ಆ್ಯಪ್ನಗರ

ಸ್ವಯಂ ನಿವೃತ್ತಿ ಪಡೆದುಕೊಂಡ ಬಿಹಾರ ಡಿಜಿಪಿ, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ?

ಡಿಜಪಿ ಹುದ್ದೆಯಿಂದ ಕೆಳಗಿಳಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿರುವ ಗುಪ್ತೇಶ್ವರ್‌ ಪಾಂಡೆ, "ಯಾವ ರಾಜಕಾರಣಿಯೂ ನನ್ನನ್ನು ಭೇಟಿಯಾಗಲು ಬಂದಿಲ್ಲ. ನಾನು ಯಾವುದೇ ಪಕ್ಷ ಸೇರಿಲ್ಲ," ಎಂದಿದ್ದಾರೆ.

Vijaya Karnataka 23 Sep 2020, 7:47 pm
ಪಾಟ್ನಾ: ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದ ಬಿಹಾರ ಪೊಲೀಸ್‌ ಮಹಾನಿರ್ದೇಶಕ ಗುಪ್ತೇಶ್ವರ್‌ ಪಾಂಡೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿದ್ದಾರೆ ಎಂದುಕೊಳ್ಳಲಾಗಿದೆ.
Vijaya Karnataka Web Gupteshwar Pandey


ಸ್ವಯಂ ನಿವೃತ್ತಿ ಪಡೆದುಕೊಂಡಿರುವ ಅವರು ತಮ್ಮ ನಿರ್ಧಾರಕ್ಕೂ ಸುಶಾಂತ್‌ ಸಿಂಗ್‌ ರಜಪೂತ್‌ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಆದರೆ ಚುನಾವಣೆ ಸ್ಪರ್ಧೆ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ಅವರು ನೀಡಿಲ್ಲ.

ಪಾಂಡೆ ಸ್ವಯಂ ನಿವೃತ್ತಿಗೆ ಮನವಿ ಸಲ್ಲಿಸಿದ್ದರು. ರಾಜ್ಯ ಸರಕಾರ ಈ ಮನವಿಯನ್ನು ಒಪ್ಪಿಕೊಳ್ಳುವುದರೊಂದಿಗೆ ಪಾಂಡೆ ಡಿಜಿಪಿ ಹುದ್ದೆ ತೊರೆದಿದ್ದಾರೆ. ಹುದ್ದೆ ತೊರೆದ ಬಳಿಕ 3 ತಿಂಗಳ ಕಡ್ಡಾಯ ಕೋಲಿಂಗ್‌ ಆಫ್‌ ಅವಧಿ (ಮತ್ತೆ ಹುದ್ದೆಗೆ ಬರಲು ಇರುವ ಅವಕಾಶ)ಯನ್ನೂ ಮನ್ನಾ ಮಾಡಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಅವರು ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿವೆ.

ಡಿಜಿಪಿ ಹುದ್ದೆ ತೊರೆದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಪಾಂಡೆ, “ನಾನು ಈಗ ಸ್ವತಂತ್ರ ವ್ಯಕ್ತಿ. ನಾನು ಡಿಜಿಪಿ ವ್ಯಕ್ತಿ ಅಲ್ಲ. ನಾನು ನಿನ್ನೆ ವಿಆರ್‌ಎಸ್‌ ತೆಗೆದುಕೊಂಡಿದ್ದೇನೆ. ವಿವಿಧ ಜಿಲ್ಲೆಗಳಿಂದ ಜನರು ನನ್ನನ್ನು ಭೇಟಿಯಾಗಲು ಬರುತ್ತಿದ್ದಾರೆ. ಅವರ ಜೊತೆ ಚರ್ಚಿಸಿದ ನಂತರ ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ. ಯಾವ ರಾಜಕಾರಣಿಯೂ ನನ್ನನ್ನು ಭೇಟಿಯಾಗಲು ಬಂದಿಲ್ಲ. ನಾನು ಯಾವುದೇ ಪಕ್ಷ ಸೇರಿಲ್ಲ. ನಾನು ಸೇರಿದಾಗ ನಿಮಗೆಲ್ಲ ತಿಳಿಸುತ್ತೇನೆ,” ಎಂದಿದ್ದಾರೆ.

ಆದರೆ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿಲ್ಲ. ಹೀಗಾಗಿ ಅವರು ಬಿಹಾರ ವಿಧಾನಸಭೆ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ ಯಾವ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಬಕ್ಸರ್‌ ಜಿಲ್ಲೆಯ ಸಾಹ್‌ಪುರ್‌ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ 2009ರ ಲೋಕಸಭೆ ಚುನಾವಣೆ ಸಂದರ್ಭ ಅವರು ಬಕ್ಸರ್‌ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿ ಸ್ವಯಂ ನಿವೃತ್ತಿಗೆ ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ