ಆ್ಯಪ್ನಗರ

ಮಿದುಳು ಜ್ವರದಿಂದ ಮಕ್ಕಳ ಸಾವು: ಪ್ರತಿಭಟಿಸಿದ 39 ಪಾಲಕರ ವಿರುದ್ಧ ಕೇಸು ದಾಖಲಿಸಿದ ಬಿಹಾರ ಸರಕಾರ

ಸರಕಾರಗಳು ತೀವ್ರ ನಿರಾಸಕ್ತಿಯ ಕೂಪಕ್ಕೆ ಬಿದ್ದರೆ ಜನತೆಯ ಸಮಸ್ಯೆಗಳಿಗೆ ಹೇಗೆ ಕಿವುಡಾಗಿ, ಕುರುಡಾಗಿ ವರ್ತಿಸುತ್ತವೆ ಎಂಬುದಕ್ಕೆ ಬಿಹಾರ ಸರಕಾರವೇ ಉದಾಹರಣೆಯಾಗಿದೆ. ಮುಜಫರ್‌ಪುರ ಜಿಲ್ಲೆಯಲ್ಲಿ ತೀವ್ರ ಮಿದುಳು ಜ್ವರದಿಂದ 100ಕ್ಕೂ ಅಧಿಕ ಮಕ್ಕಳು ಮೃತಪಟ್ಟಿದ್ದು, ಮಕ್ಕಳನ್ನು ಕಳೆದುಕೊಂಡ ಪಾಲಕರು ಪ್ರತಿಭಟನೆ ನಡೆಸಿದರೆ ಸರಕಾರ ಅವರ ವಿರುದ್ಧ ಕೇಸು ದಾಖಲಿಸಿಕೊಂಡಿದೆ.

Times Now 25 Jun 2019, 5:12 pm
ಪಟನಾ: ಬಿಹಾರದಲ್ಲಿ ಎರಡು ವಾರಗಳಿಂದ ತೀವ್ರ ಮಿದುಳು ಜ್ವರದ ಸೋಂಕಿಗೆ ತುತ್ತಾಗಿ 100ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದರೂ ಅಧಿಕಾರಿಗಳು ಮತ್ತು ಸರಕಾರದ ಬೇಜವಾಬ್ದಾರಿ ವರ್ತನೆ ಬದಲಾಗಿಲ್ಲ. ಮಕ್ಕಳನ್ನು ಕಳೆದುಕೊಂಡು ಪ್ರತಿಭಟನೆ ನಡೆಸುತ್ತಿದ್ದ 39 ಪಾಲಕರ ವಿರುದ್ಧ ನಿತೀಶ್ ಕುಮಾರ್ ಸರಕಾರ ಕೇಸು ದಾಖಲಿಸಿಕೊಂಡಿದೆ.
Vijaya Karnataka Web Bihar Encephalitis


ಮಿದುಳು ಜ್ವರ ಸೋಂಕು ತಡೆಯುವಲ್ಲಿ ಸರಕಾರದ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ವರ್ತನೆ ಪ್ರತಿಭಟಿಸಿ ಮಕ್ಕಳನ್ನು ಕಳೆದುಕೊಂಡ ಪಾಲಕರು ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಅವರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಮುಜಫರ್‌ಪುರ ಜಿಲ್ಲೆಯಲ್ಲಿ ಒಟ್ಟಾರೆ 131 ಮಂದಿ ಮಿದುಳು ಜ್ವರದಿಂದ (ಅಕ್ಯೂಟ್ ಎನ್‌ಸೆಫಲೈಟಿಸ್ ಸಿಂಡ್ರೋಮ್- ಎಇಎಸ್) ಮೃತಪಟ್ಟಿದ್ದರು. ಅವರ ಪೈಕಿ 111 ಮಂದಿ ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟರೆ, 20 ಮಂದಿ ಕೇಜ್ರಿವಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಟೈಮ್ಸ್‌ ನೌ ವರದಿ ಪ್ರಕಾರ, ಸರಕಾರ ತಮ್ಮನ್ನು ತೀವ್ರವಾಗಿ ನಿರ್ಲಕ್ಷಿಸಿದೆ ಎಂಬ ಕಾರಣಕ್ಕೆ ಜನತೆ ಪ್ರತಿಭಟನೆಗಿಳಿಯುವುದು ಅನಿವಾರ್ಯವಾಯಿತು. ಮುಜಫರ್‌ಪುರದ ಜನತೆ ಮಿದುಳು ಜ್ವರದ ಸೋಂಕಿನಿಂದ ಮಾತ್ರವಲ್ಲ, ಎರಡು ತಿಂಗಳಿಂದ ತೀವ್ರ ನೀರಿನ ಕೊರತೆಯಿಂದಲೂ ಬಳಲುತ್ತಿದ್ದಾರೆ.

ಕಳೆದ ವಾರ ಬಿಹಾರದಲ್ಲಿ ಮೊದಲ ಮಳೆ ಬಿದ್ದರೂ ಕುಡಿಯುವ ನೀರಿನ ಸಮಸ್ಯೆ ನೀಗುವಷ್ಟು ಮಳೆಯಾಗಿಲ್ಲ. ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರೂ ನೀರಿನ ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನತೆ ದೂರಿದ್ದಾರೆ.

ಮಿದುಳು ಜ್ವರದಿಂದ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಜಫರ್‌ಪುರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ಅವರು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ಬಿಹಾರ ಆರೋಗ್ಯ ಸಚಿವ ಮಂಗಲ್ ಪಾಂಡೆ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ