ಆ್ಯಪ್ನಗರ

ಬೆಳಗಾವಿ ಗಡಿ ವಿವಾದ ಬಗೆಹರಿಸಲು ರಾಜ್ಯಪಾಲರಿಗೆ ಶಿವಸೇನೆ ಒತ್ತಾಯ

'ಸೂರ್ಯ-ಚಂದ್ರ ಇರುವವರೆಗೆ ಬೆಳಗಾವಿಯು ಕರ್ನಾಟಕದ ಭಾಗವಾಗಿಯೇ ಉಳಿಯಲಿದೆ,' ಎಂಬ ಕರ್ನಾಟಕದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನೀಡಿರುವ ಹೇಳಿಕೆ ಕುರಿತೂ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ.

Agencies 2 Nov 2020, 8:56 pm
ಮುಂಬಯಿ: ಬೆಳಗಾವಿಯಲ್ಲಿ ಮರಾಠಿ ಭಾಷಿಗರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಈ ಬಗ್ಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರು ಕರ್ನಾಟಕದ ರಾಜ್ಯಪಾಲರ ಜೊತೆ ಮಾತಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಶಿವಸೇನೆ ಆಗ್ರಹಿಸಿದೆ.
Vijaya Karnataka Web Bhagat Singh Koshyari


ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಮರಾಠಿಗರ ವಿರುದ್ಧದ ದಬ್ಬಾಳಿಕೆ ಬಗ್ಗೆ ಕಠಿಣ ಪದಗಳಲ್ಲಿ ಕರ್ನಾಟಕಕ್ಕೆ ಎಚ್ಚರಿಕೆ ನೀಡುವಂತೆ ರಾಜ್ಯಪಾಲರನ್ನು ಒತ್ತಾಯಿಸಲಾಗಿದೆ. "ಸೂರ್ಯ-ಚಂದ್ರ ಇರುವವರೆಗೆ ಬೆಳಗಾವಿ ಕರ್ನಾಟಕದ ಭಾಗವಾಗಿಯೇ ಉಳಿಯಲಿದೆ," ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಲಕ್ಷ್ಮಣ್‌ ಸವದಿ ನೀಡಿರುವ ಹೇಳಿಕೆ ಕುರಿತೂ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ.

"ಕರ್ನಾಟಕ-ಮಹಾರಾಷ್ಟ್ರ ನಡುವಿನ ಗಡಿ (ಬೆಳಗಾವಿ ಮತ್ತಿತರೆ ಪ್ರದೇಶಗಳು) ವಿವಾದ ಸದ್ಯ ಸುಪ್ರೀಂ ಕೋರ್ಟ್‌ ಅಂಗಳದಲ್ಲಿದೆ. ಕೋರ್ಟ್‌ ತೀರ್ಪು ನೀಡುವಾಗ ಆಕಾಶದಲ್ಲಿ ಸೂರ್ಯ, ಚಂದ್ರ ಇರುವ ಬಗ್ಗೆ ಖಾತ್ರಿಪಡಿಸಿಕೊಂಡು ಮುಂದುವರಿಯುವುದಿಲ್ಲ. ಈ ಸೂಕ್ಷ್ಮ ಸವದಿಯವರಿಗೆ ಗೊತ್ತಿಲ್ಲ," ಎಂದು ಪತ್ರಿಕೆ ಕಿಡಿಕಾರಿದೆ.

ಬೆಳಗಾವಿ ಮರಾಠಿಗರಿಗೆ ಬೆಂಬಲ ನೀಡುವ ದಿಸೆಯಲ್ಲಿ ನವೆಂಬರ್‌ 1ರ ಕನ್ನಡ ರಾಜ್ಯೋತ್ಸವ ದಿನವನ್ನು ಮಹಾರಾಷ್ಟ್ರ ಸಂಪುಟ ಸಚಿವರು ಕಪ್ಪುಪಟ್ಟಿ ಧರಿಸಿ ಕರಾಳ ದಿನವನ್ನಾಗಿ ಆಚರಿಸಿದರು. "ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯದಲ್ಲಿ ಎರಡೂ ರಾಜ್ಯಗಳ ನಡುವೆ ಬಲವಾದ ಬಾಂಧವ್ಯ ಇದೆ. ಆದರೆ ಗಡಿ ವಿಷಯಕ್ಕೆ ಬಂದಾಗ ಕರ್ನಾಟಕದ ವರ್ತನೆ ಉದ್ಧಟಗೊಳ್ಳುತ್ತದೆ. ಬೆಳಗಾವಿಯಲ್ಲಿರುವ 20 ಲಕ್ಷ ಮರಾಠಿಕರನ್ನು ಹತ್ತಿಕ್ಕಲು ದಬ್ಬಾಳಿಕೆಯ ಅಸ್ತ್ರ ಪ್ರಯೋಗ ಮಾಡಲಾಗುತ್ತಿದೆ. ಇದು ಖಂಡನಾರ್ಹ. ಈ ಬಗ್ಗೆ ನಮ್ಮ ರಾಜ್ಯಪಾಲರು ಕರ್ನಾಟಕದ ರಾಜ್ಯಪಾಲರೊಂದಿಗೆ ಮಾತಾಡಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಬೇಕು. ಅದು ಆಗದಿದ್ದರೆ ಕನಿಷ್ಠ ಪಕ್ಷ ಬೆಳಗಾವಿಯ ಮರಾಠಿ ನಿಯೋಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಅವಕಾಶವನ್ನಾದರೂ ಕೊಡಿಸಬೇಕು," ಎಂದು ಶಿವಸೇನೆ ಒತ್ತಾಯಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ