ಆ್ಯಪ್ನಗರ

ಯಾರದ್ದೋ ಅಭಿಪ್ರಾಯ ನಮಗೆ ಮುಖ್ಯವಲ್ಲ! ಪ್ರಶಾಂತ್‌ ಕಿಶೋರ್‌ ವಿರುದ್ಧ ನಿತೀಶ್‌ ಕುಮಾರ್‌ ಕಿಡಿ

ಬಿಹಾರದಲ್ಲಿ ಪ್ರಶಾಂತ್‌ ಕಿಶೋರ್‌ ಮತ್ತೆ ರಾಜಕೀಯ ತಂತ್ರಗಳನ್ನು ಉರುಳಿಸುತ್ತಿದ್ದಾರೆ. ಅದರ ಭಾಗವಾಗಿಯೇ ಗುರುವಾರ ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಕಳೆದ 15 ವರ್ಷಗಳಲ್ಲಿ ಅಭಿವೃದ್ಧಿ ಆಗಿಲ್ಲ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ನಿತೀಶ್‌ ಕುಮಾರ್‌ ಯಾರದ್ದೋ ಅಭಿಪ್ರಾಯ ನಮಗೆ ಮುಖ್ಯವಲ್ಲ ಎಂದು ಹೇಳುವ ಮೂಲಕ ಪಿಕೆಗೆ ತಿರುಗೇಟು ನೀಡಿದ್ದಾರೆ.

Authored byಅವಿನಾಶ ವಗರನಾಳ | Vijaya Karnataka Web 6 May 2022, 4:38 pm

ಹೈಲೈಟ್ಸ್‌:


  • ಯಾರದ್ದೋ ಅಭಿಪ್ರಾಯ ನಮಗೆ ಮುಖ್ಯವಲ್ಲ ಎಂದ ನಿತೀಶ್‌ ಕುಮಾರ್‌
  • ಪ್ರಶಾಂತ್‌ ಕಿಶೋರ್‌ ವಿರುದ್ಧ ಕಿಡಿಕಾರಿದ ಬಿಹಾರ ಸಿಎಂ ನಿತೀಶ್‌ ಕುಮಾರ್‌
  • ಕಳೆದ 15 ವರ್ಷ ಬಿಹಾರ ಅಭಿವೃದ್ಧಿಯಾಗಿಲ್ಲ ಎಂದಿದ್ದ ಪ್ರಶಾಂತ್‌ ಕಿಶೋರ್‌
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Nitish Kumar 1
ಪಾಟ್ನಾ: ಬಿಹಾರದಲ್ಲಿ ನಾವು ಒಳ್ಳೆಯದನ್ನು ಮಾಡಿದ್ದೇವೋ ಇಲ್ಲವೋ ಎಂಬುದು ನಿಮಗೆ ತಿಳಿದಿದೆ. ನಮಗೆ ಯಾರೊಬ್ಬರ ಅಭಿಪ್ರಾಯ ಮುಖ್ಯವಲ್ಲ. ಸತ್ಯ ಅಷ್ಟೇ ನಮಗೆ ಮುಖ್ಯ. ನಮ್ಮ ಕೆಲಸ ಜನರಿಗೆ ತಿಳಿದಿದೆ. ಯಾವ ಕೆಲಸ, ಎಷ್ಟು ಕೆಲಸ ಮಾಡಲಾಗಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ ಎಂದು ಬಿಹಾರ ಸಿಎಂ ನಿತೀಶ್‌ ಕುಮಾರ್‌ ಪ್ರಶಾಂತ್‌ ಕಿಶೋರ್‌ಗೆ ತಿರುಗೇಟು ನೀಡಿದ್ದಾರೆ.
ಬಿಹಾರದ ಕಳೆದ 15 ವರ್ಷಗಳ ಆಡಳಿತವನ್ನು ಚುನಾವಣಾ ಚತುರ ಪ್ರಶಾಂತ್‌ ಕಿಶೋರ್‌ ಟೀಕಿಸಿ, ಬಿಹಾರದ ಪುನರುಜ್ಜೀವನಕ್ಕಾಗಿ ಹೊಸ ಚಿಂತನೆ ಮತ್ತು ಹೊಸ ಪ್ರಯ‌ತ್ನ ತರುವ ಉದ್ದೇಶ ಘೋಷಿಸಿದ್ದರು. ಇದಾಗಿ ಮರುದಿನವೇ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಪ್ರಶಾಂತ್‌ ಕಿಶೋರ್‌ ಟೀಕೆಗಳನ್ನು ತಳ್ಳಿಹಾಕಿದ್ದು, ಅವರ ಅಭಿಪ್ರಾಯ ನಮಗೆ ಮುಖ್ಯವಲ್ಲ ಎಂದು ಹೇಳಿದ್ದಾರೆ.

ಕಳೆದ 15 ವರ್ಷ ಏನಾಗಿದೆ ಎಂಬುದು ನಿಮಗೆ ತಿಳಿದಿರುವ ಕಾರಣ, ಪ್ರಶಾಂತ್‌ ಕಿಶೋರ್‌ ಅವರಿಗೆ ಪ್ರತಿಕ್ರಿಯೆಯನ್ನು ನೀವೇ ನೀಡಬೇಕೆಂದು ನಾನು ವಿನಂತಿಸುತ್ತೇನೆ. ಯಾರಾದರೂ ಏನಾದರೂ ಹೇಳಿದಾಗ, ಅದಕ್ಕೆ ನಾವು ಪ್ರತಿಕ್ರಿಯಿಸಬೇಕು. ಆದರೆ, ಈ ಸಂದರ್ಭದಲ್ಲಿ ಅದನ್ನು ನೀವೇ ಮಾಡಬಹುದು. ಏಕೆಂದರೆ, ವಾಸ್ತವ ಏನೆಂದು ನಿಮಗೆ ತಿಳಿದಿದೆ ನಿತೀಶ್‌ ಕುಮಾರ್‌ ಹೇಳಿದರು.

ಗುರುವಾರ ಮಾತನಾಡಿದ್ದ ಪ್ರಶಾಂತ್‌ ಕಿಶೋರ್‌, ಲಾಲು ಪ್ರಸಾದ್‌ ಯಾದವ್‌ ಮತ್ತು ನಿತೀಶ್‌ ಕುಮಾರ್‌ ಅವರು ಬಿಹಾರವನ್ನು 30 ವರ್ಷ ಆಳಿದ್ದರೂ ಬಿಹಾರ ದೇಶದ ಅತ್ಯಂತ ಹಿಂದುಳಿದ ಮತ್ತು ಬಡ ರಾಜ್ಯವಾಗಿ ಉಳಿದಿರುವುದು ಸತ್ಯ ಎಂದು ಟೀಕಿಸಿದ್ದರು.

ಈಗ ರಾಜಕೀಯ ಪಕ್ಷ ಕಟ್ಟೊಲ್ಲ, ಪಾದಯಾತ್ರೆ ಮಾಡ್ತೇನೆ ಎಂದ ಪ್ರಶಾಂತ್ ಕಿಶೋರ್!
ಕಳೆದ 15 ವರ್ಷಗಳು ಬಿಹಾರಕ್ಕೆ ಒಳ್ಳೆಯದಾಗಿರಲಿಲ್ಲ ಎಂದು ಪ್ರಶಾಂತ್‌ ಕಿಶೋರ್‌ ತಮ್ಮ ಒಂದು ಕಾಲದ ರಾಜಕೀಯ ಪಕ್ಷದ ಮುಖ್ಯಸ್ಥ ನಿತೀಶ್‌ ಕುಮಾರ್‌ ವಿರುದ್ಧ ಕಿಡಿಕಾರಿದ್ದರು. ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಪಕ್ಷದ ಮೂಲಕ ಪ್ರಶಾಂತ್‌ ಕಿಶೋರ್‌ ರಾಜಕೀಯ ಆರಂಭಿಸಿದ್ದರು. ಪಕ್ಷದ ಉಪಾಧ್ಯಕ್ಷರಾಗಿದ್ದ ಅವರನ್ನು ವಜಾಗೊಳಿಸಲಾಗಿತ್ತು.

ಬಿಹಾರದಿಂದ ರಾಜಕೀಯ ಹೊಸ ಯಾತ್ರೆ ಶುರು : ಸುಳಿವು ನೀಡಿದ ಪ್ರಶಾಂತ್‌ ಕಿಶೋರ್‌, ಹೊಸ ಪಕ್ಷ ಸ್ಥಾಪನೆ?
ಅಭಿವೃದ್ಧಿಯ ಹೆಚ್ಚಿನ ಸೂಚ್ಯಂಕಗಳಲ್ಲಿ ಬಿಹಾರ ಇನ್ನೂ ಕೊನೆಯಲ್ಲಿ ಇದೆ. ಬಿಹಾರ ಮುಂದುವರಿದ ರಾಜ್ಯಗಳ ವರ್ಗಕ್ಕೆ ಸೇರಬೇಕಾದರೆ ಕಳೆದ 10 ರಿಂದ 15 ವರ್ಷಗಳು ಇದ್ದಂತೆ ಇದ್ದರೆ ನಾವು ಅಲ್ಲಿಗೆ ತಲುಪಲು ಸಾಧ್ಯವಿಲ್ಲ ಎಂದು ಪಿಕೆ ಹೇಳಿದ್ದರು. ರಸ್ತೆಗಳು, ಸೇತುವೆಗಳು ಮತ್ತು ಆರೋಗ್ಯ ರಕ್ಷಣೆಯಂತಹ ಮೂಲ ಸೌಕರ್ಯದ ಕ್ಷೇತ್ರದಲ್ಲಿ ನಿತೀಶ್ ಕುಮಾರ್ ಅವರು ಬಹಳಷ್ಟು ಕೆಲಸ ಮಾಡಿದ್ದಾರೆ. ಆದರೆ, ಬಿಹಾರ ಇನ್ನೂ ಕೆಳಮಟ್ಟದಲ್ಲಿರುವುದರಿಂದ ಬಹಳಷ್ಟು ಪ್ರಗತಿ ಮಾಡಬೇಕಾಗಿದೆ ಎಂದು ಪ್ರಶಾಂತ್‌ ಕಿಶೋರ್‌ ಪ್ರತಿಪಾದಿಸಿದ್ದರು.

ನಿತೀಶ್‌-ತೇಜಸ್ವಿ ಮತ್ತೆ ಇಫ್ತಾರ್‌ ಕೂಟದಲ್ಲಿ ಭಾಗಿ : ರಾಜಕೀಯ ವದಂತಿಗೆ ರೆಕ್ಕೆಪುಕ್ಕ
ಇನ್ನು, ನಿತೀಶ್ ಕುಮಾರ್ ಜೊತೆ ನನಗೆ ಯಾವುದೇ ವೈಯಕ್ತಿಕ ಜಗಳವಿಲ್ಲ. ನಮ್ಮಿಬ್ಬರ ಮಧ್ಯೆ ಬಹಳ ಒಳ್ಳೆಯ ಸಂಬಂಧವಿದೆ. ಆದರೆ, ವೈಯಕ್ತಿಕ ಸಂಬಂಧಗಳು ಬೇರೆ, ಒಟ್ಟಿಗೆ ಕೆಲಸ ಮಾಡುವುದು ಬೇರೆ. ಎರಡು ಕೂಡ ವಿಭಿನ್ನ. ನಿತೀಶ್ ಕುಮಾರ್ ಸಭೆಗೆ ಕರೆದರೆ ಹೋಗಬೇಕಾಗುತ್ತದೆ. ಆದರೆ, ನಾವು ಎಲ್ಲವನ್ನೂ ಒಪ್ಪುತ್ತೇವೆ ಮತ್ತು ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ಅರ್ಥವಲ್ಲ ಎಂದು ಪಿಕೆ ಹೇಳಿದ್ದರು.

ನಿತೀಶ್ ಕುಮಾರ್‌ ನನ್ನ ತಂದೆಯಂತೆಯೇ ಇದ್ದರು. ಆದರೆ, ನಾನು ಪ್ರತ್ಯೇಕ ರಾಜಕೀಯ ಪಯಣವನ್ನು ಹೊಂದಲು ಸಾಧ್ಯವಿಲ್ಲ ಎಂದು ಇದರ ಅರ್ಥವಲ್ಲ ಎಂದು ಪ್ರಶಾಂತ್‌ ಕಿಶೋರ್‌ ಹೇಳಿದ್ದರು. ಈ ಮೂಲಕ ಬಿಹಾರದಲ್ಲಿ ತಮ್ಮದೇ ರಾಜಕೀಯ ಪ್ರಯಾಣ ಆರಂಭಿಸುವ ಬಗ್ಗೆ ಸೂಚ್ಯವಾಗಿ ಗುರುವಾರ ಹೇಳಿದ್ದರು.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ