ಆ್ಯಪ್ನಗರ

Woman Marries Sister in Law: 10 ವರ್ಷದ ಸಂಸಾರ ನಡೆಸಿ, ಗಂಡನ ತಂಗಿಯನ್ನೇ ಮದುವೆಯಾದ ಮಹಿಳೆ!: ಹೀಗೊಂದು ವಿಚಿತ್ರ ಪ್ರಕರಣ

Woman Marries Sister in Law In Bihar: ಗಂಡನ ಜತೆ 10 ವರ್ಷ ಸಂಸಾರ ನಡೆಸಿ, ಈಗ ಆತನ ತಂಗಿಯನ್ನೇ ಮಹಿಳೆ ಮದುವೆಯಾದ ವಿಚಿತ್ರ ಘಟನೆ ಬಿಹಾರದ ಸಮಷ್ಟಿಪುರದಲ್ಲಿ ವರದಿಯಾಗಿದೆ. ನಮ್ಮಿಬ್ಬರದೂ ನಿಷ್ಕಲ್ಮಶ ಪ್ರೀತಿ ಎಂದು ಆಕೆ ಹೇಳಿಕೊಂಡಿದ್ದಾಳೆ. ಆದರೆ ಈ ಘಟನೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

Authored byಅಮಿತ್ ಎಂ.ಎಸ್ | TIMESOFINDIA.COM 22 Feb 2023, 8:33 pm

ಹೈಲೈಟ್ಸ್‌:

  • 10 ವರ್ಷಗಳ ಹಿಂದೆ ಮದುವೆಯಾಗಿದ್ದ ಶುಕ್ಲಾ ದೇವಿ ಮತ್ತು ಪ್ರಮೋದ್ ದಾಸ್ ಜೋಡಿ
  • ಇಬ್ಬರು ಮಕ್ಕಳು ಮತ್ತು ಗಂಡನನ್ನು ತೊರೆದು ನಾದಿನಿ ಜತೆ ಸಂಸಾರ ಆರಂಭಿಸಿದ ಮಹಿಳೆ
  • ತನ್ನ ಸಂಗಾತಿಯನ್ನು ಗಂಬ ಮನೆಯವರು ಬಲವಂತವಾಗಿ ಎಳೆದೊಯ್ದಿದ್ದಾರೆ ಎಂದು ದೂರು

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Bihar woman marries sister-in-law
ಪಟನಾ: ಎರಡು ಮಕ್ಕಳ ತಾಯಿ, ತನ್ನ ಗಂಡನ ಸಹೋದರಿ ಜತೆಯೇ ಮದುವೆಯಾಗಿರುವ ವಿಚಿತ್ರ ಮತ್ತು ಕುತೂಹಲಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ತನ್ನ 'ಜೀವನ ಸಂಗಾತಿ'ಯನ್ನು ಅತ್ತೆ ಮಾವ ಅಪಹರಣ ಮಾಡಿದ್ದಾರೆ ಎಂದು ಮಹಿಳೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸಮಷ್ಟಿಪುರ ಜಿಲ್ಲೆಯ ರೋಸೆರಾ ಬ್ಲಾಕ್ ನಿವಾಸಿಯಾಗಿರುವ ಪ್ರಮೋದ್ ದಾಸ್‌ನನ್ನು ಮದುವೆಯಾಗಿದ್ದ 32 ವರ್ಷದ ಶುಕ್ಲಾ ದೇವಿ, ಮದುವೆ ಮುರಿದುಕೊಂಡಿದ್ದಳು. ಬಳಿಕ ಗಂಡನ ತಂಗಿ, 18 ವರ್ಷದ ಸೋನು ದೇವಿಯನ್ನು ಮದುವೆಯಾಗಿದ್ದಾಗಿ ಹೇಳಿಕೊಂಡಿದ್ದಾಳೆ.
Indias First Trans Couple Baby-ಭಾರತದ ಪ್ರಥಮ ಲಿಂಗತ್ವ ಅಲ್ಪಸಂಖ್ಯಾತ ದಂಪತಿಯ ಮಗು ಕೇರಳದಲ್ಲಿ ಜನನ

ಪ್ರಮೋದ್ ಮತ್ತು ಶುಕ್ಲಾ ದೇವಿ ದಂಪತಿ 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ ಸುಮಾರು ಆರು ತಿಂಗಳ ಹಿಂದೆ, ಶುಕ್ಲಾ ದೇವಿ ತನ್ನ ನಾದಿನಿಯನ್ನೇ ಮದುವೆಯಾಗಿ ಆಕೆಯ ಜತೆ ವಾಸಿಸಲು ಆರಂಭಿಸಿದ್ದಾಳೆ. ಈ ಮೂಲಕ ಎಲ್ಲ ಸಂಪ್ರದಾಯ, ರೀತಿ ರಿವಾಜುಗಳಿಗೆ ಬಹಿರಂಗ ಸವಾಲು ಹಾಕಿದ್ದಾಳೆ.

"ನಾವಿಬ್ಬರೂ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದೆವು. ಹೀಗಾಗಿ ನಾವು ಮದುವೆಯಾಗಿದ್ದೇವೆ" ಎಂದು ಶುಕ್ಲಾ ದೇವಿ ಸುದ್ದಿಗಾರರ ಮುಂದೆ ಹೇಳಿದ್ದಾರೆ.

ಈಗಾಗಲೇ ಮದುವೆಯಾಗಿ ಗಂಡ ಇರುವಾಗ ಯುವತಿಯನ್ನು ಮದುವೆಯಾಗಿರುವುದು ಏಕೆ ಎಂದು ಮಾಧ್ಯಮದವರ ಪ್ರಶ್ನೆಗೆ ಕಿಡಿಕಿಡಿಯಾದ ಶುಕ್ಲಾ ದೇವಿ, "ಆತ ನನ್ನ ಗಂಡ ಆಗಿದ್ದರೆ ಏನಂತೆ? ಎಲ್ಲಿ ಪ್ರೀತಿ ಇರುತ್ತದೆಯೋ ನಾವು ಅಲ್ಲಿ ಉಳಿದುಕೊಳ್ಳುತ್ತೇವೆ. ನಾವಿಬ್ಬರೂ ಮದುವೆಯಾದ ನಂತರ ಬಹಳ ಖುಷಿಯಾಗಿದ್ದೇವೆ" ಎಂದು ಹೇಳಿದ್ದಾಳೆ.
Teacher Changes Gender: ವಿದ್ಯಾರ್ಥಿನಿಯನ್ನು ಮದುವೆಯಾಗಲು ಶಿಕ್ಷಕಿಯಿಂದ ಲಿಂಗ ಪರಿವರ್ತನೆ!

"ಪ್ರೀತಿಯ ಮನೆಯೆಂದರೆ ಅದು ಹೃದಯ ಎಂದು ನಂಬಿದ್ದೇನೆ. ನಾವಿಬ್ಬರೂ ನಮ್ಮ ಹೃದಯದ ಆಳದಿಂದ ಪರಸ್ಪರ ಪ್ರೀತಿಸುತ್ತೇವೆ. ನಮ್ಮ ಹೃದಯದಲ್ಲಿ ಪರಿಶುದ್ಧ ಪ್ರೀತಿಯಲ್ಲದೆ ಹೊರತು ಬೇರೇನೂ ಇಲ್ಲ. ಸೋನಿ ಬಹಳ ಒಳ್ಳೆಯ ಗೆಳತಿ" ಎಂದು ತಿಳಿಸಿದ್ದಾಳೆ.

ತನ್ನ ಪತ್ನಿ ಮತ್ತು ತಂಗಿಯ ಈ 'ಸಂಸಾರ'ಕ್ಕೆ ತನ್ನ ಆಕ್ಷೇಪವಿಲ್ಲ ಎಂದು ಶುಕ್ಲಾ ದೇವಿ ಪತಿ ದಾಸ್ ತಿಳಿಸಿದ್ದಾನೆ. "ಅವಳು ಖುಷಿಯಾಗಿದ್ದರೆ ನಾನೂ ಸಂತಸದಿಂದ ಇರುತ್ತೇನೆ. ನನ್ನ ಹೆಂಡತಿಗೆ ನನ್ನ ತಂಗಿ ಮೇಲೆ ಪ್ರೀತಿ ಮೂಡಿತ್ತು. ಅದಾದ ಬಳಿಕ ಅವರಿಬ್ಬರೂ ಜತೆಯಾಗಿ ವಾಸಿಸಲು ಆರಂಭಿಸಿದ್ದಾರೆ" ಎಂದು ಹೇಳಿದ್ದಾನೆ.

ಗಂಡಿನಂತೆ ಬದಲಾದ ಶುಕ್ಲಾ ದೇವಿ
ಈ ಪ್ರಕರಣ ಇಬ್ಬರೂ ಮಹಿಳೆಯರು ಮದುವೆಯಾಗಿ, ಒಟ್ಟಿಗೆ ಸಂಸಾರ ಮಾಡುತ್ತಿರುವುದಕ್ಕೆ ಸೀಮಿತವಾಗಿಲ್ಲ. ಶುಕ್ಲಾ ದೇವಿ ತನ್ನ ಹೆಸರನ್ನು ಗಂಡಸಿನ ಹೆಸರನ್ನಾಗಿ ಬದಲಿಸಿಕೊಂಡಿದ್ದಾಳೆ. 'ನಾನು ಅವಳಲ್ಲ ಅವನು' ಎನ್ನುತ್ತಿರುವ ಆಕೆಯ ಈಗಿನ ಹೆಸರು ಸೂರಜ್ ಕುಮಾರ್. ಜತೆಗೆ ಸೋನುವಿಗೆ ತಾನು 'ಗಂಡ'ನೆಂಬ ಭಾವನೆ ಬರಲು ಕೂದಲನ್ನು ಸಣ್ಣದಾಗಿ ಕತ್ತರಿಸಿಕೊಂಡಿದ್ದಾಳೆ. ಗಂಡಸರಂತೆ ಉಡುಪುಗಳನ್ನು ಧರಿಸುತ್ತಿದ್ದಾಳೆ.
Bride Calls Off Marriage: ವರನಿಗೆ ದುಡ್ಡು ಎಣಿಸಲು ಬರುತ್ತಿಲ್ಲ ಎಂದು ಮದುವೆ ಮುರಿದ ವಧು

ಇಷ್ಟೇ ಅಲ್ಲ, ಲಿಂಗ ಪರಿವರ್ತನೆಗೂ ಶುಕ್ಲಾ ದೇವಿ ಚಿಂತನೆ ನಡೆಸಿದ್ದಳು. ಅದಕ್ಕಾಗಿ ಪ್ರಕ್ರಿಯೆ ಹೇಗೆ ಇರುತ್ತದೆ ಎಂದೆಲ್ಲ ಅಧ್ಯಯನ ಮಾಡಲು ಆರಂಭಿಸಿದ್ದಳು. ಆದರೆ ಲಿಂಗ ಪರಿವರ್ತನೆಗೆ ಕೆಲವು ಸರ್ಜರಿಗಳಿಗೆ ಒಳಗಾಗಬೇಕಾಗುತ್ತದೆ ಎಂಬುದನ್ನು ಕೆಲವು ವಿಡಿಯೋಗಳ ಮೂಲಕ ತಿಳಿದಾಗ ಆಕೆಯಲ್ಲಿ ಭಯ ಮೂಡಿತ್ತು. ಹೀಗಾಗಿ ಆ ಯೋಜನೆಯನ್ನು ಕೈಬಿಟ್ಟಿದ್ದಾಳೆ.

ಗಂಡನ ಮನೆಯವರ ವಿರುದ್ಧ ದೂರು
ಶುಕ್ಲಾ ಮತ್ತು ಸೋನು ಇಬ್ಬರೂ ಪ್ರತ್ಯೇಕವಾಗಿ ಮನೆ ಮಾಡಿಕೊಂಡು 'ಸುಖ ಸಂಸಾರ' ನಡೆಸುತ್ತಿದ್ದರು. ಆದರೆ ಸೋನುವಿನ ತಂದೆ ತಾಯಿ, ಅವರಿದ್ದ ಜಾಗಕ್ಕೆ ಬಂದು ಆಕೆಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿದ್ದಾರಂತೆ. ಇದರಿಂದ ಕೋಪಗೊಂಡ ಶುಕ್ಲಾ ದೇವಿ, ಗಂಡನ ಮನೆಯವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸ್ ಪ್ರಕರಣದಿಂದಾಗಿ ಇದು ಬೆಳಕಿಗೆ ಬಂದಿದೆ.

"ನಮಗೆ ಈ ಘಟನೆಯ ಬಗ್ಗೆ ಮಾಹಿತಿ ಇದೆ. ಪ್ರಕರಣದ ತನಿಖೆ ನಡೆಸುವಂತೆ ಮಹಿಳಾ ಅಧಿಕಾರಿಗೆ ಸೂಚಿಸಲಾಗಿದೆ. ವರದಿ ಆಧಾರದಲ್ಲಿ ನಾವು ಕ್ರಮ ಕೈಗೊಳ್ಳಲಿದ್ದೇವೆ" ಎಂದು ರೋಸೆರಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೃಷ್ಣ ಪ್ರಸಾದ್ ಮಂಗಳವಾರ ತಿಳಿಸಿದ್ದಾರೆ.

ಇಡೀ ಪ್ರಕರಣ ವಿವಾದಾತ್ಮಕವಾಗಿ ಕಾಣಿಸುತ್ತಿದೆ. ಔಪಚಾರಿಕ ತನಿಖೆ ನಡೆಸಿದರೆ ಸಾಕು ಸತ್ಯ ಹೊರಗೆ ಬರಲಿದೆ ಎಂದು ಅವರು ಹೇಳಿದ್ದಾರೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ