ಆ್ಯಪ್ನಗರ

ಬಿಜೆಪಿ ದಲಿತ ಮಂತ್ರ: ವೋಟು ಉಳಿಸಿಕೊಳ್ಳಲು ಬಿಎಸ್ಪಿ ಪ್ರತಿತಂತ್ರ

'ಗ್ರಾಮ ಸ್ವರಾಜ್ಯ ಅಭಿಯಾನ' ಸೇರಿದಂತೆ ದಲಿತ ಪರ ಉಪಕ್ರಮಗಳ ಮೂಲಕ 2019ರ ಲೋಕಸಭಾ ಚುನಾವಣೆಗಾಗಿ ದಲಿತರು ಮತ್ತು ಹಿಂದುಳಿದ ಸಮುದಾಯದ ಬೆಂಬಲ ಗಿಟ್ಟಿಸಲು ಬಿಜೆಪಿ ನಡೆಸುತ್ತಿರುವ ಕಸರತ್ತಿಗೆ ಅಡ್ಡಗಾಲು ಹಾಕಲು ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಪ್ರತಿತಂತ್ರ ರೂಪಿಸಿದೆ.

Vijaya Karnataka 30 Apr 2018, 9:30 am
ಲಖನೌ: 'ಗ್ರಾಮ ಸ್ವರಾಜ್ಯ ಅಭಿಯಾನ' ಸೇರಿದಂತೆ ದಲಿತ ಪರ ಉಪಕ್ರಮಗಳ ಮೂಲಕ 2019ರ ಲೋಕಸಭಾ ಚುನಾವಣೆಗಾಗಿ ದಲಿತರು ಮತ್ತು ಹಿಂದುಳಿದ ಸಮುದಾಯದ ಬೆಂಬಲ ಗಿಟ್ಟಿಸಲು ಬಿಜೆಪಿ ನಡೆಸುತ್ತಿರುವ ಕಸರತ್ತಿಗೆ ಅಡ್ಡಗಾಲು ಹಾಕಲು ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಪ್ರತಿತಂತ್ರ ರೂಪಿಸಿದೆ.
Vijaya Karnataka Web yogi


ಬಿಎಸ್ಪಿ ದಲಿತ ವೋಟ್‌ ಬ್ಯಾಂಕ್‌ಗೆ ಬಿಜೆಪಿಯಿಂದ ಹಾನಿಯಾಗದಂತೆ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಪದಾಧಿಕಾರಿಗಳಿಗೂ ಪಕ್ಷದ ವರಿಷ್ಠೆ ಮಾಯಾವತಿ ಸದ್ಯದಲ್ಲೇ ಸೂಚನೆ ನೀಡಲಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಬಿಜೆಪಿ ನಾಯಕರು ಗ್ರಾಮ ವಾಸ್ತವ್ಯ ಮತ್ತು ದಲಿತರ ಮನೆಯಲ್ಲಿ ಔತಣದ ಮೂಲಕ ಮತದಾರರ ಬೆಂಬಲ ಗಿಟ್ಟಿಸಲು ಪ್ರಯತ್ನ ನಡೆಸುತ್ತಿದ್ದು, ಈ 'ಕಾರ್ಯತಂತ್ರ'ದ ಬಗ್ಗೆ ನಿಗಾ ಇಡುವಂತೆ ಪಕ್ಷದ ಸಮನ್ವಯಕಾರÃರು, ಜನಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳಲ್ಲಿ ಬಿಎಸ್ಪಿ ಜಾಗೃತಿ ಮೂಡಿಸುತ್ತಿದೆ.

ಬಿಜೆಪಿ ಇತ್ತೀಚೆಗಷ್ಟೇ ಆರಂಭಿಸಿದ 'ಗ್ರಾಮ ಸ್ವರಾಜ್‌ ಅಭಿಯಾನ'ದ ಅಂಗವಾಗಿ ಶೇ. 50ರಷ್ಟು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಸಂಸದರು, ಕೇಂದ್ರ ಸಚಿವರು ಕನಿಷ್ಠ ಒಂದು ರಾತ್ರಿಯಾದರೂ ವಾಸ್ತವ್ಯ ಮಾಡಬೇಕೆಂದು ಸೂಚಿಸಲಾಗಿದೆ. ಅಂತಹ ಗ್ರಾಮದ ಎಲ್ಲಾ ಜನರಿಗೂ 'ಜನ ಧನ್‌ ಖಾತೆ', ಎಲ್‌ಪಿಜಿ ಸಂಪರ್ಕ, ವಿದ್ಯುತ್‌ ಸಂಪರ್ಕ ಮುಂತಾದ ಸರಕಾರದ ಯೋಜನೆಗಳು ತಲುಪುವಂತೆ ನೋಡಿಕೊಳ್ಳಲು ನಿರ್ದೇಶನ ನೀಡಲಾಗಿದೆ.

ಮುಂದಿನ ವರ್ಷ ಹಲವು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಮತ್ತು ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಗ್ರಾಮೀಣ ಭಾಗದ ಜನತೆ ಅದರಲ್ಲೂ ದಲಿತರ ಬಗ್ಗೆ ಬಿಜೆಪಿ ಅತೀವ ಕಾಳಜಿ ತೋರುತ್ತಿದೆ. 'ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯಿದೆ' ಕುರಿತ ಸುಪ್ರೀಂ ಕೋರ್ಟ್‌ ತೀರ್ಪನ್ನು ಮುಂದಿರಿಸಿಕೊಂಡು ಸರಕಾರವನ್ನು 'ದಲಿತ ವಿರೋಧಿ' ಎಂದು ಬಿಂಬಿಸಲು ಪ್ರತಿಪಕ್ಷಗಳು ನಡೆಸುತ್ತಿರುವ ಪ್ರಯತ್ನಕ್ಕೂ ತಕ್ಕ ತಿರುಗೇಟು ನೀಡುವುದು ಇದರ ಹಿಂದಿನ ಮತ್ತೊಂದು ಉದ್ದೇಶವಾಗಿದೆ.

ದಿಲ್ಲಿಯಲ್ಲಿ ಮಾಯಾವತಿ ಠಿಕಾಣಿ: ಬಿಎಸ್ಪಿ ವರಿಷ್ಠೆ ಮಾಯಾವತಿಯ ಅವರು ಪ್ರಸ್ತುತ ದಿಲ್ಲಿಯಲ್ಲಿ ಠಿಕಾಣಿ ಹೂಡಿದ್ದು, ವಿವಿಧ ನಾಯಕರೊಂದಿಗೆ ಸಭೆ ನಡೆಸಿ ಪಕ್ಷದ ಕಾರ್ಯತಂತ್ರ ರೂಪಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ತಿಂಗಳು ಉತ್ತರ ಪ್ರದೇಶಕ್ಕೆ ವಾಪಸಾಗಲಿರುವ ಮಾಯಾವತಿ, ಈ ಸಂಬಂಧ ಅಧಿಕೃತ ಆದೇಶ ಹೊರಡಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ