ಆ್ಯಪ್ನಗರ

ಮರಾಠ-ದಲಿತ ಸಂಘರ್ಷ: ಇಂದು ಮಹಾರಾಷ್ಟ್ರ ಬಂದ್‌

ಭೀಮಾ ಕೋರೆಗಾಂವ್‌ ವಿಜಯೋತ್ಸವಕ್ಕೆ ಹಿಂಸೆಯ ತಿರುವು ಮುಂಬಯಿ ಸಹಿತ ಅರ್ಧ ಮಹಾರಾಷ್ಟ್ರ ಸ್ತಬ್ಧ * ಇಂದು ಬಂದ್‌ಗೆ ಕರೆ ಮುಂಬಯಿ: ಭೀಮಾ ಕೋರೆಗಾಂವ್‌ ವಿಜಯೋತ್ಸವಕ್ಕೆ ಸಂಬಂಧಿಸಿ ...

Vijaya Karnataka 3 Jan 2018, 10:20 am

ಮುಂಬಯಿ: ಭೀಮಾ ಕೋರೆಗಾಂವ್‌ ವಿಜಯೋತ್ಸವಕ್ಕೆ ಸಂಬಂಧಿಸಿ ಪುಣೆಯಲ್ಲಿ ಸೋಮವಾರ ಹುಟ್ಟಿಕೊಂಡ ಮರಾಠ-ದಲಿತ ಸಂಘರ್ಷ ಮಂಗಳವಾರ ರಾಜ್ಯದ ಇತರೆಡೆಗಳಿಗೂ ಹಬ್ಬಿದ್ದು, ಮುಂಬಯಿ, ಔರಂಗಾಬಾದ್‌ ಸೇರಿದಂತೆ ಹಲವೆಡೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಒಬ್ಬ ದಲಿತ ವ್ಯಕ್ತಿಯನ್ನು ಬಲಿ ಪಡೆದ ಈ ಘಟನೆ ರಾಜಕೀಯ ತಿರುವುಗಳನ್ನೂ ಪಡೆದುಕೊಂಡಿದ್ದು, ದಲಿತರ ಮೇಲಿನ ಹಿಂಸಾಚಾರ ಖಂಡಿಸಿ ಭಹರಿಪಾ ಬಹುಜನ ಮಹಾಸಂಘ(ಬಿಬಿಎಂ) ಬುಧವಾರ ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಿದೆ. ಮಹಾರಾಷ್ಟ್ರ ಡೆಮಾಕ್ರಟಿಕ್‌ ಫ್ರಂಟ್‌ ಸೇರಿದಂತೆ 250 ಸಂಘ-ಸಂಸ್ಥೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.

ಆಗಿದ್ದೇನು?

1818ರ ಜನವರಿ 1ರಂದು ಬ್ರಿಟಿಷ್‌ ಸೇನೆ ಎರಡನೇ ಪೇಶ್ವೆ ಬಾಜಿರಾವ್‌ನ ಮೇಲೆ ವಿಜಯ ಸಾಧಿಸಿದ ದ್ವಿಶತಮಾನೋತ್ಸವವನ್ನು ಆಚರಿಸಲು ಪುಣೆಯ ಭೀಮಾ ಕೋರೆಗಾಂವ್‌ನಲ್ಲಿ ನಡೆದ ಸಮಾವೇಶದ ವೇಳೆ ಸಂಘರ್ಷ ನಡೆದು ಒಬ್ಬ ವ್ಯಕ್ತಿ ಮೃತಪಟ್ಟಿದ್ದರು. ಸುಮಾರು 25ಕ್ಕೂ ಅಧಿಕ ವಾಹನಗಳನ್ನು ಬೆಂಕಿ ಹಾಕಿ ಸುಡಲಾಗಿತ್ತು. 50ಕ್ಕೂ ಹೆಚ್ಚು ವಾಹನಗಳಿಗೆ ಹಾನಿ ಮಾಡಲಾಗಿತ್ತು.

ಸಿಐಡಿ ತನಿಖೆಗೆ ಆದೇಶ: ಪುಣೆ ಹಿಂಸಾಚಾರ ಕುರಿತು ಸಿಎಂ ದೇವೇಂದ್ರ ಫಡ್ನವಿಸ್‌ ಸಿಐಡಿ ತನಿಖೆಗೆ ಆದೇಶಿಸಿದ್ದು, ಮೃತ ದಲಿತ ಯುವಕನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಪ್ರಕಟಿಸಿದ್ದಾರೆ.

ಯಾಕೆ ವಿಜಯೋತ್ಸವ?

ಪೇಶ್ವೆ ಮೇಲೆ ವಿಜಯ ಸಾಧಿಸಿದ ಬ್ರಿಟಿಷ್‌ ಸೇನೆಯಲ್ಲಿ ಅಂದು ಅಸ್ಪೃಶ್ಯ ಎಂದು ಪರಿಗಣಿತವಾಗಿದ್ದ ಮಹರ್‌ ಸಮುದಾಯದ ಯೋಧರೇ ಪ್ರಮುಖ ಸೈನಿಕರಾಗಿದ್ದರು. ಹಾಗಾಗಿ, 200ನೇ ವರ್ಷಾಚರಣೆಗೆ ದಲಿತರು ನಿರ್ಧರಿಸಿದ್ದರು. ಆದರೆ, ಇದಕ್ಕೆ ಮರಾಠರ ಪ್ರಬಲ ವಿರೋಧವಿತ್ತು. ಹೀಗಾಗಿ ಕೆಲವು ಸಂಘಟನೆಗಳು ದಲಿತರ ವಿಜಯೋತ್ಸವ ಮೆರವಣಿಗೆಯನ್ನು ತಡೆದಿದ್ದರು.

Vijaya Karnataka Web bhima koregaon battle
ಮರಾಠ-ದಲಿತ ಸಂಘರ್ಷ: ಇಂದು ಮಹಾರಾಷ್ಟ್ರ ಬಂದ್‌

***

ಬಿಜೆಪಿ-ಆರೆಸ್ಸೆಸ್‌ ನಮ್ಮ ದೇಶದ ಹೊಸ ಪೇಶ್ವೆಗಳು. ಭೀಮಾ ಕೋರೆಗಾಂವ್‌ ಹೋರಾಟದ ಸ್ಫೂರ್ತಿ ಪಡೆದು ದಲಿತರು ಬಲಪಂಥೀಯ ಸಂಘಟನೆಗಳ ವಿರುದ್ಧ ಧ್ವನಿ ಎತ್ತಬೇಕು. ನಮ್ಮ ಹೋರಾಟ ಶಾಂತಿಯುತವಾಗಿರಲಿ.

- ಜಿಗ್ನೇಶ್‌ ಮೇವಾನಿ, ಗುಜರಾತ್‌ ಶಾಸಕ

***

ಹಿಂಸಾಚಾರ: ರೈಲು, ವಿಮಾನ ಸೇವೆ ಸ್ಥಗಿತ

ದಲಿತ ಯುವಕನ ಹತ್ಯೆ ಖಂಡಿಸಿ ಮುಂಬಯಿ, ಔರಂಗಾಬಾದ್‌ ಸೇರಿದಂತೆ ಮಹಾರಾಷ್ಟ್ರದ ಹಲವು ಕಡೆ ಮಂಗಳವಾರ ಪ್ರತಿಭಟನೆ ನಡೆಯಿತು. ಕಲ್ಲು ತೂರಾಟ, ಬೆಂಕಿಯಿಂದ ಅಂಗಡಿಗಳು, ವಾಹನಗಳಿಗೆ ಹಾನಿಯಾಗಿದೆ. ಮುಂಬಯಿಯ ಚೆಂಬೂರ್‌, ವಿಕ್ರೋಲಿ, ಮನ್‌ಕುರ್ದ, ಗೋವಾಂಡಿ, ಕುರ್ಲಾ, ರಮಾಬಾಯಿ ಅಂಬೇಡ್ಕರ್‌ ನಗರದಲ್ಲಿ ಭಾರಿ ಹಿಂಸೆ ನಡೆದಿದೆ. ನಗರದ ಜೀವನಾಡಿಯಾಗಿರುವ ರೈಲು ಸಂಚಾರ ಸಂಜೆವರೆಗೂ ಸ್ತಬ್ಧಗೊಂಡಿದ್ದು, ಕೆಲವು ವಿಮಾನಗಳನ್ನೂ ರದ್ದುಪಡಿಸಲಾಯಿತು. ಮುಂಬಯಿಯಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

***

ಬಲಪಂಥೀಯರು ಕಾರಣ

ಸಂಭಾಜಿ ಬ್ರಿಗೇಡ್‌ ಆಯೋಜಿಸಿದ್ದ ವಿಜಯೋತ್ಸವಕ್ಕೆ ತಡೆಯೊಡ್ಡಿ ಗಲಭೆ ಸೃಷ್ಟಿಸಿದ್ದು ಬಲಪಂಥೀಯ ಸಂಘಟನೆಗಳು ಎಂದು ಬಿಬಿಎಂ ಮುಖ್ಯಸ್ಥ ಪ್ರಕಾಶ್‌ ಅಂಬೇಡ್ಕರ್‌ ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ