ.

ಮನ್ನಾರ್‌ಕಾಡ್‌ನಲ್ಲಿರುವ ಅಯ್ಯಪ್ಪ ದೇವಸ್ಥಾನವನ್ನು ಸಮಸ್ತ ಕೇರಳ ಸುನ್ನಿ ಸ್ಟುಡೆಂಟ್‌ ಫೆಡರೇಷನ್‌ನ ಇಪ್ಪತ್ತು ಮುಸ್ಲಿಂ ಯುವಕರ ತಂಡವು ಸ್ವಚ್ಛಗೊಳಿಸಿದೆ.

ಕೊಲ್ಪುಝದ ದೇವಸ್ಥಾನ ಕೂಡ ಪ್ರವಾಹ ನುಗ್ಗಿದ ಬಳಿಕ ನಾಲ್ಕು ದಿನ ಬಂದ್‌ ಆಗಿತ್ತು. ಅದನ್ನು ಸ್ವಚ್ಛಗೊಳಿಸುವಲ್ಲಿ ಮುಸ್ಲಿಂ ಯುವಕರ ಸೇವೆ ಶ್ಲಾಘನೀಯ, ಇಲ್ಲಿ ಜಾತಿ ಧರ್ಮ ಇರದೆ ಕೇವಲ ಒಗ್ಗಟ್ಟು ಮಾತ್ರವೇ ಇತ್ತು ಎಂದು ದೇವಸ್ಥಾನದ ಕಾರ್ಯದರ್ಶಿ ಗೋಪಾಲಕೃಷ್ಣನ್‌ ಹೇಳಿದ್ದಾರೆ.

ಈ ನಡುವೆ ಎಸ್‌ಡಿಪಿಐ ಸಂಘಟನೆಯ ಪರ ಒಲವುಳ್ಳವರು ಮುಸ್ಲಿಂ ಯುವಕರ ಈ ಕಾರ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಸಮಸ್ತ ಕೇರಳ ಸುನ್ನಿ ಸ್ಟುಡೆಂಟ್‌ ಫೆಡರೇಷನ್‌ನ ಮಹಾ ಕಾರ್ಯದರ್ಶಿ ಸತಾರ್‌ ಪಂತಲ್ಲೂರು ಇದು ಸ್ವಾಗತಾರ್ಹ ಕೆಲಸ, ಅದನ್ನು ವಿರೋಧಿಸುವ ಮೂಲಕ ಜನರಲ್ಲಿ ಒಡಕುಂಟು ಮಾಡುವವರ ನಡೆ ಖಂಡನೀಯ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ